ಸಿಂದಗಿ: ಡಿ.12 ರಂದು 25 ಲಕ್ಷ ಪಂಚಮಸಾಲಿಗಳಿಂದ ವಿಧಾನಸೌಧ ಮುತ್ತಿಗೆ ಪ್ರಸ0ಗ ಬ0ದರೆ ಸಿಂಹಾಸನ ಏರೋಣ. ಇಲ್ಲವಾದರೆ ಕಸ ಹೊಡೆಯೋಣ, ಆಲಸ್ಯ ಬಿಟ್ಟು ಶ್ರದ್ಧೆಯ ಬದುಕು ರೂಪಿಸಿಕೊಳ್ಳೋಣ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಳು ಕರೆ ನೀಡಿದರು.
ಪಟ್ಟಣದ ಅನಂತಲಕ್ಷ್ಮೀ ಕನ್ವೆನ್ಷನ್ ಹಾಲ್ನಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 2ಎ ಮೀಸಲಾತಿ ಹಕ್ಕೊತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ 2ಎ ಮೀಸಲಾತಿಗಾಗಿ ಹಕ್ಕೊತ್ತಾಯದ ಅವಿರತ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಪ್ರತಿಸಲ ಮನ್ನಣೆ ನೀಡಿದ್ದಷ್ಟೇ.
ಆದರೆ ಅದನ್ನು ಅನುಷ್ಠಾನಕ್ಕೆ ತಾರದೆ, ಮೂರು ಬಾರಿ ಭರವಸೆ ನೀಡಿದ್ದೇ ಹೆಚ್ಚು ಅದಕ್ಕಾಗಿ ಸದನದ ಒಳಗೆ ಹೊರಗೆ 2ಎ ಮೀಸಲು ಹಕ್ಕೊತ್ತಾಯದ ಹೋರಾಟದ ಭಾಗವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಮಾಡಲಾಗಿದೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಮ್ಮ ಹೋರಾಟ, ನಮ್ಮ ಬೇಡಿಕೆಗಳನ್ನು ಆಲಿಸಲು ಸರ್ಕಾರಕ್ಕೆ ಕಿವಿ ಕೇಳುತ್ತಿಲ್ಲ. ಮೀಸಲಾತಿ ಒದಗಿಸುವ ಭರವಸೆ, ಪಂಚಮಸಾಲಿಗಳಿಂದ ವಿಧಾನ ಸೌಧದ ಮುತ್ತಿಗೆಗೆ ಮೂರು ತಿಂಗಳ ಅವಧಿಯ ಅವಕಾಶಗಳನ್ನು ಕೇಳಿದ್ದ ಬೊಮ್ಮಾಯಿ ಅವರು ಇವಾಗ ಮೌನವಾಗಿದ್ದಾರೆ. ನಮ್ಮ ಮೀಸಲಾತಿಗೆ ಭವ್ಯ ಇತಿಹಾಸವೂ ಇದೆ. ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಿನ ಪಂಚಮಸಾಲಿಗಳಿದ್ದೇವೆ. ಎಲ್ಲ ಸಮಾಜಗಳ ಜೊತೆ ನಮ್ಮ ಸಮಾಜದ ನಂಟಿದೆ. 2ಎ ಮಿಸಲಾತಿ ಕೊಡುವ ಕುರಿತು ಸರ್ಕಾರ ಮಾತುಕತೆ ನಡೆಸಿದೆ. ಅದು ಈಡೇರದಿದ್ದಲ್ಲಿ ಮೀಸಲಾತಿ ಕೈಗೆ ಸಿಗುವವರೆಗೂ ಮುಂದುವರೆಸೋಣ ಎಂದರು.
ಇದೇ ಸಂದರ್ಭದಲ್ಲಿ ರಾಜುಗೌಡ ಪಾಟೀಲ (ಕುದರಿಸಾಲೋಡಗಿ), ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಸಂಗಿಹಾಳದ ಶಂಕರಾನಂದ ಮಹಾರಾಜರು, ಅಶೋಕ ಮನಗೂಳಿ, ಅಶೋಕ ಅಲ್ಲಾಪುರ, ಮುತ್ತು ಶಾಬಾದಿ, ಡಾ. ಶಾಂತವೀರ ಮನಗೂಳಿ, ನೀಲಾ ಮಹಾಂತೇಶ ನೂಲಾನವರ ಇಂಗಳೆ, ಶಾಂತವೀರ ಬಿರಾದಾರ, ಪಿಎಸ್ಐ ಸೋಮೇರ ಗೆಜ್ಜಿ ವೇದಿಕೆ ಮೇಲಿದ್ದರು.
ಇದೇ ವೇಳೆ ಅರವಿಂದ ಹಂಗರಗಿ, ಎಸ್.ಬಿ. ಪಾಟೀಲ, ರವಿ ಬಿರಾದಾರ, ಮಲ್ಲಿಕಾರ್ಜುನ ಹಂಗರಗಿ, ಚಂದ್ರಶೇಖರ ನಾರಗಬೆಟ್ಟ, ಸಂಗನಗೌಡ ದಯಾನಂದ ಬಿರಾದಾರ, ಅಶೋಕ ತೆಲ್ಲೂರ, ಸೋಮನಗೌಡ ಬಿರಾದಾರ, ಸಿದ್ದರಾಮ ಪಾಟೀಲ, ಶಿವರಾಜ ಪಾಟೀಲ, ಗುರಣ್ಣ ಬಸರಕೋಡ ಸೇರಿದಂತೆ ಮತ್ತಿತರರಿದ್ದರು.
ಸಿ.ಎಂ.ಮನಗೂಳೀ ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಉಪನ್ಯಾಸ ನೀಡಿದರು.
ಎಸ್.ಬಿ. ಪಾಟೀಲ, ರಮೇಶ ಬಿರಾದಾರ, ಬಿ.ಪಿ. ಬಿರಾದಾರ, ವಿಶ್ವನಾಥ ದೊಡ್ಡ ಕಾರ್ಯಕ್ರಮ ನಿರ್ವಹಿಸಿದರು.