ಮುನವಳ್ಳಿಃ ಸಮೀಪದ ಬೈಲಹೊಂಗಲ ತಾಲೂಕಿನ ಉಡಿಕೇರಿ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಅವರ ಕವಿತೆಗಳ ಓದು ಹಾಗೂ ಭಾವಗೀತೆಗಳ ಗಾಯನದೊಂದಿಗೆ ಕುವೆಂಪು ಭಾವನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅನೇಕ ವಿದ್ಯಾರ್ಥಿಗಳು ಕುವೆಂಪು ಅವರ ಬದುಕು ಬರಹದ ಕುರಿತು ಭಾಷಣ ಮಾಡಿದರು. ಕುವೆಂಪು ವಿರಚಿತ ನಾಡು-ನುಡಿ ಕುರಿತಾದ ಭಾವಗೀತೆಗಳ ಗಾಯನ ನಡೆಯಿತು. ಹತ್ತನೇ ವರ್ಗದ ವಿದ್ಯಾರ್ಥಿ ಮಹೇಶ ಪಠಾಣಿ ಬಿಡಿಸಿದ ಕುವೆಂಪು ಭಾವಚಿತ್ರ ಎಲ್ಲರ ಗಮನ ಸೆಳೆಯಿತು. ಶಿಕ್ಷಕ ಎಸ್. ಜಿ. ತುರಮಂದಿ ಮಾತನಾಡಿ, ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕುವೆಂಪು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಶ್ರಮಿಸಿದವರು. ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿಯೂ ಅವರ ಪಾತ್ರ ಹಿರಿದಾದುದು ಎಂದರು.
ಕವಿ, ಶಿಕ್ಷಕರಾದ ನಾಗೇಶ್ ಜೆ. ನಾಯಕ ಮಾತನಾಡಿ ಕುವೆಂಪು ಒಬ್ಬ ಕವಿ, ನಾಟಕಕಾರ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಮಾಡಿದವರು. ತಳ ಸಮುದಾಯದ ಪರ ಧ್ವನಿ ಎತ್ತುವುದರ ಮೂಲಕ ಸಮಾನತೆಗೆ ಆಶಿಸಿದವರು. ಕನ್ನಡ ಅಭಿಮಾನವನ್ನು ಬಿತ್ತಿ ಒಟ್ಟಿಗೆ ಬಾಳುವ ಸಾಮರಸ್ಯದ ಕಲ್ಪನೆ ಮೂಡಿಸಿದರು.
ರಸಋಷಿಯ ಕವಿತೆಗಳನ್ನು ಓದುವುದರ ಮೂಲಕ ವಿದ್ಯಾರ್ಥಿಗಳು ಸಾಹಿತ್ಯಿಕ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಪ್ರವೀಣ ಶೆಟ್ಟೆಪ್ಪನವರ, ಶಾಲಾ ಸಿಬ್ಬಂದಿ ಚನ್ನಪ್ಪ ಕುರಿ, ವಿಠಲ ಪೂಜಾರ ಉಪಸ್ಥಿತರಿದ್ದರು. ಹತ್ತನೇ ವರ್ಗದ ವಿದ್ಯಾರ್ಥಿನಿ ಕು. ನಾಗರತ್ನ ಧಾರವಾಡ ಕಾರ್ಯಕ್ರಮ ನಿರೂಪಿಸಿ ವಂದಿಸಿದಳು.