ಅಜ್ಞಾನ, ಮೌಢ್ಯಗಳನ್ನು ತೊಲಗಿಸಲು ಶ್ರಮಿಸಿದ ಕಾಯಕನಿಷ್ಠ ಹೂಗಾರ ಮಾದಯ್ಯ–ಡಾ. ದಾನಮ್ಮ ಝಳಕಿ.
ಕಾಯಕವೇ ಪ್ರಧಾನವೆಂದು ಕಾಯಕನಿಷ್ಠೆಯಿಂದ ಶ್ರಮಿಸಿ ಸಮಾಜದಲ್ಲಿದ್ದ ಮೌಢ್ಯ ಆಚರಣೆ, ಅಜ್ಞಾನ,ಅಂಧಕಾರ, ಅಸಮಾನತೆಯನ್ನು ಹೋಗಲಾಡಿಸಲು ನಿಷ್ಠೆಯಿಂದ ದುಡಿದ ಶರಣರಲ್ಲಿ ಹೂಗಾರ ಮಾದಯ್ಯನವರು ಒಬ್ಬರು ಎಂದು ಸಾಹಿತಿ ಕರ್ನಾಟಕ ಪಬ್ಲಿಕ್ ಶಾಲೆ ಕೆ ಕೆ ಕೊಪ್ಪ ಶಾಲೆಯ ಪ್ರಾಚಾರ್ಯರು ಆದ ಡಾ. ದಾನಮ್ಮ ಝಳಕಿರವರು ಹೇಳಿದರು.
ರವಿವಾರ ದಿ 1ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಫ. ಗು.ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ ‘ಹೂಗಾರ ಮಾದಯ್ಯನವರ ಜಯಂತಿ’ಯಲ್ಲಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
ಜನಮಾನಸದಲ್ಲಿ ಆತ್ಮವಿಶ್ವಾಸ ತುಂಬುವ ದೂತನಂತಿದ್ದ ಮಾದಯ್ಯನವರು ಮಳೆ, ಗಾಳಿ,ಚಳಿ ಲಕ್ಷಿಸದೇ ದಿನಾಲು ದೇವರಿಗೆ ಅರ್ಪಿಸಲು ಹೂ, ಪತ್ರಿ, ಗರಿಕೆಗಳನ್ನು ಮನೆಮನೆಗೂ ತಲುಪಿಸುವ ಜೊತೆಗೆ ಆಗ ಸಮಾಜದಲ್ಲಿದ್ದ ಪ್ರತಿಯೊಬ್ಬರ ಮನೆಯ ಅಡಚಣೆಗಳು,ಒಡಕು,ತಪ್ಪು ತಿಳುವಳಿಕೆಗಳನ್ನು ಅರಿತು ಅನುಭವ ಮಂಟಪದಲ್ಲಿದ್ದ ಶರಣರ ಮಾರ್ಗದರ್ಶನ ಪಡೆದು ಎಂದಿಗೂ ತನ್ನ ಕಾಯಕವನ್ನು ಬಿಡದೆ ಸಮಾಜ ತಿದ್ದುವ ಸಮಾಜಕ್ಕೆ ಮಾರ್ಗದರ್ಶಿಯಾಗುವ ಕೆಲಸವನ್ನು ಸಹ ಮಾಡುತ್ತಿದ್ದ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಆದರೆ ಅವರ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲದಿರುವುದು ವಿಷಾದನೀಯ. ಈಗಿನ ಸಮಾಜದಲ್ಲಿ ಸರಕಾರ ಇಲ್ಲವೇ ಇನ್ನಿತರ ಸಂಘ-ಸಂಸ್ಥೆಗಳು ಕೊಡಮಾಡುವ ಉಚಿತ ಸೌಲಭ್ಯಗಳ ಅವಲಂಬನೆಯಿಂದ ನಾವು ಕಾಯಕನಿಷ್ಠೆಯಿಂದ ವಿಮುಖ ರಾಗುತ್ತಿದ್ದೇವೆ ಇದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸದಾಶಿವ ದೇವರಮನಿ ಮಾತನಾಡಿ, ನಿಷ್ಠೆಯಿಂದ ಕೆಲಸ ಮಾಡಿದ ಹೂಗಾರ ಮಾದಯ್ಯನವರಂತಹ ಅನೇಕ ಶರಣರನ್ನು ನಾವು ಮರೆತಿದ್ದೇವೆ ಅವರ ಕುರಿತಾದ ಮಾಹಿತಿಯನ್ನು ಹುಡುಕಿ ಅವರ ತತ್ವಗಳನ್ನು ಪ್ರಸಾರ ಮಾಡುವ ಕೆಲಸ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲಾ ಹೂಗಾರ ಸಮಾಜದ ಅಧ್ಯಕ್ಷ ಲಕ್ಷ್ಮಿಕಾಂತ ಗುರವ ಮತ್ತು ಸುಶೀಲಾ ಗುರವರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಂಕರ ಗುಡಸ, ವಿ.ಕೆ ಪಾಟೀಲ, ಶಿವಾನಂದ ತಲ್ಲೂರ,ಎಂ ವೈ ಮೆಣಸಿನಕಾಯಿ, ಮಲಗೌಡ ಪಾಟೀಲ, ಬಾಬು ತಿಗಡಿ, ಭರಮಪ್ಪ ಜೇವಣಿ, ಅಕ್ಕಮಹಾದೇವಿ ತೆಗ್ಗಿ, ವಿದ್ಯಾ ತಿಗಡಿ, ಸುವರ್ಣ ತಿಗಡಿ ಸೇರಿದಂತೆ ಶರಣರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಅಕ್ಕಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸಂಗಮೇಶ ಅರಳಿ ಸ್ವಾಗತಿಸಿದರು. ಸುರೇಶ ನರಗುಂದ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.