ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ದಿನೇ ದಿನೇ ರೋಚಕ ತಿರುವುಗಳನ್ನು ಪಡೆಯುತ್ತಲಿದೆ. ಈ ಮಧ್ಯೆ ರಮೇಶ ಅವರು ಇಂದು ನಾಲ್ಕು ಗಂಟೆಗೆ ತಾವೂ ಒಂದು ಪ್ರಬಲ ಬಾಂಬನ್ನು ಸ್ಫೋಟಿಸುವುದಾಗಿ ಹೇಳಿದ್ದು ಅದು ಯಾರ ವಿರುದ್ಧ ಸಾಕ್ಷ್ಯ ಹೊಂದಿದೆಯೆಂಬುದು ಕುತೂಹಲಕಾರಿಯಾಗಿದೆ.
ಇಡೀ ರಾಜ್ಯವೇ ಅತೀ ಕಾತರದಿಂದ ಕಾಯುತ್ತಿರುವ ಆ ಘಳಿಗೆಯಲ್ಲಿ ರಮೇಶ ಜಾರಕಿಹೊಳಿಯವರು ಒಂದು ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದು ಸಿಡಿ ಪ್ರಕರಣ ಎಲ್ಲಿಂದ ಎಲ್ಲಿಗೆ ಮುಟ್ಟಲಿದೆ, ಯಾರ ತಲೆದಂಡ ಆಗಲಿದೆ ಎಂಬೆಲ್ಲ ಗೊಂದಲಗಳು ಚರ್ಚೆಯಾಗುತ್ತಿವೆ.
ಸದರಿ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಒಂದೊಂದಾಗಿ ವಿಡಿಯೋ ಬಿಡುಗಡೆ ಮಾಡುತ್ತಿದ್ದು ಒಂದು ಆಡಿಯೋ ಕೂಡ ಬಹಿರಂಗವಾಗಿದೆ. ಅದರಲ್ಲಿ ಯುವತಿಯು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ಹೆಸರನ್ನು ಪ್ರಸ್ತಾಪಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಜಾರಕಿಹೊಳಿ, ಡಿಕೆಶಿ ನನ್ನ ಹಳೆಯ ಸ್ನೇಹಿತ ಅವರಿಗೆ ಒಳ್ಳೆಯದಾಗಲಿ, ನನ್ನಂತೆ ರಾಜೀನಾಮೆ ನೀಡುವುದು ಬೇಡ ಎಂಬ ಮಾತುಗಳನ್ನು ಆಡಿದ್ದು ರಾಜಕೀಯ ವಲಯದಲ್ಲಿ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.
ರಮೇಶ ಅವರ ಈ ಸಾಫ್ಟ್ ಕಾರ್ನರ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿಯವರು, ನನ್ನ ಬಗ್ಗೆ ಜಾರಕಿಹೊಳಿಗೆ ಒಳ್ಳೆಯ ಭಾವನೆ ಇರುವುದು ಸಂತೋಷಕರ ಎಂದಿದ್ದಾರೆ.
ಆ ಯುವತಿ ತಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದಾಳೆ ಎಂಬ ಪತ್ರಕರ್ತರ ಪ್ರಶ್ನೆಗೆ ಡಿಕೆಶಿ ಉತ್ತರಿಸಿ, ನನ್ನನ್ನು ಭೇಟಿಯಾಗಲು ಆಕೆ ಪ್ತಯತ್ನಿಸಿರಬಹದು ಆದರೆ ಭೇಟಿಯಾಗಿಲ್ಲ, ನಾನು ಅವಳನ್ನು ನೋಡಿಯೂ ಇಲ್ಲ ಎಂದಿದ್ದಾರೆ.
ಒಟ್ಟಾರೆ ಒಂದು ಸಿನಿಮೀಯ ರೀತಿಯಲ್ಲಿ ದಿನಕ್ಕೊಂದು ಯಿರುವು ಪಡೆಯುತ್ತಿರುವ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರಮೇಶ ಅವರೇ ಸಂಜೆ ನಾಲ್ಕು ಗಂಟೆಗೆ ಯಾವ ಥರದ ಬಾಂಬ್ ಸಿಡಿಸುತ್ತಾರೋ ಎಂಬ ಬಗ್ಗೆ ರಾಜ್ಯ ಕಾತರದಿಂದ ಕಾಯುತ್ತಿದೆ.