ಮೂಡಲಗಿ – ಹುಟ್ಟಿನಿಂದಲೇ ಕಷ್ಟಗಳನ್ನು, ಸಾವು ನೋವುಗಳನ್ನು ಬೆನ್ನಿಗೆ ಕಟ್ಟಿಕೊಂಡು ಬಂದರೂ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ಬೆಟಗೇರಿ ಕೃಷ್ಣಶರ್ಮರು ಕೃತಿಗಳನ್ನು ರಚಿಸಿ ಅಜರಾಮರರಾಗಿದ್ದಾರೆ ಎಂದು ಸಾಹಿತಿ ಸಿದ್ರಾಮ ದ್ಯಾಗಾನಟ್ಟಿ ಹೇಳಿದರು.
ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿ. ೧೬ ರಂದು ನಡೆದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ” ಡಾ. ಬೆಟಗೇರಿ ಕೃಷ್ಣಶರ್ಮ- ಬದುಕು ಬರಹ” ಕುರಿತು ಅವರು ಮಾತನಾಡಿದರು.
೧೯-೨೦ ನೇ ಶತಮಾನದಲ್ಲಿ ಛಂದೋ ನಿಯಮಗಳಿಗೆ ಬದ್ಧರಾಗಿ ಕಾವ್ಯ ಬರೆಯಬೇಕು ಎಂಬ ನಿಯಮ ಮುರಿದು ತಮ್ಮದೇ ಆದ ಮಾರ್ಗ ಕಂಡುಕೊಂಡು ಕಾವ್ಯ ರಚಿಸಿದರು. ಬೆಟಗೇರಿ ಕೃಷ್ಣಶರ್ಮರ ಕಾವ್ಯದಲ್ಲಿ ರಾಷ್ಟ್ರೀಯತೆ ತುಂಬಿಕೊಂಡಿದೆ. ಅವರು ಅನೇಕ ಸಣ್ಣ ಕತೆಗಳು, ಕಾದಂಬರಿಗಳು, ಅನುವಾದ, ವಿಮರ್ಶೆ, ನಾಟಕಗಳನ್ನು ಬರೆದರು. ಜೀವನದ ತುಂಬೆಲ್ಲ ಕಷ್ಟಗಳೇ ತುಂಬಿಕೊಂಡಿದ್ದರೂ ಅಪಾರ ಸಾಹಿತ್ಯವನ್ನು ರಚಿಸಿರುವ ಕೃಷ್ಣಶರ್ಮರ ಸಹನೆ ತಾಳ್ಮೆ ಅದ್ಭುತವಾದದ್ದು ಎಂದು ಹೇಳಿದರು.
ವಿರಹಿಣಿ ಎಂಬ ಕೃತಿಯಲ್ಲಿ ಹೆಣ್ಣಿನ ತಳಮಳ, ವಿರಹ ವೇದನೆ ಮುಂತಾದವುಗಳು ಅದ್ಭುತವಾಗಿ ವ್ಯಕ್ತವಾದರೆ, ನಲ್ವಾಡುಗಳು ಮತ್ತು ಒಡನಾಡಿ ಎಂಬ ಕೃತಿಗಳಲ್ಲಿ ಗಂಡಿನ ಭಾವನೆಗಳ ಅಭಿವ್ಯಕ್ತಿಯನ್ನು ಪ್ರದರ್ಶಿಸಿದ್ದಾರೆ. ಕೃಷ್ಣಶರ್ಮರ ಕೃತಿಗಳು ಕೇವಲ ಸಾಹಿತ್ಯಿಕ ಮೌಲ್ಯ ಹೊಂದಿರದೇ ಜೀವನ ಮೌಲ್ಯಗಳನ್ನೂ ಹೊಂದಿರುವ ಕೃತಿಗಳಾಗಿವೆ ಎಂದರು.
ಆದರೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಬೆಟಗೇರಿ ಕೃಷ್ಣಶರ್ಮರಿಗೆ ಯಾವುದೇ ಒಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೂಡ ಲಭಿಸಲಿಲ್ಲ. ಯಾವುದೇ ಪ್ರಶಸ್ತಿಗಳು ಸಿಗಲಿಲ್ಲ. ಸಿಕ್ಕಿದ್ದು ಕೇವಲ ಒಂದು ಡಾಕ್ಟರೇಟ್ ಮಾತ್ರ. ಪ್ರಶಸ್ತಿ, ಫಲಕಗಳ ವಿಷಯದಲ್ಲಿ ಕೃಷ್ಣಶರ್ಮರಿಗೆ ತುಂಬಾ ಅನ್ಯಾಯವಾಗಿದೆ ಎಂದು ದ್ಯಾಗಾನಟ್ಟಿ ಹೇಳಿದರು.
ಪ್ರಾಸ್ತಾವಿಕವಾಗಿ ತಾಲೂಕಾ ಕಸಾಪ ಅಧ್ಯಕ್ಷ ಡಾ. ಸಂಜಯ ಸಿಂಧಿಹಟ್ಟಿ ಮಾತನಾಡಿ, ನಾವೀಗ ಬಾಹ್ಯ ಸೌಂದರ್ಯಕ್ಕೆ ಮಹತ್ವ ಕೊಡದೆ, ನಮ್ಮ ಮನಸು ಸ್ವಚ್ಛವಾಗಿದೆಯಾ, ಪವಿತ್ರವಾಗಿದೆಯಾ ಪರಿಶುದ್ಧವಾಗಿದೆಯಾ ಎಂಬುದನ್ನು ಅರಿತಿರಬೇಕು.
ಅನೇಕ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಪ್ರಬಂಧಗಳನ್ನು ಬರೆದಿದ್ದಲ್ಲದೆ ಕನ್ನಡ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಟಗೇರಿ ಕೃಷ್ಣಶರ್ಮರು ಕನ್ನಡವಲ್ಲದೆ ಮರಾಠಿ ಭಾಷೆಯಲ್ಲೂ ಪ್ರಭುತ್ವ ಹೊಂದಿದ್ದರು. ಮೃದು ಮನಸು ಹೊಂದಿದ್ದರು. ರಾಷ್ಟ್ರೀಯತೆ ಅವರಲ್ಲಿ ಜಾಗೃತವಾಗಿತ್ತು. ತಮ್ಮ ಕವನಗಳಲ್ಲಿ ದೇಶಾಭಿಮಾನವನ್ನು ವ್ಯಕ್ತಪಡಿಸಿದರು. ಬೆಳಗಾವಿಯ ಕನ್ನಡಿಗರಲ್ಲಿ ಕನ್ನಡತನದ ಬಗ್ಗೆ ಜಾಗೃತಿಯನ್ನೂ ಮೂಡಿಸಿದರು. ನವರಾತ್ರಿ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲು ಕರೆಕೊಟ್ಟರು. ಜನನಿ ಎಂಬ ಪತ್ರಿಕೆ ಹೊರತಂದು ಉದಯೋನ್ಮುಖ ಕವಿಗಳನ್ನು ಪರಿಚಯಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜ್ಞಾನದೀಪ್ತಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಸಿ ಎಸ್ ವಂಟಗೂಡಿ, ಬಸವಂತಪ್ಪಾ ತರಕಾರ, ಕೋಶಾಧ್ಯಕ್ಷ ಬೀಮಪ್ಪ ಶಿವಾಪೂರ, ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ, ಪ್ರೊ. ಎಸ್ ಎಮ್ ಕಮದಾಳ, ಪತ್ರಕರ್ತ ಬಾಲಶೇಖರ ಬಂದಿ, ಸಾಹಿತಿ ಮಹಾದೇವ ಜಿಡ್ಡಿಮನಿ ಹಾಗೂ ಇತರರು ಹಾಜರಿದ್ದರು.
ಮಹಾವೀರ ಸಲ್ಲಾಗೋಳ ಕಾರ್ಯಕ್ರಮ ನಿರೂಪಿಸಿದರು, ಶಿವಾನಂದ ಕಿತ್ತೂರ ವಂದಿಸಿದರು.
ವರದಿ: ಉಮೇಶ ಬೆಳಕೂಡ, ಮೂಡಲಗಿ