ಇತ್ತೀಚೆಗೆ ಕರ್ನಾಟಕ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕಾಂತರಾಜ-ಜಯಪ್ರಕಾಶ್ ಹೆಗ್ಡೆ ಆಯೋಗ ನೀಡಿರುವ ಜಾತಿಗಣತಿ ಸಮೀಕ್ಷಾ ವರದಿಯಲ್ಲಿ ನಮ್ಮ ಕುರುಹಿನಶೆಟ್ಟಿ ಸಮಾಜಕ್ಕೆ ಅನ್ಯಾಯವಾಗಿದ್ದು ಅದನ್ನು ಜಾರಿಗೊಳಿಸಲು ನಮ್ಮ ವಿರೋಧವಿದೆ ಎಂದು ಗದಗ ಬೆಟಗೇರಿಯ ಶ್ರೀಶೈಲ ಮೂಲಪೀಠದ ಪೀಠಾಧಿಪತಿ ನಾಲ್ಮಡಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಪ್ರಕಟಣೆಯೊಂದರಲ್ಲಿ ಅವರು, ವರದಿಯಲ್ಲಿ ಅವರು ತಿಳಿಸಿದ ಹಾಗೆ ನಮ್ಮ ಸಮಾಜದ ಜನಗಣತಿ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿದೆ, ಕಾರಣ ಕುರುಹಿನಶೆಟ್ಟಿ ಸಮಾಜದ ಮೂಲಪೀಠದ ಪೀಠಾಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡಾಗ ಕುರುಹಿನಶೆಟ್ಟಿ ಸಮಾಜದ ಜನಸಂಖ್ಯೆಯು ಸುಮಾರು 12 ಲಕ್ಷಕ್ಕೂ ಅಧಿಕ ವಿರುವುದು ನಮಗೆ ತಿಳಿದಿರುವ ವಿಷಯ. ಈಗ ಜಾರಿಗೊಳಿಸಿರುವ ಸಮೀಕ್ಷಾ ವರದಿ ಪ್ರಕಾರ ಪ್ರತಿಯೊಂದು ಊರಿನ ಮನೆ -ಮನೆಗೆ ತೆರಳಿ ಸರಿಯಾದ ಮಾಹಿತಿ ಸಂಗ್ರಹಿಸದೇ ಇರುವುದು, ಹತ್ತು ವರ್ಷಗಳ ಹಿಂದೆ ಮಾಡಿರುವ ಸಮೀಕ್ಷೆಯು ಅವೈಜ್ಞಾನಿಕವಾಗಿ ಇರುವುದರಿಂದ ಈಗ ಈ ವರದಿ ಪ್ರಸ್ತುತವಾಗುವುದಿಲ್ಲ ಎಂದಿದ್ದಾರೆ.
ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿರುವ ಕುರುಹಿನಶೆಟ್ಟಿ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದೆ ಉಳಿದಿರುವುದಕ್ಕೆ ಈ ತರದ ಅವೈಜ್ಞಾನಿಕ, ಅಪ್ರಾಯೋಗಿಕ ಸಮೀಕ್ಷಗಳೇ ಕಾರಣ. ಸರ್ಕಾರವು ಆದಷ್ಟು ಬೇಗನೆ ಸರಿಯಾದ ಸಮೀಕ್ಷೆ ಮಾಡಿ ನಮ್ಮ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ನಮ್ಮ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.