spot_img
spot_img

ಪ್ರಕೃತಿ ಧರ್ಮ; ಜೂನ್ 5 ವಿಶ್ವ ಪರಿಸರ ದಿನ

Must Read

- Advertisement -

ಕೋವಿಡ್ ಸೋಂಕು ಎರಡನೇ ಅಲೆ ದೇಶದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಮೂರನೆಯ ಅಲೆ ಮಕ್ಕಳ ಮೇಲೆ ಅನ್ನುವ ವಾತಾವರಣ ಫಂಗಸ್ ಹೆಚ್ಚುತ್ತಿರುವುದು. ಇಂಥಹ ಸಂದಿಗ್ದ ಪರಿಸ್ಥಿತಿಯಲ್ಲಿ ರೋಗಿಗಳ ಜೀವ ಉಳಿಸುವುದು ಆಕ್ಸಿಜನ್. ಅತ್ಯಂತ ತುರ್ತಾಗಿ ಬೇಕಿರುವ ಆಕ್ಸಿಜನ್ ಗಾಗಿ ದೇಶದಲ್ಲೆಡೆ ಪರದಾಟದ ಸುದ್ದಿಗಳು ಎಲ್ಲ ಕಡೆಗೆ ಹರಿದಾಡತೊಡಗಿದವು. ಗಾಳಿ ಮತ್ತು ನೀರಿನಲ್ಲಿ ಆಮ್ಲಜನಕ ಇರುತ್ತದೆ ಎನ್ನುವುದನ್ನು ಓದಿದ ನಮಗೆ ಈ ಆಕ್ಸಿಜನ್ ಹೇಗೆ ತಯಾರಿಸುವರು. ಗೊತ್ತಾ.?

ಗಾಳಿಯಿಂದ ಆಮ್ಲಜನಕವನ್ನು ಹೊರತಗೆಯುತ್ತೇವೆ. ಇದಕ್ಕಾಗಿ ಏರ್ಕಂ ಪ್ರೆಷರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅಂದರೆ ಗಾಳಿಯನ್ನು ಕಂಪ್ರೆಸ್ ಮಾಡಿದ ನಂತರ ಪಿಲ್ಟರ್ ಮಾಡುವರು.‌ ಇದರಿಂದ ಅಶುದ್ಧ ಗಾಳಿ ಹೊರಹೋಗುತ್ತದೆ. ಹಲವು ಹಂತಗಳಲ್ಲಿ ಈ ಪಿಲ್ಟರ್ ಕ್ರಿಯೆ ನಡೆಯುತ್ತದೆ.

ಹೀಗೆ ಪಿಲ್ಟರ್ ಮಾಡಿದ ಗಾಳಿಯನ್ನು ತಂಪಾಗಿಸುವ ಜೊತೆಗೆ ಇದರ ನಂತರ ಗಾಳಿಯನ್ನು ಭಟ್ಟಿ ಇಳಿಸಲಾಗುತ್ತದೆ. ಹೀಗೆ ಮಾಡುವುದರಿಂದ ನಾವು ಆಮ್ಲಜನಕವನ್ನು ಉಳಿದ ಅನಿಲಗಳಿಂದ ಬೇರ್ಪಡಿಸುವರು. ಈ ಪ್ರಕ್ರಿಯೆಯಲ್ಲಿ ಆಮ್ಲಜನಕ ದ್ರವ ರೂಪದಲ್ಲಿರುತ್ತದೆ. ಈ ದ್ರವರೂಪದ ಆಮ್ಲಜನಕವನ್ನು ಸಂಗ್ರಹಿಸುವ ಮೂಲಕ ದೊಡ್ಡ ಮತ್ತು ಸಣ್ಣ ಕ್ಯಾಪುಲ್ಡ್ ಟ್ಯಾಂಕರನಲ್ಲಿ ತುಂಬಿಸಿ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಕೊಳವೆಗಳ ಸಂಪರ್ಕದ ಮೂಲಕ ರೋಗಿಗಳಿಗೆ ತಲುಪುವಂತೆ ಮಾಡುತ್ತಾರೆ.

- Advertisement -

ಇಲ್ಲೊಂದು ವಿಚಾರವನ್ನು ಗಮನಿಸಬೇಕು.ಅದೇನೆಂದರೆ ಎಲ್ಲ ಆಸ್ಪತ್ರೆಗಳಲ್ಲಿ ಇಂತಹ ಅತ್ಯಾಧುನಿಕ ಸೌಲಭ್ಯವಿರುವುದಿಲ್ಲ… ಇಂಥಹ ಪರಿಸ್ಥಿತಿಯಲ್ಲಿ ಸಿಲಿಂಡರ್‍ಗಳಲ್ಲಿ ಆಮ್ಲಜನಕವನ್ನು ತುಂಬಿಸಲಾಗುತ್ತದೆ. ಈ ಸಿಲಿಂಡರ್‍ಗಳನ್ನು ನೇರವಾಗಿ ರೋಗಿಯ ಬೆಡ್ ಬಳಿ ಸಾಗಿಸಿ ಆಮ್ಲಜನಕ ನೀಡಲಾಗುತ್ತದೆ.ಆಮ್ಲಜನಕದ ಈ ವಿಚಾರವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಬೇಕಲ್ಲವೇ.?

ಈ ಹಿಂದೆ ವಿಜ್ಞಾನ ಲೇಖಕ ನಾಗೇಶ ಹೆಗಡೆಯವರು ಒಂದು ಮಾತನ್ನು ಹೇಳಿದ್ದರು. “ಪರಿಸರ ಹಾಗೂ ಜೀವ ಸಂಕುಲದ ಬಗ್ಗೆ ನಾವು ಅಸೂಕ್ಷ್ಮರಾಗಿದ್ದೇವೆ. ಮನುಷ್ಯ ನಿರ್ಮಾಣ ಮಾಡಿದ್ದನ್ನು ಪರಿಸರ ಕೆಡವಿದರೆ ಅದನ್ನು ವಿಧ್ವಂಸಕ ಎನ್ನುತ್ತೇವೆ. ಅದೇ ಮನುಷ್ಯ ಪ್ರಕೃತಿಯನ್ನು ನಾಶ ಮಾಡಿದರೆ ಅಭಿವೃದ್ಧಿ ಎಂಬ ಹೆಸರು ಕೊಡುತ್ತೇವೆ” ಎಂಬುದು. ಅವರು ಪರಿಸರಕ್ಕೆ ಹಾನಿಯಾಗದಂತಹ ಸುಸ್ಥಿರ ಪ್ರಗತಿಯ ಕುರಿತು ಚಿಂತನೆ ಮಾಡಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದರು.

ನಾನು 2020 ರಲ್ಲಿ ಮೇ 31 ರ ರಾತ್ರಿ ಧರ್ಮಸ್ಥಳದತ್ತ ನನ್ನ ಪಯಣ. ಅಲ್ಲಿಂದ ಉಜಿರೆ ಚಾರ್ಮಾಡಿ ಘಾಟ್ ಮೂಲಕ ಕೊಟ್ಟಿಗೆಹಾರಕ್ಕೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕಮ್ಮಟದಲ್ಲಿ ಪಾಲ್ಗೊಳ್ಳಲು ಹೋಗಿದ್ದೆ.

- Advertisement -

ಜೂನ್ 2 ರ ರಾತ್ರಿ ಧರ್ಮಸ್ಥಳಕ್ಕೆ ಹೋಗಿದ್ದೆ. ಸದಾ ಜನರಿಂದ ತುಂಬಿರುತ್ತಿದ್ದ ಅಲ್ಲಿ 2020 ರ ಆ ಸಂದರ್ಭದಲ್ಲಿ ನೀರಿನ ಕೊರತೆಯ ಕಾರಣ ಅಲ್ಲದೇ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳನ್ವಯ ಜನರ ಜನನಿಭಿಡತೆ ಮೊದಲಿನಂತಿರಲಿಲ್ಲ. ಬಹು ಬೇಗ ನನಗೆ ದರ್ಶನವೂ ಆಯಿತು. ಮೇ ತಿಂಗಳ ಕೊನೆಗೆ ಮಳೆಗಾಲ ಆರಂಭಗೊಳ್ಳಬೇಕಿತ್ತು.

ಆದರೆ ಮಳೆಯ ಅವತಾರ ಇಲ್ಲದಿರುವುದನ್ನು ಕಂಡರೆ ಎತ್ತ ಸಾಗುತ್ತಿದೆ ನಮ್ಮ ಪರಿಸರದ ಸ್ಥಿತಿಗತಿ ಎಂದು ಯೋಚಿಸುವಂತಾಗಿದೆ.ಈ ವರ್ಷ ಚಂದಮಾರುತದಿಂದ ಅಕಾಲಿಕ ಮಳೆಯಾಗುತ್ತಿದೆ. ಪರಿಸರದಲ್ಲಿ ಯಾವಾಗ ಏನು ಸಂಭವಿಸಬೇಕೋ ಅದು ಸಂಭವಿಸದೇ ಪರಿಸರ ನಾಶದಂತಹ ಚಟುವಟಿಕೆಗಳಿಂದ ನಮ್ಮ ಬದುಕು ದುಸ್ಥರದತ್ತ ಹೊರಟಿದೆ.

2019 ರಲ್ಲಿ ರಾಜ್ಯಕ್ಕೆ ಮೇ ತಿಂಗಳು ಬಿದ್ದ ಮಳೆಗೂ 2020 ವರ್ಷದ ಮೇ ಅಂತ್ಯದವರೆಗೂ ಬಿದ್ದ ಮಳೆಯ ಪ್ರಮಾಣವನ್ನು ಗಮನಿಸಿದಾಗ 2019 ವರ್ಷದ ವಾಡಿಕೆಯಷ್ಟು ಮಳೆ 2020 ವರ್ಷ ಬಂದಿಲ್ಲವೆಂದರೆ. ಮಲೆನಾಡಿನ ಪ್ರದೇಶಗಳು ಸದಾ ಮಳೆಯಿಂದ ತುಂಬಿ ಶಾಲೆಗೆ ರಜೆ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ನಾವು ಗುಲ್ಬರ್ಗ ಭಾಗದ ಶಾಲೆಗಳನ್ನು ಬಿಸಿಲಿನ ತಾಪದಿಂದ ರಜಾ ಅವಧಿ ವಿಸ್ತರಿಸಿದ್ದನ್ನು ಕೂಡ ನೋಡಿದ್ದೇವೆ. ಈ ರೀತಿ ಹವಾಮಾನ ವೈಪರಿತ್ಯಗಳನ್ನು ಕಂಡಾಗ ನಾವು ಪರಿಸರದ ಕಾಳಜಿಯನ್ನು ಮಾಡದೇ ಇರುವುದನ್ನು ಮನಗಾಣಬೇಕಲ್ಲವೇ.? ಪ್ರತಿ ವರ್ಷ ಜೂನ್ 5 ಬಂತೆಂದರೆ ಸಾಕು ಪರಿಸರ ದಿನ ಕುರಿತು ಎಲ್ಲೆಡೆ ಬ್ಯಾನರ್ ಪೋಟೋ ಗಿಡ ಹಚ್ಚಿ ಪೋಟೋ ತಗೆಸಿಕೊಂಡು ಅದನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನೋಡುತ್ತೇವೆ.

ಅಂದು ಹಚ್ಚಿದ ಗಿಡ ಮುಂಬರುವ ವರ್ಷಗಳಲ್ಲಿ ನಮ್ಮಿಂದ ಎಷ್ಟು ಬೆಳೆದಿದೆ ಎಂಬುದನ್ನು ಮುಂದಿನ ವರ್ಷಗಳಲ್ಲಿ ನೋಡುತ್ತೇವೆಯೋ.? ಬಹುತೇಕ ಈ ಸಂಗತಿಯಲ್ಲಿ ನಿರ್ಲಕ್ಷತೆ ಇರುವುದನ್ನು ಮನಗಾಣಬಹುದು. ಗಿಡ ಹಚ್ಚುವುದು ಎಷ್ಟು ಮಹತ್ವವೋ ಅಷ್ಟೇ ಅದರ ಪೋಷಣೆ ಕೂಡ ನಮ್ಮ ಜವಾಬ್ದಾರಿಯಾಗಬೇಕಲ್ಲವೇ.?. ಈ ದಿಸೆಯಲ್ಲಿ ನಮ್ಮ ವಚನಕಾರರ ದೃಷ್ಟಿಕೋನವನ್ನು ಪರಿಸರದ ಕುರಿತ ವಿಚಾರಧಾರಗಳನ್ನು ಇಲ್ಲಿ ಹಂಚಿಕೊಂಡಿರುವೆ.

ಇಳೆ ನಿಮ್ಮ ದಾನ,ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮಯ ದಾನ
ನಿಮ್ಮ ದಾನವನುಂಡು ಅನ್ಯರ ಪೊಗಳುವ
ಕುಣ್ಣಿಗಳನೆನೆಂಬೆ ರಾಮನಾಥ

ಐದು ನೂರು ಕೋಟಿ ವರ್ಷಗಳ ಹಿಂದೆ ಭೂಮಿಯ ಉದಯವಾಯಿತು ಎಂದು ವಿಜ್ಞಾನಿಗಳು ಹೇಳುತ್ತಾರೆ. 30 ಲಕ್ಷ ವರ್ಷದ ಹಿಂದೆ ಮಾನವ ವಿಕಾಸ ಈ ಭೂಮಿಯ ಮೇಲಾಯಿತು ಎಂದು ಹೇಳುತ್ತಾರೆ 300 ವರ್ಷಗಳಿಂದೀಚೆಗೆ ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ನಮ್ಮ ಸುತ್ತ ಮುತ್ತ ನಡೆಯುತ್ತಿದೆ. ಜೂನ್ 5 ವಿಶ್ವ ಪರಿಸರ ದಿನ. ನಮ್ಮ ಸುತ್ತ ಮುತ್ತಲಿನ ಪರಿಸರ ನಾಶ ತಡೆಯಲು ನಾವಿಂದು ಪ್ರಕೃತಿ ಧರ್ಮವನ್ನು ಹುಟ್ಟು ಹಾಕುವ ಅವಶ್ಯಕತೆ ಬಂದೊದಗಿದೆ.

ಏರುತ್ತಿರುವ ಜನಸಂಖ್ಯೆ,,ಮಿತಿಮೀರಿದ ಭೂ ಕಬಳಿಕೆ, ಯಂತ್ರ ಕೇಂದ್ರಿತ ನಮ್ಮ ದೈನಂದಿನ ಬದುಕು, ಓಝೋನ್ ಪದರು ನಾಶವಾಗುತ್ತಿದೆ ಎಂಬುದನ್ನು ನಾವಿಂದು ಅರಿಯಬೇಕಾದರೆ ಮೇಲಿನ ಜೇಡರದಾಸಿಮಯ್ಯನ ವಚನವನ್ನು ಒಂದು ಸಲ ಪ್ರತಿ ಶಬ್ದದೊಂದಿಗೆ ಅರ್ಥ ಮಾಡಿಕೊಂಡು ಬದುಕಬೇಕಾಗಿದೆ.

ಶಿಶುನಾಳ ಷರೀಪ್ ಸಾಹೇಬರು ಕೂಡ ಇದನ್ನೇ ತಮ್ಮ ರಚನೆಯಲ್ಲಿ

“ಸೋರುತಿಹುದು ಮನೆಯ ಮಾಳಿಗೆ
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗೆ
ದಾರುಗಟ್ಟಿ ಮಾಳ್ವರಿಲ್ಲ
ಕಾಲುಕತ್ತಲೆಯೊಳಗೆ ನಾನು ಮೇಲಕೇರಿ ಹೋಗಲಾರೆ”

ಎನ್ನುವಲ್ಲಿ ಆಕಾಶದಲ್ಲಿನ ಓಝೋನ್ ಪದರ ನಾಶವಾಗ್ತಿದೆ ಎಂಬುದರ ಸೂಚಕವನ್ನು ನಾವು ಕಾಣಬಹುದು. ಅದನ್ನು ಅವರು ಸೋರುತಿಹುದು ಮನೆಯ ಮಾಳಿಗೆ ಎಂಬ ಅರ್ಥದಲ್ಲಿ ಹೇಳಿರಬಹುದು ಎಂಬುದನ್ನು ಅರ್ಥೈಸಬಹುದು.

ಯಾವುದನ್ನು ನಾವು ಕಾಳಜಿಪೂರ್ವಕವಾಗಿ ರಕ್ಷಿಸಬೇಕೋ ಅದನ್ನು ಜ್ಞಾನವಿದ್ದೂ ಅಜ್ಞಾನಿಗಳಂತಾದ ನಾವೇ ನಮ್ಮ ಕೈಯಾರೆ ವಿನಾಶ ಮಾಡುತ್ತಿದ್ದುದು ನಿಜಕ್ಕೂ ಶೋಚನೀಯ ಸಂಗತಿ.

ನಮ್ಮ ಪ್ರಕೃತಿಯನ್ನು ನಾವೇ ನಾಶ ಮಾಡತೊಡಗಿದರೆ ಧರೆ ಹತ್ತಿ ಉರಿಯಲೊಲ್ಲದೇ.? ಎಂಬ ಯಾರು ತಮ್ಮ ಜವಾಬ್ದಾರಿಯನ್ನು ಅರಿತು ನಡೆಯದಾದರೆ ಬದುಕು ದುಸ್ಥಿತಯತ್ತ ಅವನತಿಯತ್ತ ಸಾಗದೇ ಪ್ರಗತಿಯತ್ತ ಸಾಗಬಹುದೇ.? ಈ ದಿಸೆಯಲ್ಲಿ ಬಸವಣ್ಣನವರ

ಉಕ್ತಿಯನ್ನು ನಾವಿಂದು ನೆನೆಯಬೇಕಾಗಿದೆ
ಒಲೆ ಹೊತ್ತಿ ಉರಿದೆಡೆ ನಿಲಬಹುದಲ್ಲದೆ
ಧರೆ ಹೊತ್ತಿ ಉರಿದೆಡೆ ನಿಲಬಾರದು
ಏರಿ ನೀರುಂಬೊಡೆ,ಬೇಲಿ ಕೆಯ್ಯ ಮೇವೊಡೆ
ನಾರಿ ತನ್ನ ಮನೆಯಲ್ಲಿ ಕಳುವೊಡೆ
ತಾಯ ಮೊಲೆ ಹಾಲು ನಂಜಾಗಿ ಕೊಲುವೊಡೆ
ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವಾ

ಭೂಕಂಪ ಸುನಾಮಿ ಚಂಡಮಾರುತಗಳಂಥ ಪ್ರಕೃತಿ ವಿಕೋಪದಿಂದ ಇಂದು ಭೂಮಿಯೇ ಹೊತ್ತಿಕೊಂಡು ಉರಿದರೆ ನಾವು ಬದುಕುವುದು ಸಾಧ್ಯವೇ,? ಮೇಲಿನ ಪ್ರತಿಯೊಂದು ಸಾಲುಗಳು ವಿಷಮ ವಾತಾವರಣದಲ್ಲಿ ನಾವು ಬದುಕನ್ನು ನಡೆಸುವುದು ಹೇಗೆ,? ಎಂಬುದನ್ನು ಸೂಚಿಸುತ್ತವೆ.

ಇಂಥ ಅನೇಕ ವಚನಗಳಲ್ಲಿ ನಮ್ಮ ಬದುಕಿನ ಮೌಲ್ಯಗಳ ಹೊತ್ತಿಗೆಯುಂಟು ಆದರೂ ನಾವಿಂದು ಬದುಕುತ್ತಿರುವ ರೀತಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತ ಬದುಕುವ ಪರಿಸ್ಥಿತಿ ಬಂದೊದಗಿದೆ. ಮಾರುಕಟ್ಟೆ ಆಧಾರಿತ ಜಾಗತಿಕ ಪೆಟ್ರೋಲ್ ವ್ಯವಸ್ಥೆ ಇಂದು ಪೆಟ್ರೋಲ್ ದಿನಕ್ಕೆ 98 ದಶಲಕ್ಷ ಲೀmರ್ ಬಳಕೆಯಾಗುತ್ತಿದೆ.

ಇದರಲ್ಲಿ ಅಭಿವೃದ್ದಿ ಹಂತದ ಮೊದಲ ಹತ್ತು ದೇಶಗಳು 65 ಮಿಲಿಯನ್ ಬಳಸಿದರೆ ಎಲ್ಲಿ ಬೇಕಾದರೂ ಪೆಟ್ರೋಲ್ ತಗೆಯುವ ಬಾವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಮುದ್ರದ ಮಟ್ಟ ದಿನದಿನಕ್ಕೆ ಏರುತ್ತಿದೆ. ಹಿಮಾಲಯ ಕರುಗುತ್ತಿದೆ. ದಿನದಿನಕ್ಕೆ ಸುನಾಮಿ ಮತ್ತು ಚಂಡಮಾರುತಗಳ ಸಂಖ್ಯೆಯೂ ಹೆಚ್ಚಾಗಿ ಭೂಮಿಯ ಪಾಲು ಕಡಿಮೆಯಾಗುತ್ತಿದೆ.

2005 ಪ್ರಪಂಚ ಅತ್ಯಂತ ಹೆಚ್ಚು ಶಾಖ ಕಂಡ ವರ್ಷ ಅಂಥಾ ದಾಖಲಾಗಿದ್ದರೆ 2020 ವರ್ಷ ಮೇ ಮುಗಿಯುತ್ತ ಬಂದರೂ ದೆಹಲಿ ಮದ್ಯಪ್ರದೇಶ ಕರ್ನಾಟಕದ ಗುಲ್ಬರ್ಗಾ ಬೀದರ್ ಗಳಲ್ಲಿ ಕೂಡ ಶಾಖದ ಉಷ್ಣತೆ ಹೇಗಿದೆಯೆಂದರೆ ಬೆಳಗಿನ ಹತ್ತು ಗಂಟೆಗೆ ಮುಖಕ್ಕೆ ಏನಾದರೂ ಹೊಚ್ಚಿಕೊಂಡು ತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ಬಿಸಿಲಲ್ಲಿ ನನ್ನ ಬೈಕ್‍ಲ್ಲಿ ಬಾಟಲ್ ನೀರು ತುಂಬಿಟ್ಟುಕೊಂಡು ಕಾರ್ಯಾಲಯಕ್ಕೆ ಹೋಗಿ ವಾಹನದಲ್ಲಿಯೇ ನೀರಿನ ಬಾಟಲ್ ಬಿಟ್ಟು ಕೆಲಸ ನಿರ್ವಹಿಸಿ ನೀರಡಿಸಿ ಬೈಕ್ ಹತ್ತಿರ ಹೋಗಿ ಬಾಟಲ್ ನೀರು ಕುಡಿಯ ಹೋದರೆ ಅದರಲ್ಲಿನ ನೀರಿನ ಉಷ್ಣತೆ ಕಂಡು ಗಾಬರಿಯಾಯಿತು. ಅಂದರೆ ಹಗಲಿನ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದು ಇದರ ನಿರ್ವಹಣೆಗೆ ನಾವು ಪ್ರಯತ್ನ ಮಾಡುವ ದಿಸೆಯಲ್ಲಿ ಜೂನ್ 5 ರ ಪರಿಸರ ದಿನ ಆಚರಿಸಬೇಕಾಗಿದೆ.

ನಾವು ಇಂದು ಯಾವುದೇ ಕಾರ್ಯ ಮಾಡಬೇಕಾದರೂ ದೇವರಿಗೆ ಕೈ ಮುಗಿಯುತ್ತೇವೆ. ಓರ್ವ ಚಾಲಕ ತಾನು ನಡೆಸುವ ವಾಹನ ಹತ್ತಿದೊಡನೆಯೇ ಕೈಮುಗಿಯುತ್ತಾನೆ, ಸಂಜೆ ಹೊತ್ತು ಮನೆಯಲ್ಲಿ ದೀಪ ಹಾಕಿ ಕೈ ಮುಗಿಯುತ್ತೇವೆ. ವೈದ್ಯರು ಕೂಡ ಆಪರೇಷನ್ ಥಿಯೇಟರ ಪ್ರವೇಶಿಸುವ ಮುನ್ನ ಎಲ್ಲ ದೈವೇಚ್ಚೆ ಎಂಬ ಮಾತನಾಡುವುದು ಸರ್ವೇ ಸಾಮಾನ್ಯ. ಅಂದರೆ ದೈವತ್ವದ ನಂಬಿಕೆ ನಮ್ಮಲ್ಲಿ ಗಾಢವಾಗಿದೆ. ಇಂಥದಕ್ಕೆ ಪ್ರಕೃತಿ ಲೇಪನ ಮೂಲಕ 1952 ರಲ್ಲಿ ಬಿಷ್ಣೋಯಿ ಎಂಬ ಧರ್ಮ ಹುಟ್ಟಿದ್ದನ್ನು ಬೇರೆ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.

ಬಿಷ್ಣೋಯಿ ಧರ್ಮ 29 ಸೂತ್ರಗಳನ್ನು ಒಳಗೊಂಡಿತ್ತು.ಇದನ್ನು ಹುಟ್ಟು ಹಾಕಿದ್ದು ಓರ್ವ ದನಕಾಯುವ ಹುಡುಗ ನಿತ್ಯವೂ ದನ ಕಾಯಲೆಂದು ಮರಭೂಯಿಯಲ್ಲಿ ಸಂಚರಿಸುತ್ತಿದ್ದ ಆತನ ಹೆಸರು “ಜಿಂಬೋಜಿ”(ಗುರು ಜಂಬೇಶ್ವರ) ಆತ ಮರಭೂಮಿಯಲ್ಲಿ ನೀರು,ಗಿಡ ಇಲ್ಲದಿರುವ ಬಗ್ಗೆ ಚಿಂತಾಕ್ರಾಂತನಾಗಿ “ಬೀಷ್ಣೋಯಿ” ಧರ್ಮ ಪಂಥ ಹುಟ್ಟು ಹಾಕಿದ. ಮೊದಲಿಗೆ ಮರಗಳೇ ಇಲ್ಲದ ಮರಭೂಮಿಯಲ್ಲಿ “ಕರ್ಜೂರ” ಗಿಡ ಬೆಳೆಯಲು ಸಂಕಲ್ಪ ಮಾಡಿದ. ಕರ್ಜೂರ ಗಿಡ ಬೆಳೆದಂತೆ ಅಲ್ಲಿ ಜಿಂಕೆಗಳ ಸಂತತಿ ಬೆಳೆಸಿದ. ಆ ಭಾಗದಲ್ಲಿ ಮಳೆ ಆಗತೊಡಗಿತು.

ಆಗ ಆತ ಹೇಳಿದ್ದು:

  1. ನೀರು ಸೋಸಿ ಕುಡಿಯಿರಿ
  2. ಪ್ರತಿ ದಿನ ನಸುಕಿನಲ್ಲಿ ಸ್ನಾನ ಮಾಡಿರಿ
  3. ಶಾರೀರಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಿರಿ
  4. ಜೈವಿಕ ವೈವಿದ್ಯತೆ ಕಾಪಾಡಿರಿ
  5. ಸಸ್ಯಾಹಾರಿಗಳಾಗಿರಿ
  6. ಹಸಿರು ಮರಗಳ ಕಡಿಯಬೇಡಿರಿ
  7. ಪ್ರಾಣಿ ಹತ್ಯೆ ಬೇಡ
  8. ಎಲ್ಲ ಜೀವಿಗಳನ್ನು ಗೌರವದಿಂದ ಕಾಣಿರಿ
  9. ದೇವಾಲಯಗಳಲ್ಲಿ ಹಣತೆ ದೀಪ ಹಚ್ಚಿರಿ
  10. ಪ್ರತಿಯೊಬ್ಬರೂ ಮಗುವಿನಂತೆ ಮನೆಗೊಂದು ಮರ ಬೆಳೆಸಿರಿ

ಈ ರೀತಿ 29 ಸೂತ್ರಗಳನ್ನು “ಬೀಷ್ಣೋಯಿ” ಧರ್ಮದಲ್ಲಿ ಅಳವಡಿಸುವ ಮೂಲಕ ಪ್ರಕೃತಿ ಧರ್ಮವನ್ನು ಜನರಲ್ಲಿ ರೂಡಿಸಿದ. ಇಂದಿಗೂ ರಾಜಸ್ಥಾನದಲ್ಲಿ “ಬೀಷ್ಣೋಯಿ” ಧರ್ಮದ ಅನುಯಾಯಿಗಳಿದ್ದಾರೆ.

ಕ್ರ್ರಿ.ಶ. 1730 ರಲ್ಲಿ 363 ಬೀಷ್ಣೋಯಿ ಪಂಥದ ಸ್ತ್ರೀ ಪುರುಷರು ಜೋಧ್ ಪುರದ ರಾಜ ಅರಮನೆ ಕಟ್ಟಲು ಖರ್ಜೂರ ಗಿಡಗಳನ್ನು ಕಡಿದು ತರಲು ತನ್ನ ಸೈನಿಕರಿಗೆ ಆದೇಶಿಸಿದಾಗ ವಿರೋಧಿಸಿದರಲ್ಲದೇ ಪ್ರತಿ ಗಿಡಕ್ಕೆ ಒಬ್ಬರು ನಿಂತು ಮೊದಲು ನಮ್ಮನ್ನು ಕಡಿಯಿರಿ ನಂತರ ಗಿಡಗಳನ್ನು ಕಡಿಯಿರಿ ಎಂದು ಗಿಡ ಕಡಿಯುವುದನ್ನು ವಿರೋಧಿಸಲು ರಾಜನೇ ಸ್ವತಃ ಬಂದು ಇವರ ಹೋರಾಟ ಕಂಡು “ಬಿಷ್ಣೋಯಿ”ಗಳು ವಾಸಿಸುವ ಪ್ರದೇಶದಲ್ಲಿ ಯಾವ ಗಿಡಗಳನ್ನು ಕಡಿಯದಂತೆ ಆದೇಶಿಸಿ ತಾನೂ ಕೂಡ ಪರಿಸರ ಬೆಳೆಸುವ ಮನಸ್ಸಿನಿಂದ ತೆರಳಿದನಂತೆ.

ಇಂಥದ್ದೇ ಒಂದು ಕ್ರಾಂತಿ ಕೇದಾರ ಹತ್ತಿರ ಅಲಕನಂದಾ ನದಿ ದಂಡೆಯ ಗೋಪೇಶ್ವರ ಗ್ರಾಮದ ಯುವಕ ಯುವತಿ ಮಂಡಳದಿಂದ ನಡೆಯಿತು. 1974 ಏಪ್ರಿಲ್ 24 ರಂದು ಅಲ್ಲಿಯ ಗಿಡ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದಾಗ ಚಿಪ್ಕೋ(ತಬ್ಬಿಕೋ) ಚಳುವಳಿ ಹುಟ್ಟು ಹಾಕಿದರು. ಹೀಗೆ ಚಿಪ್ಕೋ ಚಳುವಳಿ ಉತ್ತರಾಂಚಲದಾದ್ಯಂತ ನಡೆಯಿತು. ಸುಂದರಲಾಲ್ ಬಹುಗುಣ ಇದರ ನಾಯಕರು.

ಮೌರ್ಯ ಸಾಮ್ರಾಟ್ ಅಶೋಕ್ ಚಕ್ರವರ್ತಿ ಕೂಡ ರಸ್ತೆ ಬದಿಗಳಲ್ಲಿ ಗಿಡ ಮರಗಳ ಬೆಳೆಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದನ್ನು ಇತಿಹಾಸದಿಂದ ನಾವು ತಿಳಿಯುತ್ತೇವೆ. ಉತ್ತರ ಕರ್ನಾಟಕದ ಸಿರ್ಸಿ-ಸಿದ್ದಾಪುರದಲ್ಲಿ 1983 ರಲ್ಲಿ ಅಪ್ಪಿಕೋ ಚಳುವಳಿ ಕುಸುಮಾ ಸೊರಬ್ ನೇತೃತ್ವದಲ್ಲಿ ಬಂದಿತು ಆಗ “ಉಳಿಸು ಬೆಳೆಸು” ” ಹಿತಮಿತವಾಗಿ ಬಳಸು” ಎಂದ ಸಂದೇಶದೊಂದಿಗೆ ಪರಿಸರ ಕಾಳಜಿ ಹುಟ್ಟು ಹಾಕಿದರು.

ಕೇರಳ ಪಾಲ್ಗಾಟ್ ಬಳಿ ಕೇಂದ್ರ ಸರ್ಕಾರ 1975 ರಲ್ಲಿ “ಸೈಲೆಂಟ್ ವ್ಯಾಲಿ ಪ್ರಾಜೆಕ್ಟ” ಹುಟ್ಟು ಹಾಕಿತು. ಇಲ್ಲಿ “ಕ್ಲೈಮಾಟಿಕ್ ಕ್ಲೈಮಾಕ್ಸ ಅರಣ್ಯ” ಇದ್ದು ( ಅಂದರೆ 100 ವರ್ಷ ಬೆಲೆ ಬಾಳುವ ಮರಗಳ ಪ್ರದೇಶ) ಅದು ಮೂರು ಅಂತಸ್ತುಗಳ ರೀತಿಯಲ್ಲಿ ಮಣ್ಣಿನ ದಿಬ್ಬಗಳ ಮೇಲೆ ಬೆಳೆದ ಮರಗಳ ಕಾಡನ್ನು ಕಡಿದು ಅಲ್ಲಿಯ “ಕುಂತಿಪುಲಾ” ನದಿಗೆ ಅಣೆಕಟ್ಟು ಕೇರಳ ಸರಕಾರದೊಂದಿಗೆ ಸೇರಿ ನಿರ್ಮಿಸಲು ಮುಂದಾದಾಗ ಅಲ್ಲಿನ ಜನ ಇದನ್ನು ವಿರೋದಿಸಲು ಅಂದಿನ ಪ್ರದಾನಿ ದಿವಂಗತ ಇಂದಿರಾ ಗಾಂಧಿ ಈ ಪರಿಸರ ಚಳುವಳಿಗಾರರ ಮನವೊಲಿಸಲು ಮುಂದಾದಾಗ ಇಲ್ಲಿನ ಮರಗಳ ಮಹತ್ವ ಆ ಕಾಡಿನ ಮಹತ್ವ ಆ ಚಳುವಳಿಗಾರರು ತಿಳಿಸಲು ಅದನ್ನು ರದ್ದುಪಡಿಸಿ ಅಲ್ಲಿ ” ಸೈಲೆಂಟ್ ವ್ಯಾಲಿ ಪಾರ್ಕ” ಸ್ಥಾಪನೆಗೆ ನಾಂದಿ ಹಾಡಿದರು. ಇದರ ಫಲವಾಗಿ 1985 ರಲ್ಲಿ ಜುಲೈ 11 ರಂದು “ಸೈರೆಂದ್ರಿವನ” ಹಸಿರಿನಿಂದ ಮೈತುಂಬಿಕೊಂಡು ರಾಷ್ಟ್ರಕ್ಕೆ ಸಮರ್ಪಿತವಾಯಿತು.

ದ.ರಾ.ಬೇಂದ್ರೆಯವರು ತಮ್ಮ ಒಂದು ಕವಿತೆಯಲ್ಲಿ

” ಕದಡಿದ ನೀರಿಗೆ ಕೈ ಹಾಕಿ ಕಲಕಬ್ಯಾಡ್ರಿ.
ನೆಲಕ್ಕ ನೆಲ ಸೇರ್ತದ ಜಲಕ್ಕೆ ಜಲ ಸೇರ್ತದ
ಅದಕ್ಕ ಗೊತ್ತದ ಅದರ ಬೇರು
ಸುಮ್ಮನ ಯಾಕ್ ಕಲಕ್ತೀರಿ ನೀರು
ಸುಮ್ಮನ ಇದ್ರ ಸಾಕು”

ಚೆನ್ನಾಗಿ ಸುಂದರವಾಗಿ ಬೆಳೆಯುತ್ತಿರುವ ಪರಿಸರ ಹಾಳು ಮಾಡಿ ಅಂದಗೆಡಿಸದೆ ಅದರ ಪಾಡಿಗೆ ಅದನ್ನು ಬಿಡಿ ಎಂಬ ಸಂದೇಶ ನೀರಿನ ಮೂಲಕ ತಮ್ಮ ನುಡಿಯಾಡಿದ ಬೇಂದ್ರೆಯವರ ಜಾಣ ತಿಳುವಳಿಕೆಯನ್ನು ನಾವಿಂದು ಸ್ಮರಿಸಬೇಕಾಗಿದೆ.

1990 ರಿಂದ ಈಚೆಗೆ ಕರ್ನಾಟಕ ಕೇರಳ ಮಹಾರಾಷ್ಟ್ರ ತಮಿಳುನಾಡು ರಾಜ್ಯಗಳ ಪರಿಸರವಾದಿಗಳೆಲ್ಲ ಒಂದಾಗಿ ಪಶ್ಚಿಮ ಘಟ್ಟ ಉಳಿಸಿ ಪರಿಸರ ಕಾಳಜಿ ಬೆಳೆಸಿ ಆಂದೋಲನ ಹಮ್ಮಿಕೊಳ್ಳುವ ಮೂಲಕ 100 ದಿನಗಳ ಪಾದಯಾತ್ರೆ ಮಾಡಿದರು. ಸಾಲು ಮರದ ತಿಮ್ಮಕ್ಕನಂಥವರು ನೂರಾರು ಮರಗಳ ಬೆಳೆಸಿ ಪರಿಸರ ಕಾಳಜಿ ತೋರಿದರು.

ಬಸರೀಗಿಡದ ವೀರಪ್ಪನವರು ಕೂಡ ಬಸರೀಗಿಡಗಳನ್ನು ಕಿಲೋ ಮೀಟರುಗಳಷ್ಟು ರಸ್ತೆಯ ಎರಡೂ ಬದಿಗಳಲ್ಲಿ ಬೆಳೆಸಿದ್ದರು ಎಂಬುದನ್ನು ನೆನಯಬೇಕು.ಕರ್ನಾಟಕದಲ್ಲಿ ಅನೇಕ ಮಠಮಾನ್ಯಗಳ ಸ್ವಾಮೀಜಿಗಳು ಕೂಡ ಇಂದು ಪರಿಸರ ಕಾಳಜಿ ಕುರಿತು ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರ ಕಾಳಜಿ ಮುಂದುವರೆಸಿದ್ದು ಕೇವಲ ಒಬ್ಬರಿಂದ ಆಗದ ಇಂಥ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಗೂಡಿದಾಗ ಪರಿಸರ ದಿನ ಆಚರಿಸಿದ್ದು ಸೂಕ್ತವಾಗುತ್ತದೆ.

ಜೂನ್ 5 ವಿಶ್ವ ಪರಿಸರ ದಿನ, ಏಪ್ರಿಲ್ 22 ಭೂದಿನ, ಏಪ್ರಿಲ್ 26 ಚರ್ನೊಬಿಲ್ ದಿನ, ಆಗಸ್ಟ 6 ಹೀರೋಶೀಮಾ ದಿನ, ಡಿಸೆಂಬರ್ 4 ಭೂಪಾಲ್ ದಿನ,ಮಾರ್ಚ 22 ವಿಶ್ವ ಜಲ ದಿನ ಹೀಗೆ ಪರಿಸರ ಕಾಳಜಿಯುಳ್ಳ ದಿನಗಳ ಆಚರಣೆಗಳು ನಮ್ಮಲ್ಲಿವೆ ಆದರೆ ಅದರ ರಕ್ಷಣೆಗಾಗಿ ಒಂದು ದಿನ ಆಚರಣೆಗಷ್ಟೇ ಸೀಮಿತಗೊಳಿಸದೇ ಪ್ರತಿದಿನ ಪರಿಸರ ದಿನ ಎಂಬ ಪ್ರೊ ;ನಾಗೇಶ ಹೆಗಡೆ ಯವರ ಮಾತಿನಂತೆ ನಡೆಯಬೇಕಾದ ಅಗತ್ಯತೆ ಇದೆ.

ಪ್ರಕೃತಿ ಮಾನವನಿಗೆ ಬಳುವಳಿಯಾಗಿ ನೀಡಿದ ಅಮೂಲ್ಯವಾಗ ಸಂಪತ್ತು ಅರಣ್ಯಗಳು. ಕಾಡಿಲ್ಲದೇ ನಾಡಿಲ್ಲ.ಹಸಿರಲ್ಲದೆ ಉಸಿರಿಲ್ಲ.ಅರಣ್ಯಗಳು ರಾಷ್ಟ್ರದ ಜೀವನಾಡಿ.ಆಹಾರದ ಅಕ್ಷಯಪಾತ್ರೆ, ನಾವಿಂದು ಪ್ರಕೃತಿದತ್ತವಾದ ಆಹಾರ-ಗಾಳಿ-ಬೆಳಕು-ನೀರು ಮುಂತಾದ ಎಲ್ಲವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದೇವೆ. ನಮ್ಮ ಸುತ್ತಲೂ ಹರಡಿದ ಈ ನೈಸರ್ಗಿಕ ಸಂಪತ್ತು ಸಕಲ ಜೀವರಾಶಿಗಳನ್ನು ಪೋಷಿಸುತ್ತಲಿದೆ.

ಇಂಥ ಪರಿಸರ ಹಾಳು ಮಾಡದೇ ಪರಿಸರ ರಕ್ಷಣೆಯ ಕಾಳಜಿ ನಾವೆಲ್ಲ ವಹಿಸಬೇಕಾಗಿದೆ. ಓಝೋನ್ ಪದರ ನಾಶದಿಂದಾಗಿ ಚಿಲಿ ಮತ್ತು ಆಸ್ಟ್ರೇಲಿಯಾ ದೇಶದ ಕೆಲವು ಭಾಗದ ಸ್ಥಳಗಳಲ್ಲ್ಲಿ ಬೆಳಗಿನ ಹೊತ್ತು ಸೂರ್ಯನ ಕಿರಣಗಳಲ್ಲಿ ಬರುವ ಅಲ್ಟ್ರಾವೈಲೆಟ್ ಎಂಬ ಕಿರಣದ ಸೋಂಕಿನಿಂದಾಗಿ ಚರ್ಮದಲ್ಲಿ ತೂತು ಉಂಟಆಗುತ್ತಿದೆಯಂತೆ ಇದರಿಂದಾಗಿ ಬೆಳಗಿನ ಜಾವ ಅವರು ಮೈ ಕೈ ಎಲ್ಲದಕ್ಕೂ ಪೋಷಾಕು ತೊಟ್ಟುಕೊಂಡು ಅಡ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ ಅಂದರೆ ಬೆಳಗಿನ ಹೊತ್ತು ನಮಗೆಲ್ಲ ವಾಯು ವಹಾರದ ಸಮಯವಾದರೆ ಚಿಲಿ ದೇಶದವರಿಗೆ ಚರ್ಮಸೊಕ್ಕು ರೋಗಕ್ಕೆ ತಕ್ಕ ಸಮಯವಾಗಲು ಕಾರಣ ಅಲ್ಲಿನ ಹೆಚ್ಚಿನ ಕಾರ್ಖಾನೆಗಳು ಸೂಸುವ ವಿಷಕಾರಿ ಅನಿಲದಲ್ಲಿನ ವಿಕಿರಣ ವಸ್ತುಗಳು ಸೂರ್ಯನ ಕಿರಣಗಳ ಮೂಲಕ ಭೂಮಿಯನ್ನು ತಲುಪುತ್ತಿರುವುದು ಕಾರಣ.

ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮಾರಾಟ ಇರುವ ಹೊಲ ಗದ್ದೆಗಳು ಕೂಡ ರಿಯಲ್ ಎಸ್ಟೇಟ್ ದಂಧೆಯಲ್ಲಿ ಸಿಕ್ಕು ಎಲ್ಲಿ ನೋಡಿದಲ್ಲಿ ಅಪಾರ್ಟಮೆಂಟ್ ತಲೆಎತ್ತುವ ಮೂಲಕ ಬೇಸಾಯಕ್ಕೂ ಭೂಮಿ ಉಳಿಯುತ್ತಿಲ್ಲವಾಗಿದೆ ಅಷ್ಟೇ ಅಲ್ಲ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ ರೈತ ಜೋಳ,ಗೋಧಿ,ತರಕಾರಿ ಬೆಳೆಗಳತ್ತ ಮುಖ ತೋರಿಸದಿರುವ ಕಾರಣ ಅದರಲ್ಲೂ ಮಳೆ ಇಲ್ಲದೇ ತರಕಾರಿಗಳ ಬೆಲೆ ದಿನದಿನಕ್ಕೆ ಗಗನಕ್ಕೆ ಏರುತ್ತಿದೆ ಅಂದರೆ ಬೇಕಾಗುವಷ್ಟು ಸ್ಥಳದಲ್ಲಿ ಬೆಳೆ ಫಸಲು ತಗೆಯಲು ಆಗುತ್ತಿಲ್ಲ ಇದು ಕೂಡ ಪರಿಸರದ ಮೇಲೆ ಪ್ರಭಾವ ಬೀರುವ ಅಂಶವೇ.‌ ಅದಕ್ಕೆ ನಮ್ಮ ವಚನಕಾರರು

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದರೆ
ಆ ಬೆವಸಾಯದ ಘೋರವೇತಕಯ್ಯ.?
ಕ್ರಯ ವಿಕ್ರಯವ ಮಾಡಿ ಮನೆಯ ಸಂಚ ನಡೆಯದಿದ್ದರೆ
ಆ ಕ್ರಯವಿಕ್ರಯದ ಘೋರವೇತಕಯ್ಯ.?
ಒಡೆಯನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಒಡೆಯನ ಓಲಗದ ಘೋರವೇತಕಯ್ಯ.?
ಭಕ್ತನಾಗಿ ಭವಂ ನಾಸ್ತಿಯಾಗದಿದ್ದರೆ ಆ ಉಪದೇಶವ ಕೊಟ್ಟ ಗುರು
ಕೊಂಡ ಶಿಷ್ಯ ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ
ಗುಹೇಶ್ವರ ಲಿಂಗವೆತ್ತಲೆ ಹೋಗಲಿ

ಕೇವಲ ಹಣ ಸಂಪಾದನೆಗೋಸ್ಕರ ಸಂಬಂಧಗಳನ್ನು ತಿರಸ್ಕರಿಸಿ ಮಾಡುವ ವಾಣಿಜ್ಯೀಕರಣದ ಬದುಕಿನಲ್ಲಿ ನಾವು ಸ್ಪಂದನೆ ಕಳೆದುಕೊಳ್ಳುವ ಮೂಲಕ ನಮ್ಮತನ ನಮ್ಮ ಸಂಸ್ಕøತಿ, ಸಂಸ್ಕಾರ ಮರೆಯುತ್ತಿದ್ದೇವೆ.

