ಮೈಸೂರು ಜಿಲ್ಲೆ ಕೆ.ಆರ್.ನಗರ ಟೌನ್ ನ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸಾಹಿತಿಗಳಾದ ಡಾ.ಹೆಚ್.ಆರ್.ಚಂದ್ರಕಲಾ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಶ್ವಸಾಹಿತ್ಯಕ್ಕೆ ರಾಷ್ಟ್ರ ಕವಿ ಕುವೆಂಪು ಅವರ ಕೊಡುಗೆ ಅಪಾರ.ಅವರು ಎಲ್ಲ ಕಾಲಕ್ಕೂ ಸಲ್ಲುವ ಚೇತನ. ಸಮಸಮಾಜದ ಕಲ್ಪನೆ,ವಿಶ್ವಮಾನವ ಚಿಂತನೆ ಸಮಾಜಕ್ಕೆ ಅವರ ಮಹತ್ವದ ಕೊಡುಗೆಗಳು. ಅವರ ಕುಟುಂಬವೇ ವೈಚಾರಿಕ ಕುಟುಂಬ ಎಂದು ನುಡಿದರು. ಸಾಹಿತಿ ತಿಪ್ಪೂರು ಕೃಷ್ಣ ಮಾತನಾಡಿ, ಕುವೆಂಪು ಅವರು ಬಾಲ್ಯದಿಂದಲೂ ಪರಿಸರ ಪ್ರೇಮಿ. ವೈಚಾರಿಕ ಚಿಂತನೆ ಉಳ್ಳವರಾಗಿದ್ದರು ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಹಾಗೂ ಭಕ್ತಿ ಭಂಡಾರಿ ಬಸವಣ್ಣ ಕನ್ನಡನಾಡಿನ ಎರಡು ಕಣ್ಣುಗಳು. ಡಾ.ಕುವೆಂಪು ಅವರ ವಿಶ್ವಮಾನವ ಚಿಂತನೆ ಹಾಗೂ ಬಸವಣ್ಣನವರ ಕಾಯಕ ಸಮಾಜಕ್ಕೆ ಎಂದೆಂದಿಗೂ ದಾರಿದೀಪ. ಕುವೆಂಪು ಅವರು ಹಲವು ಪ್ರಥಮಗಳ ಸಾಧಕರು. ವಿಶ್ವವಿದ್ಯಾಲಯದ ಮೊದಲ ಕನ್ನಡ ಕುಲಪತಿ ,ಮೊದಲ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಮೊದಲ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು, ಎಂಟು ವಿಶ್ವವಿದ್ಯಾಲಯ ಗಳ ಗೌರವ ಡಾಕ್ಟರೇಟ್ ಪಡೆದ ಮೊದಲ ಕನ್ನಡದ ಕವಿ.. ಇವೆಲ್ಲವೂ ಕುವೆಂಪು ಅವರ ಪ್ರತಿಷ್ಠೆಗೆ ದೊರೆತ ಸುವರ್ಣ ಗರಿಗಳು ಎಂದು ಬಣ್ಣಿಸಿದರು.ಜಾತ್ಯತೀತ ಚಿಂತನೆ, ವಿಶ್ವಮಾನವ ತತ್ವ ,ಸರಳ ವಿವಾಹ ಪದ್ದತಿ,ಯುವಜನತೆಯಲ್ಲಿ ವೈಚಾರಿಕ ಚಿಂತನೆ ಕುವೆಂಪು ಸಮಾಜಕ್ಕೆ ನೀಡಿದ ಕೊಡುಗೆಗಳು ಎಂದವರು ವಿವರಿಸಿದರು.
ವೇದಿಕೆಯಲ್ಲಿ ಮಹಾದೇವ್ ,ಮದುಚಂದ್ರ ಸಮಾಜ ಸೇವಕರಾದ ದೊರೆಸ್ವಾಮಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಾರ್ಥಿಸಿದರು. ಶಶಿಕುಮಾರ್ ಸ್ವಾಗತಿಸಿದರು.ಕೃಷ್ಣಯ್ಯ ಕಾರ್ಯಕ್ರಮ ನಿರ್ವಹಿಸಿದರು.
ಯೂತ್ ಫೌಂಡೇಶನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಕ್ಷಿತ್, ರಾಕೇಶ್, ಬಸವರಾಜು, ಚೆಲುವನ್, ರಾಜೇಶ್,ಕಿರಣ್ ,ಕುಮಾರ ,ಜಗದೀಶ್,ಗಿರೀಶ್ ,ಶಿವಕುಮಾರ್ ,ಅಭಿಷೇಕ್, ರಮೇಶ್, ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.