ಮೂಡಲಗಿ :-ತಾಲೂಕಿನ ಹಳ್ಳೂರ ಕ್ರಾಸ್(ಗುಬ್ಬಿ ಬಸ್ಟ್ಯಾಂಡ್) ಸರ್ಕಾರಿ ಕನ್ನಡ ಶಾಲೆಗೆ ತಹಶೀಲ್ದಾರ ಶ್ರೀಶೈಲ ಗುಡುಮಿ ಭೇಟಿ ನೀಡಿದರು.
ತಹಶೀಲ್ದಾರರನ್ನು ವಿದ್ಯಾರ್ಥಿ/ನಿಯರು ಹೂಗುಚ್ಚ ನೀಡುವುದರ ಮೂಲಕ ಸ್ವಾಗತಿಸಿಕೊಂಡರು. ಶಾಲೆಯ ಭೌತಿಕ ಸೌಂದರ್ಯ ಇಷ್ಟಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಶಿಸ್ತು, ಹಸಿರು ವಾತಾವರಣ, ಶಾಲಾ ಹೂದೋಟ, ಗೋಡೆ ಬರಹ ಮತ್ತು ಶಾಲಾ ಕೈತೋಟ ಮತ್ತು ಕಲಿಕೆಯ ಬಗ್ಗೆ ವಿಚಾರಿಸಿದರು.
ಸುಮಾರು ೨ ಗಂಟೆಗಳ ಕಾಲ ಶಾಲೆಯಲ್ಲಿ ಇದ್ದು, ಪ್ರತಿ ತರಗತಿಯ ಮಕ್ಕಳ ಶಿಸ್ತು, ಸಂಯಮ, ಉತ್ತಮ ನಡತೆ, ಹಾವಭಾವ, ಕ್ರಿಯಾಶೀಲತೆ, ಪ್ರಶ್ನೆಗೆ ಉತ್ತರಿಸುವ ತುಡಿತ, ಹೊಸದನ್ನು ತಿಳಿಯಲು ವೈಚಾರಿಕತೆಯಿಂದ ಕೇಳುವ ಪ್ರಶ್ನೆಗಳು,ಇವು ಅವರನ್ನು ಸಂತುಷ್ಟಗೊಳಿಸಿದವು. ಪ್ರತಿ ತರಗತಿಗೆ ಭೇಟಿ ನೀಡಿ ವಯೋಮಾನಕ್ಕೆ ಅನುಗುಣವಾಗಿ ಓದುಬರಹ, ಲೆಕ್ಕಾಚಾರಗಳನ್ನು ಪ್ರತಿ ಮಗುವಿನಿಂದ ಕಲಿಕೆಯನ್ನು ಪರಿಶೀಲಿಸಿದರು. ನಾಲ್ಕನೇ ತರಗತಿಯ ಮಕ್ಕಳ ಇಂಗ್ಲೀಷ್ ನಿರರ್ಗಳವಾಗಿ ಓದುವ ಶೈಲಿಯನ್ನು ತುಂಬಾ ಇಷ್ಟ ಪಟ್ಟರು. ಒಟ್ಟಾರೆಯಾಗಿ 4- 5ನೇ ತರಗತಿಯ ಮಕ್ಕಳ ಪರಿಣಾಮಕಾರಿ ಕಲಿಕೆಯನ್ನು ಕಂಡು ಸರಕಾರಿ ಶಾಲಾ ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. 6 -7ನೇ ತರಗತಿಯ ಮಕ್ಕಳ ಕಲಿಕೆಯನ್ನು ಪರಿಶೀಲಿಸಿ ಮೌಲ್ಯಯುತ ನುಡಿಗಳನ್ನು ಹೇಳಿದರು.
ಸಾಧನೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ, ಆದ್ದರಿಂದ ಅಭ್ಯಾಸದ ಜೊತೆಗೆ ಹೆಚ್ಚು ಆಟಗಳನ್ನು ಆಡಬೇಕೆಂದು ತಹಶೀಲ್ದಾರರು ಹೇಳಿದರು. ಟಿವಿ, ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಿದ್ದು, ತಂದೆ ತಾಯಿಯ ಆಸೆಗಳನ್ನು ಈಡೇರಿಸಲು ಕಷ್ಟಪಟ್ಟು ಶಿಕ್ಷಕರು ಹೇಳಿದ ಪಾಠಗಳನ್ನು ಅರ್ಥೈಸಿಕೊಂಡು ಓದಲು ತಿಳಿಹೇಳಿದರು. ಮನುಷ್ಯನಿಗೆ ಗುರಿ ಇರಬೇಕು ಗುರಿಯಂತೆ ಕಾರ್ಯಗಳನ್ನು ನಿರ್ವಹಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕೆಂದರು.
