ಗುರ್ಲಾಪೂರ: ಸಮೀಪದ ಇಟ್ನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾರ್ತಾಂಡ ಮಲ್ಲಯ್ಯ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಸಕಲ ಜೀವರಾಶಿಗಳ ಲೋಕ ಕಲ್ಯಾಣಕ್ಕಾಗಿ ಮಾರ್ತಾಂಡ ಮಲ್ಲಯ್ಯ ಆರಾಧಕರಾದ ಶ್ರೀ ಸಿದ್ಧೇಶ್ವರ ಶರಣರ ಸಾನ್ನಿಧ್ಯದಲ್ಲಿ ಹೋಮ ಹವನದ ಮಹಾಪೂಜೆ ನೇರವೆರಿಸಲಾಯಿತು.
ದಿನವಿಡಿ ಭಜನೆ ಚೌಡಕಿ ಪದ ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೋಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧೇಶ್ವರ ಶರಣರು ಮಾತನಾಡಿ, ಮಾನವ ಕುಲವೆಲ್ಲ ಒಂದೇ ಎಲ್ಲ ಧರ್ಮಗಳ ಸಂದೇಶಗಳು ಶಾಂತಿಯ ಮಂತ್ರಗಳು ಒಂದೆ ರೂಪದಾಗಿವೆ. ಭಾವೈಕ್ಯತೆ ಸಾಮರಸ್ಯ ಪರಸ್ಪರ ಸಹಕಾರದ ಜೀವನವೇ ಮನುಷ್ಯನ ಮೂಲ ತತ್ವವಾಗಿದೆ. ಇನ್ನೊಬ್ಬರ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಸಹಬಾಳ್ವೆಯಿಂದ ಬದುಕಿದಾಗ ಬದುಕಿಗೊಂದು ಅರ್ಥ ಬರುವದರ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯವಾಗುವುದು ಎಂದು ನುಡಿದರು.
ಮಧ್ಯಾಹ್ನ ಎಲ್ಲ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇಟ್ನಾಳ ಸವಸುದ್ದಿ, ಖನದಾಳ, ಮುಗಳಖೋಡ, ಗುರ್ಲಾಪೂರ, ಕಂಕಣವಾಡಿ, ಮೂಡಲಗಿ, ಹಿಡಕಲ್ ಹಾಗೂ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ಪುಣಿತರಾದರು.