ನಿತ್ಯ ಉಣ್ಣುವ ತುತ್ತು ಅನ್ನದಲ್ಲಿ ಒಂದು ತುತ್ತಿಗಾಗುವಷ್ಟು ಇತರರ ನೆರವಿಗೆ ಎಂದು ಎತ್ತಿಡುವ ಬದುಕು ನಮ್ಮದಾಗಬೇಕಿದೆ. ಕ್ರಯ ವಿಕ್ರಯವ ಮಾಡಿ ಮನೆಯ ಸಂಚ ನಡೆಯದಿದ್ದರೆ ಆ ಕ್ರಯ ವಿಕ್ರಯದ ಘೋರವೇತಕಯ್ಯ ಎಂಬಂತೆ ನಮ್ಮ ಬದುಕಾಗದೇ ಇರುವ ಭೂಮಿಯ ಉಳಿಸಿ ಅದರಲ್ಲಿ ನಮಗೂ ನಮ್ಮ ಸಂಬಂಧಿಗಳಿಗೂ ಆಗುವಷ್ಟನ್ನು ಬೆಳೆದು ಉಳಿದುದನ್ನು ಮಾರಿ ಅದರಲ್ಲೂ ದಾನ ಧರ್ಮಕ್ಕೆಂದು ಹಣ ತಗೆದಿಡುವ ಮೂಲಕ ಅಳಿಯುತ್ತಿರುವ ಭೂಮಿಯಲ್ಲಿಯೂ ಕೂಡ ಉತ್ತಮ ವ್ಯವಸಾಯವನ್ನು ಮಾಡಬಹುದು ಎಂಬುದನ್ನು ಪ್ರಭುದೇವರ ಮೇಲಿನ ವಚನ ತಿಳಿಸುತ್ತದೆ.

ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಗೆ ಒತ್ತು ಬರುತ್ತಿದೆ. ಜೊತೆಗೆ ಗೋಮಾತೆಯ ಮಹತ್ವದ ಅರಿವೂ ಆಗುತ್ತಿದೆ.ಅದು ಇನ್ನಷ್ಟು ಹೆಚ್ಚಬೇಕು.ಆಕ್ಸಿಜನ್ ಪ್ರಮಾಣ ಜವಾರಿ ಆಕಳುಗಳಲ್ಲಿ ಇರುತ್ತದೆ ಎಂಬುದನ್ನು ಕನೇರಿ ಮಠದ ಪೂಜ್ಯರು ಒಂದು ಜವಾರಿ ಆಖಲಿಗಿರುವ ಮೌಲ್ಯವನ್ನು ಹಂತಹಂತವಾಗಿ ತಿಳಿಸಿರುವುದನ್ನು ಪ್ರತಿಯೊಬ್ಬರೂ ಗಮನಿಸುವ ಜೊತೆಗೆ ಗೋವುಗಳ ಸಾಕಣೆಯ ಮಹತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.

25 ಮೇ 2013ರ ದಿನಪತ್ರಿಕೆಯಲ್ಲಿ ಕೇವಲ ಆಂದ್ರಪ್ರದೇಶ ರಾಜ್ಯವೊಂದರಲ್ಲಿ ಏಪ್ರಿಲ್ ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನಕ್ಕೆ ಸತ್ತವರ ಸಂಖ್ಯೆ 301 ಅಂದರೆ ಸೂರ್ಯನ ಕಿರಣಗಳು ಭೂಮಿಯನ್ನು ಯಾವ ರೀತಿ ಸ್ಪರ್ಶಿಸುವ ಮೂಲಕ ತಾಪಮಾನದಲ್ಲಿ ಏರಿಕೆಯಾಗುತ್ತಿದೆ ಎಂಬುದನ್ನು ನಾವು ಚಿಂತನೆ ಮಾಡಿ ನಮ್ಮ ಗಿಡ ಮರ ನೀರು ರಕ್ಷಿಸುವ ಕಾರ್ಯದಲ್ಲಿ ಸಕ್ರಯವಾಗಿ ಯೋಚಿಸಿ ಮುನ್ನಡೆಯದಿದ್ದರೆ ಕರ್ನಾಟಕದಲ್ಲು ಕೂಡ ಈ ಪರಿಸ್ಥಿತಿ ಬರುವ ದಿನಗಳು ದೂರವಿಲ್ಲ.

ಕಾರಣ ಜೂನ್ 5 ಪರಿಸರ ದಿನ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೇ ಶರಣರು ನೀಡಿದ ಹಿತವಚನಗಳ ನೆಲೆಯಲ್ಲಿ ಬದುಕನ್ನು ರಕ್ಷಿಸಿ ಉತ್ತಮ ಸಂಸ್ಕಾರದೊಡನೆ ಗಿಡ ಮರ ಬೆಳೆಸೋಣ.

ಮಳೆಯ ಪ್ರಮಾಣ ತಗ್ಗಿದೆ ಇನ್ನು ಮೇಲೆ ಬರುವ ಮಳೆಯಿಂದ ಮಳೆ ನೀರು ಕೋಯ್ಲು ಅಳವಡಿಸಿ ಪೋಲಾಗುವ ನೀರನ್ನು ರಕ್ಷಿಸುವ ಜೊತೆಗೆ ವ್ಯವಸಾಯದ ಭೂಮಿಯನ್ನು ಹಣ ಸಿಗುತ್ತಿದೆ ಎಂದುಕೊಂಡು ಉಪ್ಪರಿಗೆ ಮನೆಗಳ ನಿರ್ಮಾಣಕ್ಕೆ ಮಾರಿ ಕೇವಲ ಹಣ ಸಂಪಾದನೆಗೆ ಮುಂದಾಗುವ ಬದಲು ವ್ಯವಸಾಯಕ್ಕೆ ಉಳಿಸಿಕೊಂಡು ಉತ್ತಮ ಫಸಲು ತಗೆಯುವ ಮೂಲಕ ಭುವಿಯನ್ನು ರಕ್ಷಿಸುವ ಯೋಜನೆ ರೂಪಿಸೋಣವಲ್ಲವೇ?

ಇರುವ ಭೂಮಿಯನ್ನಾದರೂ ರಾಸಾಯನಿಕ ಮುಕ್ತ ಭೂಮಿಯನ್ನಾಗಿ ಉಳಿಸಿಕೊಳ್ಳುವ ಜೊತೆಗೆ ಸಾವಯವ ಕೃಷಿಯತ್ತ ಮುಖ ಮಾಡುವ ಮೂಲಕ ಕಲುಷಿತವಾಗುತ್ತಿರುವ ಭೂಮಿಯನ್ನು ಪರಿಶುದ್ಧ ಮಾಡಿಕೊಂಡು ಶುದ್ಧ ಸ್ವಚ್ಚ ಬದುಕನ್ನು ನಡೆಸಿ ಅದನ್ನು ಇತರರಿಗೂ ತಿಳಿಸಿ ಅವರನ್ನೂ ನಮ್ಮ ಜೊತಗೆ ಕೈ ಜೋಡಿಸುವಂತೆ ಮಾಡುವ ನಿಟ್ಟಿಯನಲ್ಲಿ ಪ್ರಯತ್ನಗಳು ನಡೆದರೆ ಮಾತ್ರ ನಮ್ಮ ಪರಿಸರ ನಾವು ಉಳಿಸಲು ಸಾಧ್ಯ. ಅದಕ್ಕೆ ನಾಗೇಶ ಹೆಗಡೆಯವರು ಹೇಳಿದಂತೆ ಪ್ರತಿದಿನ ಪರಿಸರ ದಿನವಾಗಲಿ. ಕೇವಲ ಅದು ಜೂನ್ 5 ಆಚರಣೆಗಷ್ಟೇ ಸೀಮಿತವಾಗದಿರಲಿ.


ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group