ಸವದತ್ತಿ– ತಾಲೂಕಿನ ಕರೀಕಟ್ಟಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ, ದೈಹಿಕ ಶಿಕ್ಷಣಾಧಿಕಾರಿ ವೈ.ಎಂ.ಶಿಂಧೆ, ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆಯವರ ನೇತೃತ್ವದಲ್ಲಿ ಕೋವಿಡ್ 19 ವಿಷಮ ಸ್ಥಿತಿಯಲ್ಲಿ ಶೈಕ್ಷಣಿಕವಾಗಿ ಭೌತಿಕ ತರಗತಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ಅಂತರ ನಿವಾರಿಸಲು ಸರ್ಕಾರವು ಪರ್ಯಾಯ ಶಿಕ್ಷಣ ಯೋಜನೆ ಜಾರಿಗೆ ತಂದಿದ್ದು ಸದರಿ ಕಾರ್ಯಕ್ರಮವು ಆನ್ಲೈನ್ ಮತ್ತು ಆಫ್ ಲೈನ್ ಮಾದರಿಯಲ್ಲಿ ಜಾರಿಯಲ್ಲಿದ್ದು ಕಾರ್ಯಕ್ರಮದ ಸಮರ್ಪಕ ಅನುಷ್ಠಾನ ಹಾಗೂ ಮಕ್ಕಳಿಗೆ ಕಲಿಕಾ ಫಲ ತಲುಪಿರುವುದನ್ನು ಖಾತ್ರಿಪಡಿಸಿಕೊಳ್ಳಲು ಮಕ್ಕಳ ಮನೆಗಳಿಗೆ ಭೇಟಿ ನೀಡಿದರು.
ವಿದ್ಯಾರ್ಥಿಗಳಾದ ಪ್ರವೀಣ ಬಸವರಾಜ ಬಾಗೋಜಿ. ಸೇವಂತಿ ಕರೆನ್ನವರ,ಮೇಘನಾ ಸೋಗಿ, ಜಯಶ್ರೀ ಗೊರವನಕೊಳ್ಳ ಸೇರಿದಂತೆ ವಿವಿಧ ಮಕ್ಕಳ ಮನೆಗಳಿಗೆ ಕೋವಿಡ್ ಸುರಕ್ಷತಾ ನಿಯಮಗಳನ್ವಯ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮಕ್ಕಳು ಮಾಡಿರುವ ಗೃಹಕಾರ್ಯ ಯೋಜನಾ ಕಾರ್ಯ ಹಾಗೂ ಅಭ್ಯಾಸ ಪುಸ್ತಕಗಳನ್ನು ಪರಿಶೀಲಿಸಿ ಮಕ್ಕಳ ಪಾಲಕರಿಗೂ ಕೂಡ ಪ್ರೋತ್ಸಾಹಪರ ನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಆಯ್.ಎಂ.ನಾಗನೂರ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರಿಗೆ ಸಭೆಯನ್ನು ಜರುಗಿಸಿ ಇಲಾಖೆಯ ಮಾರ್ಗಸೂಚಿಯಂತೆ ಹಮ್ಮಿಕೊಂಡಿರುವ ಮಾಹಿತಿಗಳನ್ನು ಹಂಚಿಕೊಂಡು ಸೂಕ್ತ ಮಾರ್ಗದರ್ಶನ ನೀಡಿದರು.