ಹೌದು, ಸಂಬಂಧಗಳು ಅಂದ್ರ ಹ್ಯಾಂಗ್ ಇರ್ಬೇಕು ಅಂದ್ರೆ ಪ್ರೀತಿ, ವಿಶ್ವಾಸ, ನಂಬಿಕೆ, ವಾತ್ಸಲ್ಯಗಳ ಆಗರವಾಗಿರಬೇಕು. ಈ ಹಿಂದೆ ಸಂಬಂಧಗಳಿಗೆ ಸಾಕಷ್ಟು ಬೆಲೆ ನೀಡುತ್ತಿದ್ದ ಕಾಲ ಇಂದು ಮರೆಯಾಗಿದೆ. ಬದುಕಿನ ಮೌಲ್ಯಗಳು ಬದಲಾಗಿವೆ. ಒತ್ತಡದ ಬದುಕಂತಲೋ, ಅಥವಾ ಯಾರು ನಮಗೆ ಮುಖ್ಯರಲ್ಲವೆಂತಲೋ, ನಮ್ಮ ಸರಿಸಮಾನರು ಇಲ್ಲವೆಂತಲೋ ಯಾವ ಕಾರಣಕ್ಕಾಗಿಯೋ ತಿಳಿಯದು ಸಂಬಂಧಗಳು ಹಳಸುತ್ತಿವೆ. ಹಾಗಿದ್ದರೆ ಸಂಬಂಧಗಳು ಯಾಕೆ?
ಈ ಹಿಂದೆ ಹೀಗಿರಲಿಲ್ಲ. ಸಾಕಷ್ಟು ಸಂಬಂಧಗಳಿಗೆ ಬೆಲೆ ಕೊಡುವ ನಮ್ಮ ಪೂರ್ವಜರು ಹಬ್ಬ ಹರಿದಿನಗಳನ್ನು ಯಾಕೆ ಮಾಡ್ತಿದ್ರು ಅಂದ್ರೆ ಹಬ್ಬಗಳನ್ನ ಮಾಡಬೇಕು ಅಂತಲ್ಲ, ಆ ಹಬ್ಬದ ನೆಪದಲ್ಲಿ ನಮ್ಮವರು ಎಲ್ಲೇ ಇದ್ದರೂ ಬರ್ತಾರೆ ಅನ್ನೋ ಆಸೆಯಿಂದ ಹಬ್ಬಗಳನ್ನ ಮಾಡ್ತಿದ್ರು. ಹಾಗೆ ದುಡಿಮೆ ಹರಸಿ ಹೋದವರೆಲ್ಲರೂ ಎಲ್ಲೇ ಇದ್ದರೂ ಆ ಸಂದರ್ಭಕ್ಕೆ ಹಬ್ಬಕ್ಕೆ ಹಾಜರಿ ಆಗುತ್ತಿದ್ರು. ಸದಾ ಕಾಲ ನಮ್ಮವರೆನ್ನುವವರಿಗೆ ಪ್ರೀತಿ ಜಾರಿಯಲ್ಲಿ ಇರ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಯಾರಿಗೆ ಯಾರು ಬೇಕಿಲ್ಲ, ನಮ್ಮವರೆನ್ನುವ ಭಾವನೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. “ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.” ಎಂಬ ಗಾದೆ ಇತ್ತೀಚಿಗೆ ನಿಜವಾಗುತ್ತಿದೆ. ಮನೆಯೆಂಬ ಮರ ಮುರಿದು ಬೀಳುತ್ತಿದೆ. ಮನಸ್ಸೆಂಬ ಮಾರ್ಗ ಕವಲೊಡೆಯುತ್ತಿದೆ. ಈ ಹಿಂದೆ ಸಂಬಂಧಿಕರಲ್ಲಿ ಅಥವಾ ಆತ್ಮೀಯರಲ್ಲಿ ಯಾರಿಗಾದರೂ ಕಷ್ಟವೆಂದರೆ ಸಾಕು ಬಳಗವೇ ಕುಡುತ್ತಿತ್ತು ಆದರೆ ಪ್ರಸ್ತುತ ಹಾಗಿಲ್ಲ. ಅದೆಂತದೆ ಕೆಲಸವಿರಲಿ, ಅದೇನೇ ಇರಲಿ ನಮ್ಮವರಿನಿಸಿಕೊಂಡವರಿಗೆ ಸಮಯವೇ ಕೊಡದ್ದಿದ್ದರೆ ಎಷ್ಟೇ ಎತ್ತರ ಬೆಳೆದಿದ್ದರೂ ಅದಕ್ಕೆ ಅರ್ಥವೇ ಇಲ್ಲ. ಕನಿಷ್ಠಪಕ್ಷ ಯೋಗಕ್ಷೇಮವನ್ನು ವಿಚಾರಿಸುವಂತಹ ಸಂಬಂಧಗಳನ್ನ ಬೆಳೆಸಿಕೊಳ್ಬೇಕು ಅಥವಾ ಉಳಿಸಿಕೊಳ್ಬೇಕು. ಬದಲಿಗೆ ಸಂಬಂಧಗಳನ್ನೇ ಕಡಿದುಕೊಳ್ಳುವ ಸಂಬಂಧಗಳಾದರು ಯಾಕೆ. ಎಷ್ಟರಮಟ್ಟಿಗೆ ನಾವು ಬದಲಾಗುತ್ತಿದ್ದೇವೆ ಎಂದರೆ ಲೆಕ್ಕಕ್ಕೆ ಸಿಗದಷ್ಟು.
