ಸಿಂದಗಿ: ಕಳೆದ ಉಪ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೊಟ್ಟಮಾತಿನಂತೆ ನಡೆದುಕೊಂಡು ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿರುವ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ತಾಲೂಕಾ ಕಾಂಗ್ರೆಸ್ ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ವಿಜಯಕುಮಾರ ಯಾಳವಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕ ಶರಣಪ್ಪ ಸುಣಗಾರ ರವರಿಗೆ ಟಿಕೇಟ್ ನೀಡಿ ಹಿಂದುಳಿದ ವರ್ಗಗಳಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು.
ಕಳೆದ ಸಿಂದಗಿ ಉಪ ಚುನಾವಣೆಯಲ್ಲಿ ರಾಜ್ಯದ ಘಟಾನುಘಟಿ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಆಶ್ವಾಸನೆ ನೀಡಿದ್ದಾರೆ. ಆ ಆಶ್ವಾಸನೆಯಂತೆ ಸದ್ಯ ನಡೆದುಕೊಂಡು ಕಾಂಗ್ರೆಸ್ ಪಕ್ಷ ಯಾವತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂಬುದನ್ನು ನಿರೂಪಿಸಬೇಕಾಗಿದೆ ಮತ್ತು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಿಸಿ ನಂತರ ಜಿಲ್ಲಾ ಅಧ್ಯಕ್ಷರಾಗಿ ಸತತ 10 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಪಕ್ಷ ನೀಡಿದ ಕೆಲಸವನ್ನು ನಿಷ್ಠೆಯಿಂದ ಮಾಡಿ 2013 ರಲ್ಲಿ ಜಿಲ್ಲೆಯ 8 ವಿಧಾನ ಸಭೆ ಮತಕ್ಷೇತ್ರಗಳಲ್ಲಿ 7 ರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಮಾಡಿರುವುದು ಇವರ ಕಾರ್ಯಕ್ಷಮತೆಯನ್ನು ತೋರಿಸುತ್ತದೆ.
ಇಂತಹ ಹಿಂದುಳಿದ ವರ್ಗಗಳ ನಾಯಕ ಮತ್ತು ಪ್ರಬಲ ತಳವಾರ ಸಮಾಜದ ಹಿರಿಯ ಮುಖಂಡರಾದ ಶರಣಪ್ಪ ಸುಣಗಾರ ಇವರಿಗೆ ಈ ಬಾರಿ ವಿಧಾನ ಪರಿಷತ್ತಿಗೆ ಟಿಕೆಟ್ ನೀಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ. ಉತ್ತರ ಕರ್ನಾಟಕದ ಹಿಂದುಳಿದ ನಾಯಕನನ್ನು ಬೆಳೆಸಿದಂತಾಗುತ್ತದೆ.
ಇದರೊಂದಿಗೆ ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಯಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚಿನ ಸ್ಥಾನಗಳು ಗೆಲ್ಲುತ್ತವೆ ಎಂಬ ಆತ್ಮವಿಶ್ವಾಸವಿದೆ ಕಾರಣ ಈ ಭಾಗದ ಹಿಂದುಳಿದ ವರ್ಗದ ನಾಯಕ ಶರಣಪ್ಪ ಸುಣಗಾರಗೆ ವಿಧಾನ ಪರಿಷತ್ತಿಗೆ ಟಿಕೇಟ ನೀಡಬೇಕು ಎಂದು ತಾಲೂಕ ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಕಾರ್ಯಾಧ್ಯಕ್ಷ ಪರಶುರಾಮ ಉಪ್ಪಾರ, ಉಪಾಧ್ಯಕ್ಷ ಯಮನೂರ ಹೂಗಾರ, ಪ್ರಧಾನ ಕಾರ್ಯದರ್ಶಿ ಹಣಮಂತ ಸಿಂದಗಿ ಮತ್ತು ಪಕ್ಷದ ಕಾರ್ಯಕರ್ತರಾದ ಈರಣ್ಣ ಹರವಾಳ, ಶಿವಯೋಗಿ ಹುಡೇದ, ಚಿದಾನಂದ ನಾಯ್ಕೋಡಿ, ಬಸವರಾಜ ಬೋರಗಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.