ಸಿಂದಗಿ: ಪ್ರಾಚೀನ ವಸ್ತು, ಕಲೆಗೆ ಹೆಸರವಾಸಿಯಾದ ಈ ದೇಶದ ಸಪ್ತ ಮೋಕ್ಷದಾಯಿನಿ ಸ್ಥಳಗಳಲ್ಲಿ ಒಂದಾದ ಕಂಚಿ ಹೆಸರಿನ ನಗರವು ಕೂಡಾ ಒಂದು! ಅದು ತಮಿಳುನಾಡು ರಾಜ್ಯದಲ್ಲಿದೆ. ಆದರೆ ಕರ್ನಾಟಕದಲ್ಲೂ ಈ ಪ್ರಸಿದ್ಧ ಕಂಚಿ ಪ್ರಾಚೀನ ವಸ್ತುಗಳಿಗೆ ಹೆಸರನ್ನು ನೆನಪಿಸುವ ಸಿಂದಗಿ-ಶಹಾಪುರ ರಾಜ್ಯ ಹೆದ್ದಾರಿ ಮೇಲಿರುವ ತಾಲ್ಲೂಕಿನ ಯಂಕಂಚಿ ಗ್ರಾಮ ಚಾರಿತ್ರಿಕ ಮಹತ್ವದ ದೇಗುಲ ಹೊಂದಿದ ಈ ಗ್ರಾಮವು ಪ್ರಸ್ತುತ ದಾವಲ್ ಮಲೀಕಸಾಬ್ ದರ್ಗಾಕ್ಕೆ ಸುಪ್ರಸಿದ್ಧವಾಗಿದೆ.
ಹೌದು, ಇಡೀ ದೇಶದ ಇತಿಹಾಸವನ್ನು ಸೃಷ್ಟಿಸಿದ ಐತಿಹಾಸಿಕ ಕ್ಷೇತ್ರ ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಅನೇಕ ಗ್ರಾಮಗಳಲ್ಲಿ ಪ್ರಾಚೀನ ಕಾಲಾವಧಿಯಲ್ಲಿನ ಶಿಲ್ಪಕಲೆಗಳು ಇತಿಹಾಸವನ್ನು ತಿಳಿಸಿಕೊಡುತ್ತಿರುವಂತೆ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಪ್ರಸಿದ್ಧ ದರ್ಗಾವಲ್ಲದೇ ಊರಿನ ಪ್ರಾಚೀನ ಚರಿತ್ರೆಯನ್ನು ಸಾರುವ ಒಂದು ದೇಗುಲವು ಸಹ ಇದೆ. ದೇಗುಲ ಎಂದೇ ಕರೆಯಲ್ಪಡುವ ಈ ಪ್ರಾಚೀನ ದೇವಾಲಯವು ಬೇರೆ ಬೇರೆ ಕಾಲಾವಧಿಯಲ್ಲಿ ನಿರ್ಮಾಣಗೊಂಡ ದ್ವಿಕೂಟ ಮತ್ತು ತ್ರಿಕೂಟ ಮಾದರಿಯ ಸಂರಚನೆಗಳಿಂದ ಕೂಡಿದೆ. ದ್ವಿಕೂಟ ಮಾದರಿಯಲ್ಲಿರುವ ಒಳಭಾಗದಲ್ಲಿ ಎರಡು ಗರ್ಭಗೃಹಗಳಿದ್ದು, ಅವುಗಳ ಮುಂದೆ ಎರಡು ಅರ್ಧಕಂಬಗಳಿರುವ ತೆರೆದ ಅಂತರಾಳಗಳಿವೆ.
ಒಂದು ಗರ್ಭಗೃಹದಲ್ಲಿ ಶಿವಲಿಂಗವಿದ್ದರೆ, ಇನ್ನೊಂದು ಪ್ರವೇಶ ದ್ವಾರವಾಗಿ ಬದಲಾವಣೆಯಾಗಿದೆ. ಎರಡೂ ಬಾಗಿಲಿನ ಲಲಾಟದಲ್ಲಿ ಗಜಲಕ್ಷ್ಮಿಯನ್ನು ಕಾಣಬಹುದು. ನವರಂಗದಲ್ಲಿ ನಾಲ್ಕು ಸ್ತಂಭಗಳು ಹಾಗೂ ನಂದಿಯ ವಿಗ್ರಹ ಕಂಡುಬರುತ್ತದೆ. ಈ ದೇಗುಲದ ಒಳಭಿತ್ತಿಯಲ್ಲಿ ತೆರೆದ ಅಂತರಾಳ ಮಾದರಿಯ ರಚನೆಯಿದೆ. ಸದ್ಯ ಇದು ಇನ್ನೊಂದು ಗರ್ಭಗೃಹವಾಗಿ ಪರಿವರ್ತನೆಯಾಗಿದ್ದು, ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದ ಪ್ರವೇಶ ದ್ವಾರದಲ್ಲಿ ಕುಂಭ ಕಳಶಗಳ ಉಬ್ಬುಕೆತ್ತನೆಗಳು ಹಾಗೂ ಲಲಾಟದಲ್ಲಿ ಗಜಲಕ್ಷ್ಮಿಯನ್ನು ಕಂಡರಿಸಲಾಗಿದೆ. ವಾಸ್ತುಶೈಲಿಯ ಲಕ್ಷಣಗಳನ್ನಾಧರಿಸಿ ಈ ದೇವಾಲಯವು ರಾಷ್ಟ್ರಕೂಟರ ಕಾಲದ ರಚನೆ ಎಂಬ ಜನಾಭಿಪ್ರಾಯವಿದೆ.