ಒಂದು ಸಣ್ಣ ಉದಾಹರಣೆ ನೋಡುವುದಾದರೆ ಹಿಂದೆ ಸಾಂಪ್ರದಾಯಿಕ ಮನೆಗಳಲ್ಲಿ ನಡುಮನೆಗಂಬ(ಕಂಬ)ಗಳೆಂದಿರುತಿದ್ದವು. ಅವುಗಳು ಕೇವಲ ಮನೆಗೆ ಮಾತ್ರ ಆಧಾರವೆಂದು ಹಿರಿಯರು ಭಾವಿಸಿರಲಿಲ್ಲ, ಬದಲಿಗೆ ಅವುಗಳನ್ನು ನಮ್ಮ ಪೂರ್ವಜರು, ಮನೆಯ ಯಜಮಾನರೆಂದು ತಿಳಿದಿದ್ದರು. ಏಕೆಂದರೆ ಅವರು ತಿಳಿವಳಿಕೆಯುಳ್ಳವರು. ಆದರೆ ಇಂದಿನ ಯುಗ ಪೀಳಿಗೆ ಅರೆಬರೆ ತಿಳುವಳಿಕೆ ಜೊತೆಗೆ ಮನೆಗೆ ಅಂತಹ ಆಧಾರಗಂಬಗಳನ್ನೇ ಇಡಿಸುವುದಿಲ್ಲ, ಆಧುನಿಕತೆಗೆ ತಕ್ಕಂತೆ ಮಾಡ್ರನ್ ಮನೆಗಳನ್ನು ವಿನ್ಯಾಸಗೊಳಿಸುತ್ತಿದ್ದು ಅವುಗಳಿಗೆ ಆಧಾರವೇ ಬೇಕಿಲ್ಲ. ಇದರರ್ಥ ಇಷ್ಟೇ ನಮಗೆ ನಮ್ಮ ಪೂರ್ವಜರ ಅಗತ್ಯವಿಲ್ಲ. ಇದರ ಒಟ್ಟು ಮೊತ್ತ ಅವರು ಬದುಕನ್ನು ಬದುಕಿನಂತೆ ಬದುಕಿ ಶತಾಯುಶಿಗಳಾಗಿದ್ದರು. ಆದರೆ ಇಂದಿನವರು ಅದೇ ಆಯುಷ್ಯವನ್ನು ಬದುಕಿನಲ್ಲಿ ಗಳಿಸದೆ ಕಳೆಯುತ್ತಿದ್ದಾರೆ .ಪೂರ್ವಜರ ಕಾಯಕದ ಹಿಂದೆ ಎಲ್ಲದಕ್ಕೂ ಒಂದು ಅರ್ಥವಿತ್ತು. ಇಂದಿನ ಅರ್ಥದ ಹಿಂದೆ ಅನರ್ಥವಿದೆ. ವಿಪರ್ಯಾಸ ಎಂದರೆ ಇದೆ ಇರಬಹುದು.
