ಮೂಡಲಗಿ – ಬೆಂಗಳೂರಿನಲ್ಲಿ ಈಗಾಗಲೇ ಅನೇಕ ಫಿಲ್ಮ್ ಸ್ಟೂಡಿಯೊಗಳು ಇದ್ದರೂ ಮೈಸೂರಿನಲ್ಲಿ ಹೊಸ ಸ್ಟುಡಿಯೊ ತೆರೆಯಲು ಮುಂದಾದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಈಗಾಗಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರು ಬೆಂಗಳೂರಿನ ಪಕ್ಕದಲ್ಲಿಯೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಿದ್ದರಾಮಯ್ಯ ನಿರ್ಧಾರ, ಈಗ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದ್ದರೂ ಮೈಸೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾದ ಸಿದ್ದರಾಮಯ್ಯ……
ಈ ಮೂರು ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕ ಭಾಗಕ್ಕೆ ಬೇಡವೆ? ಇವು ಉಕ ಭಾಗದಲ್ಲಿ ಎಲ್ಲಿಯಾದರು ಇವೆಯಾ? ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಚೌಕಶಿ ಪ್ರಶ್ನೆ ಮಾಡಿದ್ದಾರೆ.
ಈಗಾಗಲೆ 35 ವರ್ಷಗಳ ಹಿಂದೆ ಧಾರವಾಡದಲ್ಲಿ ಭೂ ಸ್ವಾಧೀನ ಆಗಿ ಹಣಕಾಸಿನ ಕೊರತೆಯಿಂದ ನಿಂತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಹಣ ನೀಡಿ ಅದನ್ನೇಕೆ ಪೂರ್ಣ ಗೊಳಿಸಬಾರದು? ಕಿತ್ತೂರ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಏಕೆ ನಿರ್ಮಾಣ ಮಾಡಬಾರದು? ಹುಬ್ಬಳ್ಳಿ-ಧಾರವಾಡ ಬಳಿ ಏಕೆ ಹೊಸ ಸ್ಟುಡಿಯೊ ನಿರ್ಮಾಣ ಆಗಬಾರದು? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿರುವ ಅವರು ರಾಜ್ಯದಲ್ಲಿ ಯಾವ ಸರ್ಕಾರ ಬಂದರೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ತಪ್ಪಿದ್ದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕವನ್ನ ಕಡೆಗಣಿಸುತ್ತಾ ಹೋದರೆ ಉತ್ತರ ಕರ್ನಾಟಕವೂ ಆಂಧ್ರಪ್ರದೇಶ ದಿಂದ ಒಡೆದ ತೆಲಂಗಾಣದಂತೆ ಹೊಸ ರಾಜ್ಯಕ್ಕಾಗಿ ಹೋರಾಟ ಮಾಡಬೇಕಾಗಿ ಬರಬಹುದು.ನಮ್ಮ ಭಾಗದ ರಾಜಕಾರಣಿಗಳಂತೂ ನರಸತ್ತವರಾಗಿದ್ದಾರೆ. ಇವರು ತಮ್ಮ ಉದ್ಯಮಗಳ ಸ್ಥಾಪನೆಗೆ ತೋರುವ ಕಾಳಜಿಯನ್ನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ತೋರಿಸುವುದಿಲ್ಲ. ಧಿಕ್ಕಾರವಿರಲಿ ಇಂತವಕ್ಕೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಉತ್ತರ ಕರ್ನಾಟಕ ಅಭಿವೃದ್ಧಿ ಸಮಿತಿ ಎಂಬುದು ಇದೆ, ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಗಳು ಇವೆ. ಅದಕ್ಕೊಬ್ಬರು ಅಧ್ಯಕ್ಷರು ಇದ್ದಾರಂತೆ. ಕಾಂಗ್ರೆಸ್ ಸರ್ಕಾರದ ಈ ಅನ್ಯಾಯಗಳು ಸಮಿತಿಯ ಗಮನಕ್ಕೆ ಬರಲಾರದಷ್ಟು ನಿಷ್ಕ್ರಿಯವಾಯಿತೆ ಉ ಕ ಅಭಿವೃದ್ಧಿ ಸಮಿತಿ ? ಮಾತೆತ್ತಿದರೆ ಸ್ವತಂತ್ರ ಉತ್ತರ ಕರ್ನಾಟಕ ಬೇಕೆನ್ನುವ ಉಗ್ರ ಹೋರಾಟಗಾರರು ಈಗ ಎಲ್ಲಿದ್ದಾರೆ ? ಎಂದು ಮಲ್ಲಿಕಾರ್ಜುನ ಚೌಕಶಿ ಪ್ರಶ್ನೆ ಮಾಡಿದ್ದಾರೆ.