ಯಾವುದೇ ಕಾರ್ಯವನ್ನು ಸಾಧಿಸಲು ನಮ್ಮಲ್ಲಿ ಇಚ್ಛಾಶಕ್ತಿ ತುಂಬಾ ಅವಶ್ಯವಾಗಿದೆ. ಮಕ್ಕಳಿಗೆ ಕೆಲವು ಗಣಿತ ಲೆಕ್ಕಗಳನ್ನು ಹೇಳಿ. ಮಕ್ಕಳಿಗೆ ಹಣದ ರೂಪದ ಬಹುಮಾನವನ್ನು ಕೊಟ್ಟು ಮಕ್ಕಳನ್ನು ಪ್ರಸಂಶಿಸಿದರು. ನಂತರ ಶಾಲೆಯಲ್ಲಿನ ಶೌಚಾಲಯದ ವ್ಯವಸ್ಥೆಯ ಬಳಕೆ ಮತ್ತು ನಿರ್ವಹಣೆಯನ್ನು ಪರಿಶೀಲಿಸಿದರು. ಬಿಸಿಯೂಟ ಕೊಠಡಿಗೆ ಖುದ್ದು ಭೇಟಿ ನೀಡಿ ಬಿಸಿಯೂಟ ಕೊಠಡಿಯ ಸ್ವಚ್ಛತೆ ಮತ್ತು ಬಿಸಿಯೂಟ ಅಡುಗೆ ಮಾಡುವವರ ಶಿಸ್ತನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರದಿಂದ ಕಾರ್ಯನಿರ್ವಹಿಸಲು ತಿಳಿಹೇಳಿದರು. ನಂತರ ಒಂದರಿಂದ ಮೂರನೇ ತರಗತಿಯ ಮಕ್ಕಳ ಕಲಿಕೆಯನ್ನು ಪರಿಶೀಲಿಸಲು ಪ್ರತಿ ಮಕ್ಕಳಿಂದ ಪ್ರಶ್ನೆಗಳನ್ನು ಕೇಳಿದಾಗ ಎಲ್ಲಾ ಮಕ್ಕಳು ಸೂಕ್ತವಾಗಿ ಉತ್ತರಿಸಿದರು.
ಒಟ್ಟಾರೆಯಾಗಿ ಶಾಲಾ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರುವುದನ್ನು ದೃಢೀಕರಿಸಿಕೊಂಡ ತಹಶೀಲ್ದಾರ ಗುಡುಮೆಯವರು ಶಾಲೆಯ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಶಿಕ್ಷಕರೊಂದಿಗೆ ಮತ್ತು ಸಮುದಾಯದೊಂದಿಗೆ ಬೆರೆತು ಶಾಲೆಯಲ್ಲಿನ ಮಧ್ಯಾಹ್ನದ ಬಿಸಿ ಊಟದ ರುಚಿಯನ್ನು ಸಹ ಸವಿದರು. ಬಿಸಿ ಊಟದ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರದ ಎಲ್ಲಾ ಯೋಜನೆಗಳು ಉತ್ತಮ ರೀತಿಯಲ್ಲಿ ಈ ಶಾಲೆಯಲ್ಲಿ ಕಾರ್ಯರೂಪಕ್ಕೆ ಬರುತ್ತಿರುವುದು ಅತಿ ಸಂತಸ ಎಂದು ಹೇಳಿದರು.
ಶೈಕ್ಷಣಿಕ ವರ್ಷದಲ್ಲಿ ಗಣನೀಯವಾಗಿ ಹೆಚ್ಚಳವಾದ ದಾಖಲಾತಿ ಮತ್ತು ಹಾಜರಾತಿ ಕುರಿತು ಅತಿ ಸಂತಸ ವ್ಯಕ್ತಪಡಿಸಿದರು. ನಂತರ ಶಾಲೆಯ ಶಿಕ್ಷಣ ವೃಂದದಿಂದ ಹಾಗೂ ಎಸ್ ಡಿ ಎಮ್ ಸಿ ವತಿಯಿಂದ ತಹಶೀಲ್ದಾರರನ್ನು ಗೌರವಪೂರ್ವಕವಾಗಿ ಸತ್ಕರಿಸಲಾಯಿತು.ಪ್ರಧಾನ ಗುರುಗಳು. ಬಿ. ಪಿ. ಪಾಟೀಲ, ಎಸ್ ಡಿ ಎಮ್ ಸಿ ಸದಸ್ಯರು, ಎಮ್.ಆಯ್. ಮಠಪತಿ, ಭೀಮಪ್ಪ ನಿಡೋಣಿ, ಭುಜಪ್ಪ ಸಪ್ತಸಾಗರ, ಶಿಕ್ಷಕರುಗಳಾದ-ಎಮ್.ವಾಯ್.ಮರೆಕ್ಕನವರ, ಎಮ್.ಬಿ. ತಳವಾರ ಉಪಸ್ಥಿತರಿದ್ದರು.

