ಬೆಳಗಾವಿ – ಕರೋನಾ ಮಹಾಮಾರಿ ವ್ಯಾಪಕವಾಗಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂಥ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಘಟಕವು ವೆಬಿನಾರ್ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಸಾಹಿತ್ಯದ ರಸದೌತಣ ಉಣ ಬಡಿಸುತ್ತಿರುವುದು ಶ್ಲಾಘನೀಯ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಅಭಿಪ್ರಾಯ ಪಟ್ಟರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ ರವಿವಾರ ದಿನಾಂಕ ೩೦ ರಂದು ವೆಬಿನಾರ್ ಮೂಲಕ ಏರ್ಪಡಿಸಲಾದ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿ, ಕರೋನಾ ರೋಗ ತಡೆಗಟ್ಟಲು ಜನರು ಆರೋಗ್ಯ ಇಲಾಖೆಯ ಮಾರ್ಗದರ್ಶಿಯನ್ನು ಪಾಲಿಸಬೇಕೆಂದರು.
ಕರೋನಾ ಕಾಲಘಟ್ಟದ ಆರೋಗ್ಯದ ಸವಾಲುಗಳು ಎಂಬ ವಿಷಯದ ಮೇಲೆ ಬೆಳಗಾವಿ ವೈದ್ಯೆ ಡಾ.ವನಿತಾ ಮೆಟಗುಡ್ಡ ಮಾತನಾಡಿ ಕೋವಿಡ್-19 ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಸೋಂಕಿನ ಕೊಂಡಿಯನ್ನು ಕಳಚಲು ಮನೆಯಲ್ಲಿಯೇ ಇರುವುದು ಉತ್ತಮ ಎಂದು ತಿಳಿಸಿದರು.
ಮಾಸ್ಕ ಧರಿಸುವುದು, ಕೈತೊಳೆಯುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದರಿಂದ ರೋಗ ಹರಡುವುದನ್ನು ವ್ಯಾಪಕವಾಗಿ ತಡೆಗಟ್ಟಬಹುದುದಾಗಿದ್ದು ನೆಗಡಿ, ಕೆಮ್ಮು, ಜ್ವರದಂತಹ ರೋಗಲಕ್ಷಣಗಳು ಕಂಡು ಬಂದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕೆಂದು ಹೇಳಿದರು.
ಕರೋನಾ ರೋಗಕ್ಕೆ ಯಾರೂ ಭಯಪಡದೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಮಾತನಾಡಿ ನಮ್ಮೆಲ್ಲರಿಗೂ ಮೊದಲು ಆರೋಗ್ಯವೆ ಮುಖ್ಯವಾಗಿದ್ದು ಮನೆಯಲ್ಲಿಯೇ ಇದ್ದು ಒಳ್ಳೊಳ್ಳೆ ಪುಸ್ತಕಗಳನ್ನು ಓದಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಹೋಗದೆ ಕರೋನಾ ಹೊಡೆದೋಡಿಸಲು ಸಹಕರಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಖಾನಾಪೂರ ಕಸಾಪ ಅಧ್ಯಕ್ಷ ಶ್ರೀ ವಿಜಯ ಬಡಿಗೇರ ಮಾತನಾಡಿ ರೋಗ ಬಂದ ನಂತರ ಪರದಾಡುವುದಕ್ಕಿಂತ ರೋಗ ಬರದ ಹಾಗೆ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಮುಖ್ಯ. ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಸ್ವಾಗತಿಸಿ ಉಪನ್ಯಾಸಕರನ್ನು ಪರಿಚಯಿಸಿದರು. ರಾಮದುರ್ಗ ಕಸಾಪ ಅಧ್ಯಕ್ಷ ಶ್ರೀ ಪಾಂಡುರಂಗ ಜಟಗನ್ನವರ ವೆಬಿನಾರ್ ನ್ನು ಸಂಯೋಜನೆಗೊಳಿಸಿ ನಿರೂಪಿಸಿದರು. ಗೋಕಾಕ ಕಸಾಪ ಅಧ್ಯಕ್ಷ ಶ್ರೀ ಮಹಾಂತೇಶ ತಾಂವಶಿ ವಂದಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳ ಕಸಾಪ ಅಧ್ಯಕ್ಷರುಗಳು, ಜಿಲ್ಲಾ ಕಸಾಪ ಪದಾಧಿಕಾರಿಗಳು ಹಾಗೂ ಹಲವಾರು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಸ್ವಾತಂತ್ರ್ಯ ಯೋಧ ಎಚ್.ಎಸ್.ದೊರೆಸ್ವಾಮಿ ಹಾಗೂ ಕರೋನಾ ಕಾಯಿಲೆಗೆ ತುತ್ತಾದವರಿಗೆ ಕಸಾಪ ವತಿಯಿಂದ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು.