ಒಂಟಿ ಜೀವ..
ಒಂಟಿ ಜೀವ ನಾನೆಂಬ ,
ಆತಂಕ ಬೇಡ ,
ಜಗದ ಉತ್ತಮ ನಿಲುವುಗಳು
ರೂಪುಗೊಂಡಿದ್ದು ,
ಒಂಟಿ ಆಲೋಚನೆಯ ಜಗದಲ್ಲಿ…
ಹಿಟ್ಲರ್ ನ ಅಧಿಕಾರ ದಾಹಕೆ ,
ಜಗತ್ತೇ ತಲ್ಲಣಿಸಿತು ,
ಘಜನಿ ಮಹಮ್ಮದ್ ನ
ಅಧಿಕಾರ ದಾಹದ ಆಲೋಚನೆಗೆ ,
ಭಾರತದ ಮೇಲೆ
ಹದಿಮೂರು ಬಾರಿ ಧಾಳಿಯಾಯ್ತು.
ಬಸವಣ್ಣನ ಸಮಾನತೆ,ಕಾಯಕ ತತ್ವಕೆ
ಕಲ್ಯಾಣದಲಿ ಮಹೋನ್ನತ ಕ್ರಾಂತಿಯಾಯ್ತು…
ಬುದ್ದ-ಮಹಾವೀರರ ಚಿಂತನೆಗೆ
ಸತ್ಯ-ಅಹಿಂಸೆ ಸಾರುವ
ಹೊಸ ಧರ್ಮ ಗಳ ಜನನವಾಯ್ತು,
ಗಾಂಧೀಜಿಯವರ ಸತ್ಯ,ತ್ಯಾಗ, ಅಹಿಂಸೆಯ ಹೋರಾಟಕೆ
ಭಾರತದಲಿ ಬ್ರಿಟೀಷರ ಆಳ್ವಿಕೆ ಕೊನೆಯಾಯ್ತು…
ಆರ್ಯಭಟನ ‘ಸೊನ್ನೆ’ ಅಂಕಿಯ ಸಂಶೋಧನೆ ,
ಗಣಿತ ಲೋಕದಲಿ ವಿಶ್ವಕೆ ಬೆಳಕು ತಂತು,
ಅಬ್ದುಲ್ ಕಲಾಂರ ವೈಜ್ಞಾನಿಕ ನಿರ್ಧಾರಕೆ,
ಬಾಹ್ಯಾಕಾಶದಲಿ ಭಾರತಕೆ ಕೀರ್ತಿ ಬಂತು…..
ಜಗದ ಅಭ್ಯುದಯದ ಹಿಂದೆ ,
ಒಂಟಿ ಜೀವದ ನಿರ್ಧಾರವಿದೆ,
ನಿರಂತರ ಕಠಿಣ ಪರಿಶ್ರಮ,
ತನ್ನ ನಿರ್ಧಾರವ ಜಗಕೆ ತಿಳಿಸುವ ,
ಜಗದ ಜನರ ಮನವ ಸೆಳೆಯುವ
ಮನೋಬಲದ ನಿರ್ಧಾರವಿದೆ..
ಒಂಟಿತನದ ಬೇಸರ ಬಿಡು ,
ಜೀವನದ ಖಚಿತ ನಿರ್ಧಾರವ
ಒಂಟಿಯಾಗಿ ಕುಳಿತು ಮಾಡಿಬಿಡು,
ಆಪ್ತರಲಿ ಸಲಹೆ-ಸಹಕಾರಪಡೆದುಬಿಡು,
ಜೀವನದಲಿ ಅಭ್ಯುದಯದತ್ತ ಸಾಗಿಬಿಡು
ಡಾ.ಭೇರ್ಯ ರಾಮಕುಮಾರ್ ,
ಸಾಹಿತಿಗಳು,ಪತ್ರಕರ್ತರು