ಸಿಂದಗಿ: ಶರಣರು, ಸಂತರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ನೀಡಿದ ಕಾಯಕ ತತ್ತ್ವ, ಭಕ್ತಿ, ದಾಸೋಹ ಸಾರಿದವರು ಶರಣ ಮಡಿವಾಳ ಮಾಚಿದೇವರ ಕೊಡುಗೆಗಳನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕಿದೆ ಎಂದು ಮಡಿವಾಳ ಸಮಾಜದ ಮುಖಂಡ ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ರಾ ಅಗಸರ ಹೇಳಿದರು.
ನಗರದ ಬಸವ ಮಂಟಪದಲ್ಲಿ ಸೋಮವಾರದಂದು ರಾಷ್ಟ್ರೀಯ ಬಸವದಳ ಹಮ್ಮಿಕೊಂಡ ಶರಣ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಅವರು ಭಾಗವಹಿಸಿ ಮಾತನಾಡಿ, ೧೨ನೇ ಶತಮಾನದಲ್ಲಿದ್ದ ಶೋಷಣೆ, ಜಾತೀಯತೆ, ಮೇಲು-ಕೀಳೆಂಬ ತಾರತಮ್ಯ, ಅಸ್ಪೃಶ್ಯತೆ ನಿವಾರಿಸಿ ಸಮಾನತೆ ತರಲು ಮಡಿವಾಳ ಮಾಚಿದೇವರು ಶ್ರಮಿಸಿದ್ದರು ಎಂದು ತಿಳಿಸಿದರು.
ವಿಶ್ರಾಂತ ಶಿಕ್ಷಕ ಸಾಹಿತಿ ಶಿವುಕುಮಾರ ಶಿವಸಿಂಪಿ ಮಾತನಾಡಿ ಶಿವ ಶರಣರು ವಚನ ಸಾಹಿತ್ಯದಲ್ಲಿ ತಮ್ಮ ಅನುಭವಗಳನ್ನೇ ಮನ ಮುಟ್ಟುವಂತೆ ವಚನಗಳು ಹೇಳಿರುತ್ತಾರೆ ಶರಣರ ವಚನಗಳು ಆಲಿಸಬೇಕು ಎಂದರು.
ವಿಶ್ರಾಂತ ಸೈನಿಕ ಶ್ರೀಶೈಲ ಯಳಮೇಲಿ ಮಾತನಾಡಿ ಅಣ್ಣ ಬಸವಣ್ಣವರು ಹಾಗೂ ಶರಣ ಮಡಿವಾಳ ಮಾಚಿದೇವರ ತೋರಿರುವ ಉತ್ತಮ ಸನ್ಮಾಗದಲ್ಲಿ ನಡೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ ಮಾತನಾಡಿ, ೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣನ ನೇತೃತ್ವದಲ್ಲಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಸಂದರ್ಭದಲ್ಲಿಯೇ ಅನೇಕ ಶರಣರು ಹೋರಾಡಿ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ್ದಾರೆ ಅವರ ವಚನಗಳ ತತ್ತ್ವ ಪಾಲಿಸಿದ್ದಲ್ಲಿ ಮನುಷ್ಯತ್ವ ಕಾಣಲು ಸಾಧ್ಯ ಎಂದರು.
ಬಸವದಳದ ಹಿರಿಯರಾದ ಶಿವಾನಂದ ಕಲಬುರ್ಗಿ. ವಿಶ್ರಾಂತ ಶಿಕ್ಷಕ ಎಸ್ ಎಸ್ ನಾಗೂರ. ಆರ್ ಆರ್ ಪಾಟೀಲ. ಶಾಂತು ರಾಣಾಗೋಳ ಶರಣರ ವಚನ ಪಠಣ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭೆ ತಾಲ್ಲೂಕು ಅಧ್ಯಕ್ಷ ವೈದ್ಯ ಡಾ.ಮಹಾಂತೇಶ ಅಂಗಡಿ ಸ್ವಾಗತಿಸಿ ವಂದಿಸಿದರು

