ಮೂಡಲಗಿ:- ಭಾರತದಲ್ಲಿ ಅಸಂಕ್ರಾಮಿಕ ರೋಗದಿಂದ ಸಾಯುವವರ ಸಂಖ್ಯೆ ಅತಿಯಾಗಿ ಹೆಚ್ಚುತ್ತಿದ್ದು ಅದಕ್ಕೆ ಮುಖ್ಯ ಕಾರಣಗಳಾದ ತಂಬಾಕು, ಸ್ಟಾರ್ ಗುಟಕಾ ಸೇವನೆ, ಮದ್ಯಪಾನ, ಧೂಮಪಾನ ಚಟಗಳಿಂದ ಯುವ ಜನತೆ ಮುಕ್ತವಾಗಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ,ಸಲಹೆಗಾರರು ಆದ ಶ್ವೇತಾ ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಸರ್ವೇಕ್ಷಣ ಘಟಕ, ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ,ವಾಣಿಜ್ಯ ಹಾಗೂ ಬಿ.ಸಿ.ಎ.ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುಥ್ ರೆಡ್ ಕ್ರಾಸ್ ಘಟಕ,ರೋರ್ಸ ಹಾಗೂ ಸ್ಕೌಟ್ಸ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.
ಹೃದಯ ಸ್ಥಂಭನ, ಮಧುಮೇಹ ಕಾಮಾಲೆ, ಪಾರ್ಶ್ವ ವಾಯು, ಇವುಗಳು ಅಸಂಕ್ರಾಮಿಕ ರೋಗಗಳಾಗಿದ್ದು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ರೋಗದೊಂದಿಗೆ ಅಸಂಕ್ರಾಮಿಕ ರೋಗಗಳು ಸಹ ಉಲ್ಬಣಗೊಳ್ಳುತ್ತವೆ ಎಂದು ಹೇಳಿದರಲ್ಲದೆ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಯುವ ಜನತೆ ದೂರವಿರುವುದರಿಂದ ತಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟು ಕೊಳ್ಳಬೇಕೆಂದು ಸಲಹೆ ನೀಡಿದರು.
ಆರೋಗ್ಯವೇ ಭಾಗ್ಯ, ಆರೋಗ್ಯವು ಎಲ್ಲ ಸಂಪತ್ತಿಗಿಂತಲೂ ಅತ್ಯಂತ ಮಹತ್ವವಾದ ಸಂಪತ್ತು ಎಂದು ಯುವ ಸಮುದಾಯಕ್ಕೆ ತಿಳಿಹೇಳಿದರು. ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಇನ್ನೋರ್ವ ಅತಿಥಿಗಳಾದ ಶ್ರೀಮತಿ ಕವಿತಾ ರಾಜಣ್ಣವರ ತಂಬಾಕು ಕುರಿತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಆರಂಭದಲ್ಲಿ ಪ್ರೊ. ಎಸ್.ಸಿ.ಮಂಟೂರು ಸ್ವಾಗತಿಸಿದರು. ಪ್ರೊ.ಪ್ರೀತಿ ಬೆಳಗಲಿ ಕಾರ್ಯಕ್ರಮ ನಿರೂಪಿಸಿದರು
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಪ್ರಾಚಾರ್ಯರಾದ ಪ್ರೊ.ಜಿ.ವ್ಹಿ.ನಾಗರಾಜ್ ಅವರು ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಸದೃಡ ಕಾಯವನ್ನು ಹೊಂದಿ ಸದೃಡ ಭಾರತವನ್ನು ಕಟ್ಟಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದಿನ ಕಾಲಕ್ಕೆ ಅವಶ್ಯಕವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಲ್ಮೇಶ ಇಂಗಳೆ, ರಮೇಶ ಖಾನಪ್ಪಗೋಳ, ಸವಿತಾ ಕೊತ್ತಲ, ಪ್ರೊ. ಎಸ್.ಕೆ.ಸವಸುದ್ದಿ, ಪ್ರೊ.ಎಸ್.ಎಮ್ ಗುಜಗೊಂಡ, ಡಾ.ವ್ಹಿ.ಆರ್. ದೇವರಡ್ಡಿ, ಡಾ.ಬಿ.ಎಂ. ಬರಗಾಲಿ, ಮನೋಹರ ಲಮಾಣಿ, ಅರ್ಜುನ ಗಸ್ತಿ, ಮೂಡಲಗಿಯ ಸಮುದಾಯ ಆರೋಗ್ಯ ಇಲಾಖೆಯ ಗೀತಾ ಡೋಣಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಮಾಜ ಸೇವಕರಾದ ಶ್ರೀಮತಿ ಕವಿತಾ ರಾಜಣ್ಣವರ ವಂದನಾರ್ಪಣೆ ಮಾಡಿದರು.