ಸ್ವಚ್ಛ ಸಮಾಜ ನಿರ್ಮಾಪಕರು..
ಚಳಿ ಇರಲಿ, ಬಿಸಿಲಿರಲಿ,
ಮಳೆ ‘ಧೋ ಎಂದು ಸುರಿಯುತಿರಲಿ,
ನಿಮ್ಮ ಸೇವೆಯೇ ನಮ್ಮ ಧರ್ಮ,
ಬಸವಣ್ಣನ ಕಾಯಕ ತತ್ವದಲಿ
ಅನುದಿನ ಬಾಳುತಿಹೆವು ,
ಸ್ವಚ್ಛ ಸಮಾಜ ನಿರ್ಮಾತೃಗಳು
ನಾವು ಪೌರಕಾರ್ಮಿಕರು…
ಕೆಟ್ಟುನಿಂತ ಒಳಚರಂಡಿಗಳ,
ಅನೈರ್ಮಲ್ಯದ ರಸ್ತೆಗಳ ದುರಸ್ತಿ ಗೊಳಿಸಿ,
ಬೆಳೆದುನಿಂತ ಗಿಡಗಂಟಿಗಳ ಕಿತ್ತು,
ಆರೋಗ್ಯಕರ ಸಮಾಜ ನಿರ್ಮಾಣ ಮಾಡುವೆವು
ಸಮಾಜದ ಒಳಿತಿಗಾಗಿ
ನಮ್ಮ ಕೈಕಾಲುಗಳ ಕೊಳೆ ಮಾಡಿಕೊಳ್ಳುವೆವು..
ಸ್ವಚ್ಛ ಭಾರತ ನಿರ್ಮಾಣಕ್ಕೆ ಪ್ರಾಣವನೇ ಮೀಸಲಿಟ್ಟಿಹೆವು ,
ನಾವು ಪೌರಕಾರ್ಮಿಕರು…
ತಲೆತಲಾಂತರದಿಂದ ಸ್ವಚ್ಛ ಸಮಾಜಕೆ
ಅನುದಿನ ದುಡಿಯುತಲೆ ಬಂದಿಹೆವು,
ಹೆಚ್ಚುತಿರುವ ಜನಸಂಖ್ಯೆ ತಂದಿದೆ
ನಮಗೆ ಅತಿ ಕೆಲಸದ ಹೊರೆ..
ಆದರೂ ಯಾರನ್ನೂ ದೂಷಿಸದೇ,
ನಿರಂತರ ಸ್ವಚ್ಛತಾ ಯಜ್ಞ ಮಾಡುತಿಹೆವು ,
ಕಾಯಕದಲೇ ಸಂತಸ ಕಾಣುತಿಹೆವು,
‘ನಮಗೆ ನಾವೇ ಆದರ್ಶ ‘..
ಶತಮಾನಗಳ ಕಾಲ ಸ್ವಚ್ಚತಾ ಕಾರ್ಯದಲಿ
ನಮ್ಮ ಜೀವನ ಕಳೆದುಬಿಟ್ಟಿಹೆವು,
ಮುಂದಿನ ತಲೆಮಾರಿನ ಯುವ ಜನತೆಗೆ,
ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಕೆ ಆದ್ಯತೆ ,
ಇದು ನಮ್ಮ ಭವಿಷ್ಯದ ದೃಷ್ಟಿ
ಅದಕಾಗಿ ಯುವ ಜನತೆಗೆ ಮಾರ್ಗದರ್ಶನ ನೀಡೋಣ..
ಪೌರಕಾರ್ಮಿಕರು ‘ಸ್ವಚ್ಛ ಸಮಾಜ ನಿರ್ಮಾತೃಗಳು ‘
ಸಮಾಜದಲಿ ನಮ್ಮನು ನೋಡುವ ದೃಷ್ಟಿ ಬದಲಾಗಬೇಕು ;
ಇದೇ ನಮ್ಮ ಕೋರಿಕೆ
ಡಾ.ಭೇರ್ಯ ರಾಮಕುಮಾರ್ ,
ಸಾಹಿತಿಗಳು, ಪತ್ರಕರ್ತರು