ಮುನವಳ್ಳಿ: ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ “ಕಾರ್ತಿಕೋತ್ಸವ” ಹಮ್ಮಿಕೊಳ್ಳಲಾಗಿತ್ತು. ಛಟ್ಟಿ ಅಮಾವಾಸ್ಯೆಯ ದಿನದಂದು ಅನುರಾಧ ನಕ್ಷತ್ರದಲ್ಲಿ ಸಾಯಂಕಾಲ ಗೋಧೂಳಿ ಸಮಯ ಜಗನ್ಮಾತೆ ಚಾಮುಂಡೇಶ್ವರಿಯ ಕಾರ್ತಿಕ ನಡೆಯಿತು.
ಸಕಲ ಸದ್ಭಕ್ತರು ಸೇರಿಕೊಂಡು ಅತ್ಯಂತ ಭಕ್ತಿಯಿಂದ ವಿಶೇಷ ಪೂಜೆ ಪುನಸ್ಕಾರದೊಂದಿಗೆ,ವಿಶೇಷ ಅಭಿಷೇಕಗೈದು ಮಹಾಮಂಗಳಾರತಿ ಮಾಡುವದರ ಮೂಲಕ ಕಾರ್ತಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
ಕಾರ್ತಿಕೋತ್ಸವ ನಿಮಿತ್ತ ತಾಯಿ ಬನಶಂಕರಿ ದೇವಿಯ ಲೀಲೆಗಳನ್ನು ಬಿಂಬಿಸುವ ಭಕ್ತಿಗೀತೆಗಳನ್ನು ಬನಶಂಕರಿ ಭಜನಾ ಮಂಡಳಿಯ ಮೂಲಕ ನಾರಾಯಣ ಕಳಸನ್ನವರ, ಅಶೋಕ ಹೂಲಿ ಪ್ರಸ್ತುತ ಪಡಿಸಿದರು.
ದೇವಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಭಕ್ತರೆಲ್ಲ ಸಂಪೂರ್ಣ ದೇವಸ್ಥಾನವನ್ನು ಬೆಳಕಿನ ಹಬ್ಬದಂತೆ ದೀಪಗಳಿಂದ ಶೃಂಗರಿಸಿದ್ದರು.ತಾಯಿ ಜಗದಂಬೆಯು ದೀಪಗಳ ಬೆಳಕಿನ ತೊಟ್ಟಿಲಲ್ಲಿ ತೂಗಿದಂತೆ ಭಾಸವಾಗುತ್ತಿತ್ತು. ತಾಯಂದಿರು ಮತ್ತು ಸಕಲ ಸದ್ಭಕ್ತರು ತಮ್ಮ ತಮ್ಮ ಭಕ್ತಿಯನ್ನು ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದರು. ದೇವಾಂಗ ಸಮಾಜದ ಹಿರಿಯರ ಸಮ್ಮುಖದಲ್ಲಿ ನಡೆದ ಈ ಕಾರ್ತಿಕೋತ್ಸವದಲ್ಲಿ ಹಿರಿಯರಾದ ದೇವೇಂದ್ರಪ್ಪ ದಿನ್ನಿಮನಿ, ಚನ್ನಪ್ಪ ಕಳಸನ್ನವರ, ಈಶ್ವರ ಅತ್ತಿಮರದ ಭಾಗವಹಿಸಿದ್ದರು. ಯುವ ಮುಖಂಡರಾದ ಸುಭಾಸ ಸಣಕಲ್ಲ, ಗುರಪ್ಪ ಹೊನ್ನಳ್ಳಿ, ಮುರಳೀಧರ ಹೊನ್ನಳ್ಳಿ, ವಿಲಾಸ ಸಣಕಲ್ಲ, ಮಾಂತು ಹುಲ್ಲೂರ, ವೆಂಕಪ್ಪ ದಿನ್ನಿಮನಿ ಮತ್ತು ಬನಶಂಕರಿ ವಿದ್ಯಾವಿಕಾಸ ಸಂಸ್ಥೆಯ ನಾಗೇಶ ಹೊನ್ನಳ್ಳಿ, ಸುಧೀರ ವಾಗೇರಿ, ರವಿ ಸಣಕಲ್ಲ ಹಾಗೂ ಮುನವಳ್ಳಿಯ ಸಕಲ ಸದ್ಭಕ್ತರು ಭಾಗಿಯಾಗಿದ್ದರು.