ಅಧೀಕೃತ ಆದೇಶಕ್ಕಾಗಿ-ನವ್ಹಂಬರ ತಿಂಗಳ ಗಡುವು ನೀಡಿದ ಗಡಾದ
ಮೂಡಲಗಿ – ಕನ್ನಡ ನಾಡ ಧ್ವಜಕ್ಕೆ ಶಾಸನಬದ್ಧ ವಿನ್ಯಾಸ ರೂಪಿಸಿ, ರಾಜ್ಯದ ಎಲ್ಲ ಸರಕಾರಿ/ಅರೇ ಸರಕಾರಿ ಕಛೇರಿಗಳ ಕಟ್ಟಡಗಳ ಮೇಲೆ, ಪ್ರತಿನಿತ್ಯ “ಕನ್ನಡ ನಾಡ ಧ್ವಜ ಹಾರಿಸಲು” ಇದೇ ನವ್ಹಂಬರ ತಿಂಗಳ ಅಂತ್ಯದೊಳಗಾಗಿ ಅಧಿಕೃತ ಆದೇಶ ಹೊರಡಿಸದಿದ್ದರೆ ಕನ್ನಡ ಪರ ಸಂಘಟನೆಗಳೊಂದಿಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಮತ್ತು ಬರುವ ಚುನಾವಣೆಯಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಈ ಕುರಿತು ದಿನಾಂಕ : 24/11/2014ರಂದು ಸರಕಾರಕ್ಕೆ ಪತ್ರಸ್ತಾವಣೆಯನ್ನು ಸಲ್ಲಿಸಲಾಗಿತ್ತು. ಸುಮಾರು ವರ್ಷಗಳ ಹೋರಾಟದ ನಂತರ ಕೊನೆಗೂ ಎಚ್ಚತ್ತುಕೊಂಡ ಸರಕಾರ ಈಗಿರುವ ಕನ್ನಡ ನಾಡ ಧ್ವಜಕ್ಕೆ ಹೊಸ ವಿನ್ಯಾಸವನ್ನು ಸಿದ್ಧ ಪಡಿಸಿ ಅದಕ್ಕೆ ಕಾನೂನಿನ ಸ್ವರೂಪ/ಮಾನ್ಯತೆ ನೀಡುವ ಸಲುವಾಗಿ ದಿನಾಂಕ: 06/06/2017ರಂದು 09 ಜನ ಅಧಿಕಾರಿ/ಅಧಿಕಾರೇತರ ಸದಸ್ಯರುಗಳ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಸಾಕಷ್ಟು ವಿಳಂಬದ ನಂತರ ಈ ಸಮಿತಿಯೂ ಸುಮಾರು ಸಲ ಸಭೆ ಸೇರಿ ನಾಡಿನ ಹಿರಿಯ ಸಾಹಿತಿಗಳು, ಕನ್ನಡ ಪರ ಚಿಂತಕರು ಮತ್ತು ಪ್ರಮುಖ ಕನ್ನಡ ಪರ ಸಂಘಟನೆಗಳ ಮುಖಂಡರುಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿ ಈಗಿರುವ ನಮ್ಮ ನಾಡ ಧ್ವಜಕ್ಕೆ ಅಂತಿಮ ವಿನ್ಯಾಸ ಸಿದ್ಧಪಡಿಸಿ ಈ ಪ್ರಸ್ತಾವಣೆಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಅಂಗೀಕಾರ ಪಡೆದು ಸಾಕಷ್ಟು ಪರ ವಿರೋಧಗಳ ನಡುವೆ ಈ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ರಾಜ್ಯ ಸರಕಾರದಿಂದ ಕೇಂದ್ರಸರಕಾರಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.
ಆದರೆ ಈ ಪ್ರಸ್ತಾವನೆಯು ಈಗ ಯಾವ ಹಂತದಲ್ಲಿರುವುದು ಎಂದು ಮಾಹಿತಿ ಹಕ್ಕಿನಿಂದ ಅರ್ಜಿಗಳನ್ನು ಸಲ್ಲಿಸಿದ್ದರೂ ಕೂಡಾ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ, ಅಲ್ಲದೇ ಈಗಿರುವ ಸರಕಾರ ಈ ಕುರಿತು ಮೌನ ವಹಿಸಿರುವುದು ಸಮಸ್ತ ಕನ್ನಡಿಗರ ಭಾವನೆಯನ್ನು ಕೆರಳಿಸಿದಂತಾಗಿದೆ. ಅಲ್ಲದೇ ಈ ಸರಕಾರವು ನಿಜವಾಗಿಯೂ ಕನ್ನಡ ಪರವಾಗಿರುವ ಸರಕಾರವೇ ಎಂಬ ಅನುಮಾನ ಬರುತ್ತಿರುವುದು ಎಂದು ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ದಿನಾಂಕ: 07/06/2022ರಂದು ಸರಕಾರಕ್ಕೆ ದಾಖಲೆಗಳ ಸಮೇತವಾಗಿ ಪತ್ರ ಬರೆದಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಸದರ ಪತ್ರದಲ್ಲಿ ದೂರಲಾಗಿದ್ದು ಮಾತು-ಮಾತಿಗೂ ಕನ್ನಡ ಕನ್ನಡ ಎಂದು ಹೇಳುತ್ತಿರುವ ಸರಕಾರದಲ್ಲಿರುವ ಸಚಿವರುಗಳು ಹಾಗೂ ಅಧಿಕಾರಿಗಳು ಈ ಕುರಿತು ಕೂಡಲೇ ಕ್ರಮ ಕೈಗೊಂಡು ಇದೇ ನವ್ಹಂಬರ ತಿಂಗಳ ಅಂತ್ಯದೊಳಗಾಗಿ ಎಲ್ಲ ಸರಕಾರಿ ಹಾಗೂ ಅರೇ ಸರಕಾರಿ ಕಛೇರಿಗಳ ಕಟ್ಟಡಗಳ ಮೇಲೆ ಕನ್ನಡ ನಾಡ ಧ್ವಜ ಹಾರಿಸಲು ಅಧಿಕೃತ ಆದೇಶ ಹೊರಡಿಸದಿದ್ದರೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ ಬರುವ ಚುನಾವಣೆಯಲ್ಲಿ ಸರಕಾರ ಇದರ ಪರಿಣಾಮ ಎದುರಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.