Homeಸುದ್ದಿಗಳುಗ್ರಾಮ ದೇವಿಯ ಸೇವೆ ಮಾಡಿದ್ದಕ್ಕೆ ನನಗೆ ಹೆಮ್ಮೆ, ತೃಪ್ತಿ ಇದೆ - ಶಾಸಕ ಬಾಲಚಂದ್ರ ಜಾರಕಿಹೊಳಿ

ಗ್ರಾಮ ದೇವಿಯ ಸೇವೆ ಮಾಡಿದ್ದಕ್ಕೆ ನನಗೆ ಹೆಮ್ಮೆ, ತೃಪ್ತಿ ಇದೆ – ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಜಿಲ್ಲೆಯಾಗುತ್ತದೆ – ರಾಘವೇಂದ್ರ ಉಪಾಧ್ಯಾಯರ ಜ್ಯೋತಿಷ್ಯ

ಗೋಕಾಕ – ಗೋಕಾವಿ ನೆಲದ ಶಕ್ತಿ ಪೀಠವಾಗಿರುವ ಮಹಾಲಕ್ಷ್ಮೀ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸುಂದರ ಯಾತ್ರಾ ಸ್ಥಳವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದೇವಿಯ ಕೆಲಸ ಮಾಡಿದ್ದರ ಬಗ್ಗೆ ಹೆಮ್ಮೆ, ತೃಪ್ತಿ ನನಗಿದೆ. ಗೋಕಾವಿ ನಾಡಿನಲ್ಲಿ ಹುಟ್ಟಿರುವುದಕ್ಕೆ ನನಗೆ ತುಂಬಾ ಖುಷಿಯಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಂತಸವನ್ನು ಹಂಚಿಕೊಂಡರು.

   ಬುಧವಾರದಂದು ಮಹಾಲಕ್ಷ್ಮೀ ದೇವಿಯ ರಥೋತ್ಸವಕ್ಕು ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ತಮ್ಮೊಂದಿಗೆ ಕೈ ಜೋಡಿಸಿದ ಸಕಲ ಮಹಾ ಜನತೆಗೆ ಕೃತಜ್ಞತೆಯನ್ನು ಸಲ್ಲಿಸಿದರು.

