ಮೂಡಲಗಿ: ಭಾರತದ ಸಂಸ್ಕೃತಿಯೇ ಯುವ ಜನತೆಯ ಬದುಕಿನ ಸುಭದ್ರತೆಯ ಬುನಾದಿಯಾಗಿದೆ. ದೇಶ, ರಾಜ್ಯ ಹಾಗೂ ತನ್ನ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ, ತನ್ನ ತಾಯ್ನೆಲದ ಭಾಷೆ ಆಶಯ ಬಗ್ಗೆ ಅಪಾರ ಗೌರವ ಹೊಂದಿರಬೇಕು. ತಂದೆಯ ಕಷ್ಟ ಮತ್ತು ತಾಯಿಯ ಗೋಳು ಮಕ್ಕಳಿಗೆ ಪರಿಚಯಿಸಿ ಸನ್ಮಾರ್ಗಕ್ಕೆ ತರುವುದು ಶಿಕ್ಷಕರ ಹೊಣೆ ಆಗ್ಬೇಕು ಎಂದು ನಾಗನೂರದ ಅಥರ್ವ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಹಾಗೂ ಉಪನ್ಯಾಸಕ ಚೇತನ್ ಜೋಗನ್ನವರ ಅಭಿಮತ ವ್ಯಕ್ತಪಡಿಸಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ರಾಜಾಪೂರದಲ್ಲಿ ಹಮ್ಮಿಕೊಂಡಿರುವ ೨೦೨೩-೨೪ನೇ ಸಾಲೀನ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಪ್ಪ ಎಂದರೆ ರಕ್ಷಣೆ ಅಮ್ಮ ಎಂದರೆ ಪ್ರೀತಿ. ಅಪ್ಪ ಅಮ್ಮ ತನ್ನ ಮಗುವಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ತಮ್ಮ ಆಸೆ-ಕನಸುಗಳನ್ನೆಲ್ಲ ಬದಿಗೊತ್ತಿ ತಮ್ಮ ಆಸೆಗಳನ್ನು ಮಗುವಿಗೆ ನೀಡುತ್ತಾರೆ. ಹೀಗಾಗಿ ಅವರಿಗೆ ನಾವು ಎಂದೆಂದಿಗೂ ಋಣಿಯಾಗಿರಬೇಕು ಎಂದರು.
ರಾಜಾಪೂರದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಚೇರಮನ್ನ ಶಿವಾನಂದ ಕಮತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುರು-ಹಿರಿಯರಿಗೆ, ತಂದೆ-ತಾಯಿಗಳಿಗೆ ನಾವು ಮೊದಲು ಗೌರವಿಸುವುದನ್ನು ಕಲಿಯಬೇಕು. ಆ ನಂತರ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಜೀವನದ ಆದರ್ಶ ಮೌಲ್ಯಗಳನ್ನು ಎನ್ನೆಸ್ಸೆಸ್ ಶಿಬಿರ ಕಲಿಸಿಕೊಡುತ್ತದೆ ಎಂದರು.
ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಮಾತನಾಡಿ, ಭಾರತೀಯ ಸನಾತನ ಪರಂಪರೆ ನಮಗೆ ಸಿಕ್ಕ ದೊಡ್ಡ ಉಡುಗೊರೆ. ಈ ದೇಶದಲ್ಲಿ ಜನಿಸಿದ ನಾವುಗಳು ಧನ್ಯರು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ್ದು ನಮ್ಮ ತಾಯ್ನೆಲ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಜಾತಿ, ಆಹಾರ ಪದ್ಧತಿ, ಉಡುಗೆ ತೊಡುಗೆಗಳು ಇದ್ದರೂ ಸಹ ನಾವೇಲ್ಲರೂ ಒಂದೇ ಎಂಬ ಭಾವವನ್ನು ನಮ್ಮ ರಕ್ತದಲ್ಲಿ ತುಂಬಿದೆ ಎಂದರು.
ಶಿಬಿರಾರ್ಥಿ ಶಿಲ್ಪಾ ನಾಯಿಕವಾಡಿ ನಿರೂಪಿಸಿದರು. ಕಾವೇರಿ ಎಣ್ಣಿ ಪ್ರಾರ್ಥಿಸಿದರು. ನವೀನ ದೊಡ್ಡನಾಗನ್ನವರ ಸ್ವಾಗತಿಸಿದರು. ಪೂಜಾ ಅವರಾದಿ ವಂದಿಸಿದರು.