ಸಿಂದಗಿ– ಸಂವಿಧಾನ ಸಮಾನತೆ, ಸೌಹಾರ್ದತೆ, ಭಾವೈಕ್ಯತೆಯನ್ನು ಹೊಂದಿದೆ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ಅದು ನಮ್ಮೆಲ್ಲರ ಬಾರತೀಯ ಸಂವಿಧಾನವೆಂದು ಸಿವ್ಹಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಮಹಾಂತೇಶ ಭೂಸಗೋಳ ಹೇಳಿದರು.
ಪಟ್ಟಣದ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಿಂದಗಿ ಮತ್ತು ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿರುವ ಬಾರತೀಯ ಸಂವಿಧಾನ ಕುರಿತಾದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ಓದುವುದು ಹಾಗೂ ಅದರಂತೆ ನಡೆದುಕೊಳ್ಳುವುದು ಪ್ರತಿ ಭಾರತೀಯನ ಕರ್ತವ್ಯವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಂವಿಧಾನ ನಮಗೆ ಎಲ್ಲ ರೀತಿಯ ಸೌಲಭ್ಯವನ್ನು ನೀಡಿದೆ. ಒಂದು ರೀತಿಯಲ್ಲಿ ಭಾರತದ ಸಂವಿಧಾನ ಬಾರತೀಯರ ಜೀವಾಳವಿದ್ದಂತೆ. ಅದರ ಕುರಿತು ತಿಳಿವಳಿಕೆ ಪಡೆಯುವುದು, ಅದರ ಸರಿಯಾದ ಪಾಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಾಲಾ ಕಾಲೇಜುಗಳಲ್ಲಿ ಈ ವಿಚಾರ ಕುರಿತು ವಿಚಾರ ಸಂಕಿರಣ ಗಳು, ಚರ್ಚೆಗಳು ನಡೆಯಬೇಕು ಇದೊಂದು ಜ್ಞಾನಕ್ಕೆ ಮತ್ತು ಬದುಕಿಗೆ ಸಹಕಾರಿ ಯಾಗಿದೆ ಎಂದು ಹೇಳಿದರು.
ಪಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ಮಕ್ಕಳಿಗೆ ಬೋಧಿಸಿದರು.
ರಾಜ್ಯಶಾಸ್ತ್ರ ಉಪನ್ಯಾಸಕ ಎಫ್.ಎ.ಹಾಲಪ್ಪನವರ ಉಪನ್ಯಾಸ ನೀಡಿ, ಭಾರತೀಯ ಸಂವಿಧಾನ ಅನೇಕ ವಿಶಿಷ್ಟತೆಗಳನ್ನು ಒಳಗೊಂಡ ಸಂವಿಧಾನವಾಗಿದೆ. ಇದರ ಪ್ರತಿ ಅಂಶಗಳು ಕೂಡಾ ಪ್ರತಿ ಭಾರತೀಯನು ತಿಳಿದುಕೊಂಡು ಬದುಕಬೇಕಾಗಿದೆ.ಪ್ರಸ್ತುತ ಕಾಲಘಟ್ಟದಲ್ಲಿ ಸಂವಿಧಾನದ ವಿರುದ್ದವಾಗಿ ಅನೇಕ ಕಾರ್ಯಚಟುವಟಿಕೆಗಳು ನಡೆಯುತ್ತಿರುವುದು ಘೋರವಾಗಿದೆ ಪ್ರಜ್ಞಾವಂತರಾದ ನಾವೆಲ್ಲ ಅದರ ವಿರುದ್ದ ಧ್ವನಿ ಎತ್ತಬೇಕಾಗಿದೆ ಎಂದು ಕರೆ ಕೊಟ್ಟರು.
ವೇದಿಕೆ ಮೇಲೆ ಸರಕಾರಿ ವಕೀಲೆ ಎಫ್.ಝಡ್.ಖತೀಬ, ಅಪರ ಸರಕಾರಿ ವಕೀಲ ಬಿ.ಜಿ.ನೆಲ್ಲಗಿ, ವಕೀಲ ಸಂಘದ ಅಧ್ಯಕ್ಷ ಎಸ್.ಬಿ.ದೊಡ್ಡಮನಿ ಇದ್ದರು.
ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು, ಸೃಷ್ಟಿ ಸಿಂಗೆ ಪ್ರಾರ್ಥಿಸಿದರು, ಬಿ.ಜಿ.ನೆಲ್ಲಗಿ ವಂದಿಸಿದರು.