ಬಹುತೇಕ ಕೂಡು ಕುಟುಂಬಗಳು ಹೊಡೆದು ಚಿಕ್ಕ ಕುಟುಂಬಗಳಾಗಿ ಬದಲಾಗಿವೆ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವ ಕಾಲ ಹಿಂದೆಯಾಯ್ತು. ಅಜ್ಜಿ ತಾತನ ಬೆನ್ನೇರಿ ಮಕ್ಕಳು ಆನೆ ಬಂತೊಂದಾನೆ ಎಂದು ಆಡುವ ಕಾಲವೂ ಕಳೆದೋಯ್ತು. ಸಂಜೆ ಅಂಗಳದಲ್ಲಿಯೋ, ಜಗಲಿ ಮೇಲೋ ಕುಳಿತು ಕಥೆ, ಹಾಡು, ಪುರಾಣಗಳನ್ನು ಕೇಳುವ ಕಾಲವೂ ಮರೆತ್ತೋಯ್ತು. ಈಗ ಎಲ್ಲರ ಕೈಯ್ಯಲ್ಲೊಂದೊಂದು ಮೊಬೈಲ್ ಗಳಿವೆ. ಮೊಬೈಲ್ ನೋಡುತ್ತಾ ಕುಳಿತರೆ ಜಗವನ್ನೇ ಮರೆಯುವ ಕಾಲದಲ್ಲಿದ್ದೇವೆ. ಮನೆಯಲ್ಲಿ ವಯಸ್ಸಾದ ವ್ಯಕ್ತಿಗಳಿದ್ದು ಬೇಗ ಕರೆದರು ಎದ್ದು ಹೋಗಿ ಒಂದು ಗ್ಲಾಸ್ ನೀರು ಕೊಡದ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ. ಹಾಗಾದರೆ ನಾವೇನು ಜಾದೂ ಮೂಲಕ ಬಂದೇವಾ, ಒಮ್ಮಿಂದೊಮ್ಮೆಗೆ ಉದ್ಭವಿಸಿಬಿಟ್ಟೆವ ಇಲ್ಲ, ಇಲ್ಲವೇ ಇಲ್ಲ ನಾವು ನಮ್ಮ ಪೂರ್ವಜರ ನೆರಳಿನಿಂದ ಬಂದವರು. ನೆರಳು ಕತ್ತಲನ್ನೆ ಆಶ್ರಯಿಸಿದರೆ ನೆರಳಾದರೂ ಯಾರದೆಂದು ಹೇಗೆ ಅರ್ಥವಾಗುತ್ತದೆ ಇದು ಹಾಗೆಯೇ. ಇತ್ತೀಚಿನ ಸಂಬಂಧಗಳು ಲಾಭವನ್ನು ನೋಡುತ್ತವೆ ಹೊರತು ಪ್ರೀತಿ, ವಿಶ್ವಾಸ ನಂಬಿಕೆಗಳನ್ನ ಅಲ್ಲ. ಎಲ್ಲಿ ಕಷ್ಟವಿದ್ದಾಗ ಮಾತನಾಡಿಸಿದ್ರು ಸಾಕು ನಮ್ಮ ಬಳಿ ಏನನ್ನಾದರೂ ಕೇಳ್ತಾರೆ, ನಮ್ಮ ಆಶ್ರಯಕ್ಕಾಗಿ ಹವಣಿಸುತ್ತಾರೋ ಎನ್ನುವ ಆಲೋಚನೆಗಳನ್ನು ಹುಟ್ಟಿಸಿಕೊಳ್ಳುವ ಕಾಲವಿದು.
