ಬೀದರ – ಮೇಲ್ಜಾತಿಯ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪ್ರಕರಣ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ತಾಲೂಕಿನ ಬೆಡಕುಂದಾ ಗ್ರಾಮದ ಸುಮಿತ್(19) ಎಂಬಾತನೆ ಹುಡುಗಿಯ ಕುಟುಂಬಸ್ಥರಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡು ಇಂದು ಕೊನೆಯುಸಿರು ಎಳೆದಿರುವ ದುರ್ದೈವಿ.
ಪಕ್ಕದ ಊರಿನ ಅಪ್ರಾಪ್ತೆ ಅದರಲ್ಲೂ ಮೇಲ್ಜಾತಿಯ ಹುಡುಗಿಯನ್ನು ಸುಮಿತ್ ಪ್ರೀತಿಸುತ್ತಿದ್ದ ಇದರಿಂದ ಕೋಪಗೊಂಡ ಹುಡುಗಿಯ ಅಣ್ಣ ರಾಹುಲ್ ಹಾಗೂ ತಂದೆ ಕಿಶನರಾವ್ ಇಬ್ಬರು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಸುಮಿತನನ್ನು ಮಹಾರಾಷ್ಟ್ರದ ಲಾತೂರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಮಿತ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಕುರಿತು ಆರೋಪಿ ರಾಹುಲ್ ಹಾಗೂ ಕಿಶನರಾವ ಇಬ್ಬರನ್ನು ಬಂಧಿಸಿರುವ ಠಾಣಾಕುಶನೂರ ಪೊಲೀಸರು ಜಾತಿ ನಿಂದನೆ ಹಾಗೂ ಕೊಲೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