ಬೆಳಗಾವಿ: ದಾಸ ಶ್ರೇಷ್ಠ, ಮಹಾನ್ ಸಂತ, ದಾರ್ಶನಿಕ, ಕವಿ, ಭಕ್ತ ಕನಕದಾಸರ ಜಯಂತಿಯನ್ನು ನಗರದ ಕೇಂದ್ರ ಗ್ರಂಥಾಲಯದಲ್ಲಿ ಆಚರಿಸಲಾಯಿತು.
ಉಪನಿರ್ದೇಶಕರಾದ ರಾಮಯ್ಶಾ ಅವರು ಪೂಜೆ ನೆರವೇರಿಸಿ ಮಾತನಾಡಿ, ಕನಕದಾಸರ ಜೀವನ ಮತ್ತು ಅವರ ತತ್ವ, ಕೀರ್ತನೆಗಳಲ್ಲಿ ಅವರು ತೋರಿದ ಮಾರ್ಗಗಳನ್ನು ನೆನೆದರು.
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧೀಕ್ಷಕರಾದ ಕಾಂಬಳೆ, ಪ್ರಕಾಶ ಇಚಲಕರಂಜಿ, ಆನಂದ ಮುತ್ತಗಿ, ಸುಮಿತ್ ಕಾವಳೆ, ಸುನಿಲ್, ರಾಜು ಕಟ್ಟಿಮನಿ ಮತ್ತು ಓದುಗರು, ವಿದ್ಯಾರ್ಥಿಗಳೂ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕನಕದಾಸರ ಜೀವನ, ಸಾಹಿತ್ಯ,ಸಾಧನೆ ಮತ್ತು ಅವರ ಕೀರ್ತನೆಗಳ ಕುರಿತ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.