ನಮ್ಮವರಿನಿಸಿಕೊಂಡವರಿದ್ದಾರೆ ಎನ್ನುವ ನಿರೀಕ್ಷೆಯಲ್ಲೂ ಬದುಕಬಾರದು. ನಮ್ಮವರಿನಿಸಿಕೊಂಡವರೆಲ್ಲರೂ ಲಾಭಕ್ಕಾಗಿ ಹವಣಿಸುತ್ತಿದ್ದಾರೆ. ಇತ್ತೀಚಿನ ಸಂಬಂಧ, ಸ್ನೇಹ ಕೂಡ ನಾನು ಸಂಬಂಧ, ಸ್ನೇಹ ಬಯಸುವ ವ್ಯಕ್ತಿಯ ಬಳಿ ಆಸ್ತಿ, ಅಂತಸ್ತು ಇದೆಯಾ ಎಂಬುದನ್ನು ನೋಡಿಕೊಂಡೆ ಬಹುತೇಕ ಬಂಧಗಳು ಹುಟ್ಟಿಕೊಳ್ಳುತ್ತವೆ. ಅಲ್ಲೋ, ಇಲ್ಲೋ, ಎಲ್ಲೋ ಬೆರಳೆಣಿಕೆಯಷ್ಟು ಬಂಧಗಳು ಅವುಗಳನ್ನು ಲೆಕ್ಕಿಸದೆ ಪ್ರೀತಿ, ವಿಶ್ವಾಸ ನಂಬಿಕೆಯನ್ನು ಜೊತೆಯಿರಿಸಿಕೊಂಡು ಹುಟ್ಟುತ್ತವೆ. ಬಹುತೇಕ ಮಕ್ಕಳು ಅಪ್ಪ ಅಮ್ಮನ ಅಸ್ತಿಗಾಗಿ, ಅಣ್ಣ ತಮ್ಮಂದಿರು ತಮಗೆ ಬರುವ ಪಾಲಿಗಾಗಿ, ಸಂಬಂಧಿಕರು ನಮ್ಮಿಂದ ಆಗುವ ಲಾಭಕ್ಕಾಗಿ ಹೀಗೆ ಸಂಬಂಧಗಳು ನಿಂತಿವೆ. ಅದರ ನಡುವೆಯೂ ಸಂಬಂಧಗಳಿಗೆ ಬೆಲೆ ಕೊಡುವ ಬಂಧಗಳು ಇವೆ ಆದರೆ ಅವು ಕಡಿಮೆ.
ಅಪರೂಪಕ್ಕೆ ಯೋಗಕ್ಷೇಮ ವಿಚಾರಿಸಿದರು ಸಾಕು ಅವರೇ ನಮ್ಮವರು ಎನ್ನುವ ನಿರೀಕ್ಷೆ, ಭರವಸೆ ಇಟ್ಟುಕೊಂಡ ಬಂಧಗಳಿಗೆ ಎಂದಿಗೂ ನಿರಾಸೆ ಮಾಡಬೇಡಿ. ಅದರ ನಡುವೆ ರಕ್ತ ಸಂಬಂಧಗಳನ್ನು ಮೀರಿದ ಬಂಧಗಳು ಇರುತ್ತವೆ ಆದರೆ ಅದು ಯಾವುದೇ ಇರಲಿ ಆ ಬಂಧವನ್ನು ಅದರ ಜವಾಬ್ದಾರಿಯನ್ನು ನಿಭಾಯಿಸುವುದು ಒಂದು ಸವಾಲೆ ಸರಿ. ಮತ್ತೊಬ್ಬರ ನಂಬಿಕೆ ಅರ್ಹರಾಗುವುದೆಂದರೆ ಸುಲಭದ ಮಾತಲ್ಲ, ನಂಬಿಕೆ ಗಳಿಸುವುದು ಸುಲಭವಲ್ಲ ಅಂತಹ ನಂಬಿಕೆಯನ್ನು ಯಾರಾದರೂ ನಮ್ಮ ಮೇಲೆ ಇಟ್ಟಾಗ ಅದಕ್ಕೆ ಅರ್ಹರಾಗದೆಹೋದಾಗ ನಮ್ಮ ವ್ಯಕ್ತಿತ್ವವನ್ನು ನಾವೇ ಕಳೆದುಕೊಂಡಂತೆ. ಏನೇನು ಇಲ್ಲ ನಿಮ್ಮ ಬಳಿ ಎಂದಾಗ ನೀವು ಶೂನ್ಯವಾಗಿದ್ದಾಗ ನಿಮ್ಮ ಬದುಕಲ್ಲಿ ಯಾರಾದರೂ ಬಂದು ನಾನು ಇದೀನಿ ನಿನ್ನ ಬೆನ್ನ ಹಿಂದೆ ಎಂದು