    ಸುಮಾರು ೫೦ ವರ್ಷಗಳ ಬಳಿಕ ಜೀರ್ಣೋದ್ಧಾರ ಮಾಡುವುದನ್ನು ಜಾತ್ರಾ ಕಮಿಟಿಯ ಹಿರಿಯರು ನಿಶ್ಚಯಿಸಿದರು. ಬರುವ ಜೂನ್ ತಿಂಗಳಲ್ಲಿ ಗ್ರಾಮ ದೇವತೆಯರ ಜಾತ್ರೆಯು ನಡೆಯುತ್ತಿರುವುದರಿಂದ ಅದಕ್ಕೂ ಮುನ್ನ ಮಹಾಲಕ್ಷ್ಮೀ ದೇವರುಗಳು ಮತ್ತು ಪರಿವಾರದ ಮೂರ್ತಿ ಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ಯೋಜನೆಗಳನ್ನು ಹಾಕಲಾಯಿತು. ಅನೇಕ ಸಭೆಗಳನ್ನು ನಡೆಸಲಾಯಿತು. ಜೀರ್ಣೋದ್ಧಾರ ಕೆಲಸಕ್ಕೆ ಎಲ್ಲರೂ ತನು ಮನ ಧನದಿಂದ ಸೇವೆ ಸಲ್ಲಿಸಿದ್ದಾರೆ. ಈ ಕೆಲಸವನ್ನು ನಾನೊಬ್ಬನೇ ಮಾಡಬಹುದಿತ್ತು. ಆದರೆ ಈ ದೇವಸ್ಥಾನದ ನಿರ್ಮಾಣದಲ್ಲಿ ಸಾರ್ವಜನಿಕ ಸಹ ಭಾಗಿತ್ವ ಅಗತ್ಯವಿದ್ದು, ಅದಕ್ಕಾಗಿ ಸಾರ್ವಜನಿಕರಿಂದ ವಂತಿಗೆ ಪಡೆಯಲಾಯಿತು. ಪ್ರತಿಯೊಬ್ಬರೂ ದೇಣಿಗೆ ನೀಡಿದರು. ದೇವಿಗೆ ಅರ್ಪಿಸಿದರು. ಇದರಿಂದ ನನಗೆ ತುಂಬಾ ಖುಷಿಯಾಯ್ತು. ಅಂದಾಜು ೧೩ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ರಥಗಳು ಸೇರಿ ಭವ್ಯವಾದ ಮೆರಕನಟ್ಟಿ ಮತ್ತು ಗುರುವಾರ ಪೇಟೆಯ ಮಹಾಲಕ್ಷ್ಮೀ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಗೋಕಾಕ ನಗರದ ಕೆಂಚಪ್ಪ ಮತ್ತು ವಿಠ್ಠಲ ಗೌಡರ ಅವರಿಗೆ ಇದನ್ನು ನಿರ್ಮಾಣ ಮಾಡಲು ಗುತ್ತಿಗೆ ನೀಡಲಾಯಿತು. ಇಡೀ ಗೋಕಾಕ ನಾಗರಿಕರು ಮೆಚ್ಚುವ ರೀತಿಯಲ್ಲಿ ಆಕರ್ಷಕವಾಗಿ ದೇವಸ್ಥಾನವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಗೌಡರ ಅವರ ಕಾರ್ಯಕ್ಕೆ ಪ್ರತಿಯೊಬ್ಬರೂ ಭೇಷ್ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಮಹಾಲಕ್ಷ್ಮೀ ದೇವಸ್ಥಾನವನ್ನು ಐತಿಹಾಸಿಕ ದೇವಾಲಯವಾಗಿ ಮಾರ್ಪಾಡು ಮಾಡುವ ಸೂಚನೆ ನೀಡಿದರು.

     ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬಂದರೆ ಗಣಪತಿ, ಈಶ್ವರ, ಆಂಜನೇಯ, ನಾಗದೇವ, ನವಗ್ರಹ ದೇವರುಗಳ ದರ್ಶನ ಆಗುತ್ತದೆ. ಜೊತೆಗೆ ಐದು ಪೂಜ್ಯನೀಯ ಗಿಡಗಳು ನವಗ್ರಹ ಪಕ್ಕದಲ್ಲಿ ಇದ್ದು ಇದು ಕೂಡ ವಿಶೇಷವಾಗಿದೆ. ಅಶ್ವತ್ಥ್ ಮರ, ಬಿಲ್ವಪತ್ರೆ, ಬನ್ನಿ ಗಿಡ, ಹತ್ತಿ ಮರ, ಬೇವಿನ ಮರಗಳು ತಾವೇ ಎದ್ದು ನಿಂತಿವೆ. ಇಲ್ಲಿ ದರ್ಶನ ಪಡೆದರೆ ನಿಮ್ಮ ಜೀವನವು ಪಾವನವಾಗುತ್ತದೆ. ಕಷ್ಟಗಳು ದೂರವಾಗುತ್ತವೆ. ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಅವರು ಹೇಳಿದರು. ಕೆ. ವಿ. ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರ ನೇತೃತ್ವದಲ್ಲಿ ಸುಮಾರು ೪೬ ಹೋಮ ಹವನ ಯಜ್ಞ ಯಾಗಾದಿಗಳು ನಡೆದಿವೆ. ಇಂಥ ಪೂಜೆ, ಪುನಸ್ಕಾರಗಳು ಇಲ್ಲಿಯವರೆಗೆ ಯಾರೂ ನೋಡಿಯೇ ಇಲ್ಲ. ಅಂಥ ಪೂಜೆಗಳು ನಮ್ಮಲ್ಲಿ ನಡೆದಿವೆ. ದೇವಿಯ ಆಶೀರ್ವಾದವೇ ಇದಕ್ಕೆಲ್ಲ ಕಾರಣವಾಗಿದೆ ಎಂದು ಹೇಳಿದರು.

