ಮೂಡಲಗಿ: ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಕೇಂದ್ರ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ವೃತ್ತದಲ್ಲಿ ಅಶ್ವಾರೂಢ ಜಗಜ್ಯೋತಿ ಶ್ರೀ ಬಸವೇಶ್ವರರ ಕಂಚಿನ ಪುತ್ಥಳಿಯ ಲೋಕಾರ್ಪಣೆಯು ಮೇ 1ರಂದು ಬೆಳಿಗ್ಗೆ 10ಕ್ಕೆ ಜರುಗಲಿದೆ ಎಂದು ಬಸವ ಕಮಿಟಿ ಅಧ್ಯಕ್ಷ ರಮೇಶ ಈರಪ್ಪ ಬೆಳಕೂಡ ತಿಳಿಸಿದರು.
ಗುರುವಾರ ಬಸವೇಶ್ವರರ ಪುತ್ಥಳಿ ಲೋಕಾರ್ಪಣೆಯ ಸಮಾರಂಭ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕೃಪಾರ್ಶಿವಾದ ಹಾಗೂ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭವು ಜರಗುವುದು. ಕೊಲ್ಲಾಪೂರದ ಕನ್ಹೇರಿಯ ಸಿದ್ದಗಿರಿಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಇಂಚಲದ ಸಾಧು ಸಂಸ್ಥಾನಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಘೋಡಗೇರಿಯ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸುವರು. ಬಸವವೃತ್ತ ನಿರ್ಮಾಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಈರಪ್ಪ ರಾಮಪ್ಪ ಬೆಳಕೂಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
ಪಟ್ಟಣದ ಎಲ್ಲ ಸಮಾಜದ ಜನರ ಸಮನ್ವತೆ ಹಾಗೂ ದೇಣಿಗೆಯಲ್ಲಿ ಪ್ರತಿಷ್ಠಾಪಿಸಿರುವ ಹನ್ನೆರಡುವರೆ ಅಡಿ ಎತ್ತರದ ಕಂಚಿನ ಅಶ್ವಾರೂಢ ಪುತ್ಥಳಿಯನ್ನು ಗುಳೇದಗುಡ್ಡದ ಬಿಳಿ ಶಿಲೆಯಲ್ಲಿ ಸುಂದರವಾಗಿ ಕೆತ್ತಿದ 13 ಅಡಿ ಎತ್ತರದ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿಲಾಗಿದೆ. ಪೂಜ್ಯರಿಂದ ಬಸವ ತತ್ವದ ಸರಳ ರೀತಿಯ ವಿಧಿವಿಧಾನಗಳ ಮೂಲಕ ಪುತ್ಥಳಿಯನ್ನು ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.