ಸಾಂತ್ವನ ಹೇಳುವ ನಮ್ಮವರು ಎನಿಸಿಕೊಂಡವರು ಯಾರಾದರೂ ಇದ್ದರೆ ಅವರಿಗೆ ಕೊನೆಯವರೆಗೂ ಋಣಿಯಾಗಿ ಇದ್ದುಬಿಡಿ. ನೀವು ಬದುಕಿನಲ್ಲಿ ಏನೋ ಕಳಿಸಿದ್ದೀರಿ ಎನ್ನುವುದಾದರೆ, ನೀವು ಏನನ್ನು ಗಳಿಸಿ ಇಟ್ಕೊಂಡಿದ್ದೀರಿ ಎನ್ನುವ ಸಮಯದಲ್ಲಿ ನಿಮಗೆ ಸಂಬಂಧಗಳನ್ನು ಬೆಸಿಯಲಿಕ್ಕೆ ಯಾರಾದರೂ ಬಂದರೆ ಖಂಡಿತವಾಗಿ ಅವರನ್ನು ನಿಮ್ಮ ಬಳಿಯು ಸೇರಿಸಬೇಡಿ ಸ್ವಾರ್ಥಕ್ಕಾಗಿ ಹುಟ್ಟಿಕೊಳ್ಳುವ ಬಂಧಗಳಾವುವು ಕೊನೆಯವರೆಗೂ ನಿಮ್ಮೊಟ್ಟಿಗೆ ಎಂದಿಗೂ ಉಳಿಯಲಾರವು. ಏನೂ ನಿರೀಕ್ಷೆ ಇರದೆ ಸದಾ ಪ್ರೀತಿ, ವಿಶ್ವಾಸ ನಂಬಿಕೆಯನ್ನ ಜಾರಿಯಲ್ಲಿರಿಸಿದ ಸಂಬಂಧಗಳನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ. ಯಾಕೆ ಗೊತ್ತ ಅಂತಹ ಅರ್ಹ ಬಂಧಗಳು ಈ ಆಧುನಿಕತೆಯಲ್ಲಿ ಸಿಗತ್ತೆ ಅಂದ್ರೆ ನಿಮ್ಮಂತಹ ಪುಣ್ಯವಂತರು ಯಾರು ಇಲ್ಲಬಿಡಿ. ಎಲ್ಲವೂ ಮೂರು ದಿನದ ಬದುಕು ಖುಷಿಯಿಂದ ಜೀವಿಸಬೇಕು. ಎಷ್ಟೇ ಗಳಿಸಿದರು, ಏನೇ ಖ್ಯಾತಿ ಹೊಂದಿದರೂ ಎಲ್ಲರೂ ಸೇರುವುದು ಒಂದೇ ಜಾಗಕ್ಕೆ ಮಣ್ಣಿನಿಂದ ಬಂದ ನಾವು ಮಣ್ಣಿಗೆ ಸೇರುತ್ತೇವೆ. ಬದುಕಿನಲ್ಲಿ ಏನೆಲ್ಲಾ ದಕ್ಕಿದೆಯೋ ಅದನ್ನ ಪ್ರಮಾಣಿಕವಾಗಿ ಸ್ವೀಕರಿಸಬೇಕು ಅಷ್ಟೇ ಜೀವನ. ಸಂಬಂಧಗಳನ್ನ ಕಡಿದುಕೊಳ್ಳೋಕೆ ಎಷ್ಟು ಸಮಯಬೇಕು ಕೇವಲ ಚಿಟಕಿ ಹೊಡೆದಷ್ಟು ಸಮಯವೂ ಆಗೋದಿಲ್ಲ ಅದೇ ಒಂದು ಬಂಧ ಬೆಸೆಯಬೇಕು, ಉಳಿಯಬೇಕು ಎಂದರೆ ಅಲ್ಲಿ ಪ್ರಾಮಾಣಿಕತೆ ಇರಲೇಬೇಕು. ನಮ್ಮ ಪ್ರೀತಿ ಪಾತ್ರರು ಒಂದು ಮಾತು ಏನೇ ಅಂದರು ಸುಧಾರಿಸಿಕೊಳ್ಳುವಂತಿರಬೇಕು ಇದು ಕೇವಲ ಒಂದು ಕಡೆಯಿಂದ ಆದ್ರೆ ಮಾತ್ರ ಸಾಲದು ಎರಡು ಕಡೆಯಿಂದಲೂ ಈ ಕೆಲಸ ಆದಾಗ ಆ ಬಂಧ ಗಟ್ಟಿಗೊಳ್ಳಲು