ಸಿಂದಗಿ: ಕೇಂದ್ರ ಸರಕಾರ ಕನ್ನಡ ಭಾಷೆಯನ್ನು ಅವಮಾನಿಸಿ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಣೆ ಮಾಡಲು ಪ್ರಾಧಾನ್ಯತೆ ನೀಡಿರುವ ನೀತಿಯನ್ನು ಖಂಡಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ ಮಾತನಾಡಿ, ಭಾರತವು ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ 51 ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಕೂಟವಾಗಿದೆ. ಇಂತಹ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮರೆಸುವುದು ನಿಜಕ್ಕೂ ಜನತೆಗೆ ಎಸಗುವ ಪರಮ ಅನ್ಯಾಯವಾಗಿದೆ. ಸೆಪ್ಟೆಂಬರ್ 14ರಂದು ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ ಹಿಂದಿ ದಿವಸವನ್ನು ಕರ್ನಾಟಕದಲ್ಲಿ ಒತ್ತಾಯ ಪೂರ್ವಕವಾಗಿ ಆಚರಿಸುವದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಅಲ್ಲದೆ ಕರ್ನಾಟಕ ಸರ್ಕಾರದ ವತಿಯಿಂದ, ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕು ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದೆಂದು ಆಗ್ರಹಿಸಿದರು.
ಮಾಜಿ ಅಧ್ಯಕ್ಷ ಪ್ರಕಾಶ ಹಿರೇಕುರಬರ ಮಾತನಾಡಿ, ಭಾರತ ದೇಶದಲ್ಲಿ 540 ಭಾಷೆ ಒಳಗೊಂಡ ಸಾಮಾಜಿಕ, ಸಾಂಸ್ಕೃತಿಕ ದೇಶವಾಗಿದ್ದು ಕೇಂದ್ರ ಸರ್ಕಾರ ಒಂದೇ ಭಾಷೆಗೆ ಮಣೆ ಹಾಕುತ್ತಿರುವುದನ್ನು ಬಿಟ್ಟು ದೇಶದಲ್ಲಿ ಅತಿವೃಷ್ಟಿಯಿಂದ ಬೆಳೆಗಳೆಲ್ಲ ಹಾಳಾಗಿ ರೈತರು, ಸಾರ್ವಜನಿಕರು ಊಟಕ್ಕೂ ಪರಿತಪಿಸುತ್ತಿದ್ದಾರೆ ಅದರ ಬಗ್ಗೆ ಚಿಂತನೆ ನಡೆಸದೆ ವಿನಾಕಾರಣ ಭಾಷೆ ಭಾಷೆಗಳಲ್ಲಿ ಗೊಂದಲ ಸೃಷ್ಟಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರ ಈ ನೀತಿಯಿಂದ ಹಿಂದೆ ಸರಿದು ಜನಸಾಮಾನ್ಯರಿಗೆ ಉಪಯೋಗವಾಗುವಂಥ ಯೋಜನೆಗಳನ್ನು ರೂಪಿಸಬೇಕು ಇಲ್ಲದಿದ್ದರೆ ಜೆಡಿಎಸ್ ಪಕ್ಷದಿಂದ ಇಡೀ ರಾಜಾದ್ಯಂತ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಂತೇಶ ಪರಗೊಂಡ, ಪ್ರಶಾಂತ ಸಾಲೋಟಗಿ, ನಾಗೇಶ ಪೂಜಾರಿ, ಅಪ್ಪುಗೌಡ ಪಾಟೀಲ, ಮಾಳು ಮೇತ್ರಿ, ಸಂದೀಪ ಕಾಳೆ, ಚಂದಪ್ಪ ಅತನೂರ, ಶಂಕರ ಸಗರ, ಸಂತೋಷ ಪಾಟೀಲ, ಅಶೋಕ ವಾಲಿ, ಶಿವಾನಂದ ಹಳ್ಳಿ, ಅಮೋಘ ಪೂಜಾರಿ, ಶಶಿಕುಮಾರ ಮಾಲಗಾರ, ಸೇರಿದ್ದಂತೆ ಅನೇಕರು ಇದ್ದರು.