ಮೂಡಲಗಿ: ಮದನಕುಮಾರ ಅವರು ಯುಪಿಎಸ್ಸಿಯಲ್ಲಿ ಉನ್ನತ ರಾಂಕ್ ನೊಂದಿಗೆ ಕಮಾಂಡೆಂಟ್ ಆಫೀಸರ್ ಆಗಿರುವುದು ಕೌಜಲಗಿ ಗ್ರಾಮದ ಹೆಮ್ಮೆ ವಿದ್ಯಾರ್ಥಿಗಳು ಯಾವತ್ತೂ ಇಂತಹ ಸಾಧಕರನ್ನು ಸ್ಫೂರ್ತಿಯಾಗಿಸಿಕೊಂಡು ಓದುವ ಮೂಲಕ ಹೆತ್ತ ತಂದೆ ತಾಯಿಯ, ಶಾಲೆಯ ಮತ್ತು ನಾಡಿನ ಋಣ ತೀರಿಸುವ ಕೆಲಸ ಮಾಡಬೇಕೆಂದು ವಿಶ್ರಾಂತ ಸೈನಿಕ ವಸಂತ ದಳವಾಯಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೌಜಲಗಿಯ ಡಾ. ಮಹದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢಶಾಲೆಯಲ್ಲಿ ಮಂಗಳವಾರ ಜರುಗಿದ ಎಸ್. ಎಸ್.ಎಲ್.ಸಿ. ವಿದ್ಯಾರ್ಥಿಗಳ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ೧೮೮ ನೇ ರಾಂಕ್ ನೊಂದಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಯ ಸಹಾಯಕ ಕಮಾಂಡಂಟ್ ಆಫೀಸರ್ ಹುದ್ದೆಗೆ ಆಯ್ಕೆಯಾದ ಮದನ್ಕುಮಾರ್ ಹೊಸಮನಿ ಅವರು ನಮ್ಮೂರಿನ ಎಲ್ಲ ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದಾರೆ. ಅವರ ಸತತ ಓದು, ವಿಷಯ ಗ್ರಹಿಕೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ರೀತಿ ವಿಶೇಷವಾಗಿದ್ದು ಇಂದಿನ ವಿದ್ಯಾರ್ಥಿಗಳು ಹೊಸಮನಿ ಅವರನ್ನು ಸ್ಫೂರ್ತಿಯಾಗಿರಿಸಿಕೊಳ್ಳಬೇಕೆಂದು ಪಾಲಕರ ಸಭೆಗೆ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮದನ ಕುಮಾರ ಹೊಸಮನಿ ಅವರು, ನನಗೆ ನಮ್ಮೂರಿನ ಪ್ರಥಮ ಐ.ಎ.ಎಸ್. ಅಧಿಕಾರಿ ಡಾ. ಅಶೋಕ ದಳವಾಯಿ ಅವರು ಸ್ಫೂರ್ತಿಯಾಗಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ನಮ್ಮೂರಿನ ಎಲ್ಲ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗಳಲ್ಲಿ ಅತ್ಯುತ್ತಮ ಶ್ರೇಣಿಗಳಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಮತ್ತು ಊರಿಗೆ ಕೀರ್ತಿಯನ್ನು ತಂದುಕೊಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ದೊಡ್ಡಸಿದ್ದಪ್ಪ ಖಾನಟ್ಟಿ, ನಿಂಗಪ್ಪ ಬೀರನಗಡ್ಡಿ, ಮುಖ್ಯೋಪಾಧ್ಯಾಯ ವಿವೇಕ ಹಳ್ಳೂರ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ವಿ.ಕೆ. ಬಂಡಿವಡ್ಡರ ನಿರೂಪಿಸಿದರು ಹಾಗೂ ಶಿಕ್ಷಕ ಎಸ್.ಎಸ್.ಖಡಕಭಾವಿ ಸ್ವಾಗತಿಸಿ ವಂದಿಸಿದರು.