ಈ ದ್ವಿಕೂಟ ದೇವಾಲಯದ ಮುಂದುಗಡೆ ಮೂರು ಗರ್ಭಗೃಹಗಳು, ತೆರೆದ ಅಂತರಾಳ ಹಾಗೂ ಸಭಾಮಂಟಪ ಒಳಗೊಂಡಿರುವ ರಚನೆಗಳಿವೆ. ಇವು ಬಹುಶಃ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿವೆ ಎಂದು ಹೇಳಲಾಗುತ್ತದೆ. ಮೂರೂ ಗರ್ಭಗೃಹಗಳು ಬರಿದಾಗಿದ್ದು, ಬಾಗಿಲುವಾಡಾವು ಗಜಲಕ್ಷ್ಮಿ ಹಾಗೂ ಶೈವ ದ್ವಾರಪಾಲಕರ ಉಬ್ಬುಶಿಲ್ಪಗಳಿಂದ ಕೂಡಿದೆ. ಸಭಾ ಮಂಟಪದಲ್ಲಿ ಚೌಕ ಹಾಗೂ ಗೋಲಾಕಾರದ ಕಂಬಗಳು ಕಂಡುಬರುತ್ತವೆ. ದೇಗುಲದ ಹೊರಭಿತ್ತಿಯಲ್ಲಿ ಯಾವುದೇ ಅಲಂಕಾರಿಕ ಕೆತ್ತನೆಗಳಿರದೇ ಸರಳವಾಗಿದೆ. ಈ ದೇವಾಲಯದ ಮೇಲೆ ಇತ್ತೀಚೆಗೆ ಹೊಸ ಕಟ್ಟಡವನ್ನು ನಿರ್ಮಿಸಲಾಗಿದ್ದು, ಅಕ್ಕಮಹಾದೇವಿ ಗುಡಿ ಎಂದು ಕರೆಯುತ್ತಾರೆ. ಹೀಗಾಗಿ ಇಡೀ ದೇಗುಲವು ಎರಡು ಅಂತಸ್ತಿನ ಕಟ್ಟಡ ಎಂಬಂತೆ ಕಾಣುತ್ತದೆ!
ಊರಿನ ಹನುಮಂತನ ಗುಡಿಯ ಮುಂಭಾಗದಲ್ಲಿ ರಸ್ತೆಯ ಬದಿಯಲ್ಲಿಯೇ ಪ್ರಾಚೀನ ಜೈನ ತೀರ್ಥಂಕರರ ಮೂರ್ತಿಯೊಂದಿದೆ. ಸುಮಾರು ಮೂರೂವರೆ ಅಡಿ ಎತ್ತರದ ಈ ಮೂರ್ತಿಯು ಪದ್ಮಾಸನ ಭಂಗಿಯಲ್ಲಿದೆ. ಸಂರಕ್ಷಣೆಯಿಲ್ಲದ ಪ್ರಯುಕ್ತ ಮೂರ್ತಿಯು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದೆ. ಊರಿನ ಅಗಸಿ ಬಳಿಯು ಪುರಾತನ ಅವಶೇಷಗಳು ಹರಡಿ ಬಿದ್ದಿವೆ ಇಂತಹ ಪ್ರಾಚೀನ ವಸ್ತುಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಪ್ರಚುರ ಪಡಿಸುವದು ಅತ್ಯವಶ್ಯಕವಾಗಿದ್ದು ಕಾರಣ ಪ್ರಾಚ್ಯವಸ್ತು ಇಲಾಖೆ ಇತ್ತ ಕಣ್ಣು ತೆರೆಯುವುದೇ ಎಂದು ಗ್ರಾಮೀಣ ಜನರ ಪ್ರಶ್ನೆಯಾಗಿದೆ.
ಹಿಂದೂ ಮುಸ್ಲಿಮರು ಎಂಬ ಭೇದವಿಲ್ಲದೇ ಸೌಹಾರ್ದತೆಯಿಂದ ದಿನನಿತ್ಯ ಅಸಂಖ್ಯಾತ ಭಕ್ತರು ಇಲ್ಲಿಯ ದಾವಲ್ ಮಲೀಕ್ ಸನ್ನಿಧಿಗೆ ಭೇಟಿ ನೀಡುವ ಸುಕ್ಷೇತ್ರದಲ್ಲಿ ಪ್ರಾಚೀನ ಇತಿಹಾಸವನ್ನು ಪ್ರಚುರ ಪಡಿಸುವ ಇಂತಹ ಅನೇಕ ಹಳೆ ಕಾಲದ ದೇಗುಲಗಳು ಈ ತಾಲೂಕಿನಲ್ಲಿದ್ದು ಅವುಗಳ ಸಂರಕ್ಷಣೆಯಲ್ಲಿ ಸರಕಾರ ಮುಂದಾಗಬೇಕು.
ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು ಹಿರೇಮಠ, ಯಂಕಂಚಿ
ಲೇಖನ – ಪಂಡಿತ ಯಂಪೂರೆ