ಮುನವಳ್ಳಿ: ಪಟ್ಟಣದ ಗಾಂಧಿನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೇವಾಸಿಂಧು ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ದ ಉದ್ಘಾಟನೆಯನ್ನು ಶಿಕ್ಷಕ ವೀರಣ್ಣ ಕೊಳಕಿ ನೆರವೇರಿಸಿದರು.
ಸವದತ್ತಿ ತಾಲೂಕಾ ಯೋಜನಾಧಿಕಾರಿ ಆಶಾ ಹಾಗೂ ವೈ.ಬಿ.ಕಡಕೋಳ ಅವರು ಫಕ್ಕೀರಪ್ಪ ಬೆಹರೆಣ್ಣವರ ಅವರಿಗೆ ಲ್ಯಾಪ್ಟ್ಯಾಪ್ ವಿತರಿಸಿ ಮಾತನಾಡುತ್ತ, “ಸಾರ್ವಜನಿಕರಿಗೆ ಅತ್ಯವಶ್ಯವಾದ ಸಕಾಲದಂಥ ಹತ್ತು ಹಲವಾರು ಸೇವೆಗಳು ಈಗ ಈ ಸೆಂಟರ್ನಲ್ಲಿ ಸಿಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು”ಎಂದರು.
ಶಿಕ್ಷಕ ವೈ.ಬಿ.ಕಡಕೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, “ ಧರ್ಮಸ್ಥಳ ಗ್ರಾಮೀಣ ಸೇವಾಭಿವೃದ್ಧಿ ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ವ ಉದ್ಯೋಗ,ಜ್ಞಾನ ವಿಕಾಸದಂತಹ ಕಾರ್ಯಕ್ರಮಗಳನ್ನು ಒದಗಿಸುತ್ತಿರುವುದು ಹೆಮ್ಮೆಯ ಸಂಗತಿ”ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ದೀಪಾ ಜಂತ್ಲಿ, ವಿಜಯಲಕ್ಷ್ಮೀ ಗೊರಾಬಾಳ, ಮುಸ್ತಫಾ ಚೋಪದಾರ, ಅಧಿಕಾರಿಗಳಾದ ಆನಂದ, ಬೆನಕಟ್ಟಿ ವಲಯದ ಮೇಲ್ವಿಚಾರಕರಾದ ಸಂಬಾಜಿ, ಲಕ್ಷ್ಮೀ ಚೌಧರಿ ಸೇರಿದಂತೆ ಮಹಿಳಾ ಪ್ರತಿನಿಧಿಗಳು ಇದ್ದರು.