       ದೇವಸ್ಥಾನವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇಬ್ಬರು ಬ್ರಾಹ್ಮಣ ಅರ್ಚಕರನ್ನು ನೇಮಿಸಿಕೊಂಡು ದೇವಿಯರ ಪೂಜೆಯನ್ನು ಮಾಡುತ್ತಾರೆ. ಪೂಜೆ ಮಾಡುವ ಸಲುವಾಗಿ ಎದ್ದಿರುವ ವಿವಾದಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೊಸ ಅರ್ಚಕನ್ನು ನಿಯೋಜಿಸಲು ಕ್ರಮ ಕೈಗೊಂಡಿರುವದಾಗಿ ಅವರು ಅರ್ಚಕರ ವಿವಾದಕ್ಕೆ ತೆರೆ ಎಳೆದರು.

      ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾ ಸ್ವಾಮಿಗಳು, ರಾಚೋಟೇಶ್ವರ ಶ್ರೀಗಳು, ಬಟಕುರ್ಕಿಯ ಶ್ರೀಗಳು,
ಕಪರಟ್ಟಿ ಬಸವರಾಜ್ ಹಿರೇಮಠ ಶ್ರೀಗಳು, ರಾಜ್ಯ
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಅಮರ ಜಾರಕಿಹೊಳಿ, ಸನತ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಅಭಿಷೇಕ ನಾಯಿಕ, ಮುಖಂಡ ಅಶೋಕ ಪೂಜಾರಿ,ಖ್ಯಾತ ಉದ್ಯಮಿ ಜೇ. ಎನ್. ಶೆಟ್ಟಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ವಿಕ್ರಮ ಅಂಗಡಿ, ಬಸವರಾಜ್ ಕಲ್ಯಾಣಶೆಟ್ಟಿ, ಜಾತ್ರಾ ಮಹೋತ್ಸವ ಸಮಿತಿಯ ಪ್ರಭಾಕರ್ ಚವ್ಹಾಣ್ ಅಡಿವೆಪ್ಪ ಕಿತ್ತೂರ, ಅಶೋಕ ಹೆಗ್ಗನ್ನವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರತಿ ದಿನವೂ ಹೋಮ, ಹವನ ಯಜ್ಞಗಳನ್ನು ಮಾಡುವ ಸಂದರ್ಭದಲ್ಲಿ ಉಡುಪಿ ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರು ಗೋಕಾಕ ಜಿಲ್ಲೆಯೆಂದೇ ಹೇಳುತ್ತಿದ್ದರು. ಅವರ ಬಾಯಿಂದ ನಮ್ಮ ಗೋಕಾಕ ಜಿಲ್ಲೆಯೆಂದು ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗೋಕಾಕ ಜಿಲ್ಲೆಯಾಗಿ ಘೋಷಣೆಯಾಗಲಿದೆ. ಜಿಲ್ಲಾ ಕೇಂದ್ರವಾದರೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಮೆಡಿಕಲ್ ಕಾಲೇಜು, ಎಂಜನಿಯರಿಂಗ್ ಕಾಲೇಜು ಸೇರಿದಂತೆ ಉನ್ನತ ದರ್ಜೆಯ ಶಿಕ್ಷಣವು ವಿದ್ಯಾರ್ಥಿಗಳಿಗೆ ಲಭಿಸಲಿದೆ. ಜ್ಯೋತಿಷ್ಯರು ನುಡಿದ ವಾಣಿಯು ಸತ್ಯವಾದರೆ ನಮ್ಮ ಗೋಕಾಕ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಾಲಚಂದ್ರ ಜಾರಕಿಹೊಳಿ, ಶಾಸಕರು ಅರಭಾವಿ

RELATED ARTICLES

LEAVE A REPLY

Please enter your comment!
Please enter your name here

Most Popular

close
error: Content is protected !!
Join WhatsApp Group