ಸಾಧ್ಯ. ಇತ್ತೀಚೆಗೆ ಅಲ್ಲೆಲ್ಲೋ ತಲೆ ಅಲ್ಲಾಡಿಸುತ್ತ ಮೂಲೆಗೆ ಕುಳಿತ ಮುದಿ ಜೀವಗಳ ರೋದನೆ ಕೇಳೋರಿಲ್ಲ, ನನ್ನ ಮಗ ಚೆನ್ನಾಗಿರಲಿ ಅಂತಹ ಅಗದಿರಲು ಕಷ್ಟಪಡುತಕ್ಕಂತಹ ಅಪ್ಪ ಅಮ್ಮನ ಮಾತು ಕೇಳೋಕು ಮಕ್ಕಳಿಗೆ ಪುರುಸೊತ್ತಿಲ್ಲ, ಉತ್ತರದ ಬದುಕಿನಲ್ಲಿ ಹಣ ಆಸ್ತಿಯ ಬೆನ್ನತ್ತಿ ಹೊರಟ ದಂಪತಿಗಳಿಗೆ ಒಬ್ಬರಿಗೊಬ್ಬರು ಸಮಯ ಕೊಡಲು ಆಗುತ್ತಿಲ್ಲ, ಸಂಬಂಧಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಹೋಗಲು ಸಮಯವಿಲ್ಲ ಹೀಗೆ ಹೇಳ್ತಾ ಹೋದರೆ ನೂರೆಂಟು ಸಿಗುತ್ತವೆ. ಆದರೂ ನಾವೇನು ಕೊನೆಗೆ ನಮ್ಮೊಟ್ಟಿಗೆ ಒಯ್ತಿವಿ ಅನ್ನೋದೇ ಗೊತ್ತಿಲ್ಲ. ಕಷ್ಟಕ್ಕೂ ಆಗೋದು ಬೇಡ, ದುಃಖ ಆದಾಗ ಸಮಾಧಾನ ಮಾಡೋದು ಬೇಡ ಕನಿಷ್ಠ ಪಕ್ಷ ಹ್ಯಾಂಗ್ ಇದಿರಿ ಅಂತ ಕೇಳೋ, ಅದು ರಕ್ತ ಸಂಬಂಧವೇ ಆಗಬೇಕು ಅಂತಿಲ್ಲ, ಸಂಬಂಧ ಆದ್ರೂ ಇರಬೇಕು.
ಒಂದು ಉದಾ:ಮುತ್ತಿನಂತ ಮಾತು ಹೇಳಿದ ಸಿದ್ದೇಶ್ವರ ಸ್ವಾಮೀಜಿಗಳ ಅದ್ಭುತ ನುಡಿಗಳು ನೆನಪಾಗುತ್ತಲೇ ಇರುತ್ತವೆ ಏನೆಂದರೆ “ಸಂಬಂಧಗಳು ಅಂದ್ರ ಹ್ಯಾಂಗ್ ಇರ್ಬೇಕು ಗೊತ್ತೇನು!ಹ್ಯಾಂಗ್ ಇರ್ಬೇಕು ಅಂದ್ರ ಅಲ್ಲಲ್ಲಿ ಚೆಲ್ಲಿದ ಮುತ್ತುಗಳನ್ನು ಪೋಣಿಸೋ, ಬಿಡಿ ಹೂಗಳನ್ನ ಜೋಡಿಸೋ, ಹರಿದ ಹರಿವಿ ಹೊಲಿಯೋ ಸೂಜಿ ದಾರದ ಹಾಂಗ್ ಇರಬೇಕು. ಚುಚ್ಚೋದ್ ಸೂಜಿ ಗುಣ ಆದರೂ ಅದು ದಾರದ ಜೊತಿ ಸೇರಿ ಅವುಗಳಿಗೆ ಒಂದು ರೂಪ ಕೊಡ್ತದೆ” ಹೀಗೆ ಯಾವಾಗಲು ಒಡೆದ ಮನಸ್ಸುಗಳನ್ನ ಮನೆಯನ್ನು ಕೂಡಿಸಿ ಅವು ಕೂಡಿ ನಾವು ಬದುಕುವಾಂಗ ನಮ್ಮ ಸಂಬಂಧಗಳು ಇರಬೇಕು. ಹ್ಯಾಂಗ್ ಇರಬೇಕು ಸಂಬಂಧಗಳು ಅಂದ್ರ ನಾವು ಒಂದು ನಾವು ಅನ್ನುವಹಾಂಗ್ ಇರಬೇಕು.
ಡಾ ಮೇಘನ ಜಿ
ಉಪನ್ಯಾಸಕರು