Homeಸುದ್ದಿಗಳುಕಲ್ಲೋಳಿ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಕಲ್ಲೋಳಿ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಸಮಾಜಕ್ಕೆ ಕೆಎಲ್‍ಇ ಸಂಸ್ಥೆಯ ಕೊಡುಗೆ ಅಪಾರವಾದದ್ದು’  

ಮೂಡಲಗಿ: ‘ಕೆಎಲ್‍ಇ ಸಂಸ್ಥೆಯು ಶಿಕ್ಷಣ ಕ್ಷೇತ್ರ ಮತ್ತು ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಲಿದೆ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತದ ಸಹಸಂಘ ಸಂಚಾಲಕ ಅರವಿಂದರಾವ್ ದೇಶಪಾಂಡೆ ಹೇಳಿದರು. 

ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನದ ಅಮೃತ ಮಹೋತ್ಸವ ಅಂಗವಾಗಿ ಬೆಳಗಾವಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿಯ ಜೆ. ಎನ್. ವೈದ್ಯಕೀಯ ಕಾಲೇಜು ಹಾಗೂ ಕಲ್ಲೋಳಿಯ ಪ್ರಿಯದರ್ಶಿನಿ ಕೋ.ಆಪ್ ಕ್ರೆಡಿಟ್ ಸೊಸೈಟಿ ಇವರ ಸಹಯೋಗದಲ್ಲಿ ಜರುಗಿದ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಮಾಡಬೇಕಾಗಿರುವ ಕೆಲಸವನ್ನು ಕೆಎಲ್‍ಇ ಸಂಸ್ಥೆಯು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

150 ವೈದ್ಯರ ತಂಡದೊಂದಿಗೆ ಕೆಎಲ್‍ಇ ಆಸ್ಪತ್ರೆಯ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ.  ರಾಮಾಯಣದಲ್ಲಿ ಹನುಮಂತನು ಸಂಜೀವಿನಿಗಾಗಿ ಪರ್ವತವನ್ನೇ ಹೊತ್ತು ತಂದಂತೆ ವೈದ್ಯಕೀಯ ವ್ಯವಸ್ಥೆಯನ್ನು ಬಸವೇಶ್ವರ ಶಿಕ್ಷಣ ಸಂಸ್ಥೆಯವರು ಕಲ್ಲೋಳಿಯಲ್ಲಿ  ಮಾಡಿರುವುದು ಮಾದರಿಯಾಗಿದೆ ಎಂದರು.  

ಮಾಜಿ ಶಾಸಕರು ಹಾಗೂ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ ಕೆಎಲ್‍ಇ ಸಂಸ್ಥೆಯು ಸದ್ಯ 298 ಸಂಸ್ಥೆಗಳನ್ನು ನಡೆಸುತ್ತಲಿದೆ. ಖಾಸಗಿ ವಲಯದಲ್ಲಿ ಒಟ್ಟು 4500 ಬೆಡ್‍ಗಳನ್ನು ಹೊಂದಿರುವ ದೇಶದಲ್ಲಿ ಏಕೈಕ ಖಾಸಗಿ ಸಂಸ್ಥೆಯಾಗಿದೆ. ಸಂಸ್ಥೆಯು  ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ಡಾ. ಪ್ರಭಾಕರ ಕೋರೆ ಅವರ ಅಗಾಧವಾದ ಶಕ್ತಿ ಹಾಗೂ ಅವರ ಪರಿಶ್ರಮ ಇದಕ್ಕೆಲ್ಲ ಕಾರಣವಾಗಿದೆ ಎಂದರು.

ಸಾನ್ನಿಧ್ಯವಹಿಸಿದ್ದ ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಾತನಾಡಿ ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯವರು ಕೆಎಲ್‍ಇ ಆಸ್ಪತ್ರೆಯ ಸಹಕಾರದೊಂದಿಗೆ ಜನರ ಮನೆ ಬಾಗಿಲಿಗೆ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಅನನ್ಯವಾದ ಸೇವೆಗೈಯುತ್ತಿರುವುದು ಶ್ಲಾಘನೀಯ ಕೆಲಸ ಎಂದರು.  ಎಂದರು. 

ಕಲ್ಲೋಳಿಯಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ನಿರ್ಮಿಸುವ ಮೂಲಕ ಈರಪ್ಪ ಬೆಳಕೂಡ ಅವರು ಆಧ್ಯಾತ್ಮಿಕವಾಗಿ ಬಹುದೊಡ್ಡ ಕಾರ್ಯಮಾಡಿದ್ದರು. ಈಗ ಸತತ ಕಳೆದ ಮೂರು ವರ್ಷಗಳಿಂದ ಉಚಿತ ಆರೋಗ್ಯ ತಪಸಣೆ ಮಾಡಿಸುವ ಮೂಲಕ ಬೆಳಕೂಡ ಕುಟುಂಬವು ಜನಸೇವೆಯಲ್ಲಿ ತೊಡಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ ಬೆಳಕೂಡ ಮಾತನಾಡಿ, ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಇದು ಮೂರನೇ ಬಾರಿ ಏರ್ಪಡಿಸಿದ್ದು, ಸಾವಿರಾರು ಜನರು ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.  

ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಈರಪ್ಪ ಬೆಳಕೂಡ, ಕೆಎಲ್‍ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಉಸ್ತುವಾರಿ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ಕುಡಚಿ, ತುಕ್ಕಾನಟ್ಟಿಯ ಡಾ. ಉಲ್ಲಾಸಕುಮಾರ, ಪದವಿ ಕಾಲೇಜು ಪ್ರಾಚಾರ್ಯ ಡಾ. ಎಸ್.ಎಸ್. ಹೂಗಾರ ಮತ್ತು ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಬಿ. ಮನ್ನಿಕೇರಿ ವೇದಿಕೆಯಲ್ಲಿದ್ದರು.

ವೈದ್ಯಕೀಯ ತಪಾಸಣೆಯಲ್ಲಿ ಒಟ್ಟು 6000ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿ ವಿವಿಧ ವಿಭಾಗದಲ್ಲಿ ತಮ್ಮ ಆರೋಗ್ಯವನ್ನು ತಪಾಸಣೆಯನ್ನು ಮಾಡಿಕೊಂಡರು. ಶಿಬಿರದಲ್ಲಿ ರೂ. 5 ಲಕ್ಷಕ್ಕೂ ಅಧಿಕ ಮೌಲ್ಯದ ಉಚಿತ ಔಷಧಿಗಳನ್ನು ವಿತರಿಸಿದರು.  

ಭೋಜರಾಜ ಬೆಳಕೂಡ ಸ್ವಾಗತಿಸಿದರು, ರಮೇಶ ಹೆಬ್ಬಾಳ ನಿರೂಪಿಸಿದರು, ಗುರು ಖಡಕಬಾವಿ ವಂದಿಸಿದರು.

RELATED ARTICLES

Most Popular

close
error: Content is protected !!
Join WhatsApp Group