ಮೂಡಲಗಿ : ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಸರಕಾರ ಹಲವಾರು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುವದರ ಜೊತೆಗೆ ನಮ್ಮ ಶಾಲೆಯ ಮ್ಯಾಜಿಕ್ ಬಾಕ್ಸ ಕೂಡ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ ಹೇಳಿದರು.
ಅವರು ತುಕ್ಕಾನಟ್ಟಿಯ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಗಾಗಿ ನೂತನವಾಗಿ ಜಾರಿಗೆ ತಂದ ಮ್ಯಾಜಿಕ್ ಬಾಕ್ಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಮ್ಯಾಜಿಕ್ ಬಾಕ್ಸನಲ್ಲಿ ಒಂದರಿಂದ ಐದನೇ ತರಗತಿ ಹಾಗೂ ಆರರಿಂದ ಎಂಟನೇ ತರಗತಿ ಹೀಗೆ ಎರಡು ವಿಭಾಗಗಳನ್ನಾಗಿ ಮಾಡಿ ಅದರಲ್ಲಿ ವಿದ್ಯಾರ್ಥಿಗಳ ಹೆಸರಿನ ಚೀಟಿಯನ್ನು ಹಾಕಲಾಗಿರುತ್ತದೆ. ಪ್ರಾರ್ಥನಾ ವೇಳೆಯಲ್ಲಿ ಎರಡೂ ವಿಭಾಗದಿಂದ ತಲಾ ಒಂದೊಂದು ಚೀಟಿಯನ್ನು ತೆಗೆಯಲಾಗಿ ಅದರಲ್ಲಿ ಹೆಸರಿರುವ ಇಬ್ಬರೂ ವಿದ್ಯಾರ್ಥಿಗಳಿಗೂ ಶೈಕ್ಷಣಿಕವಾಗಿ ಅವರಿಗೆ ಉಪಯೋಗವಾಗುವ ವಸ್ತುಗಳನ್ನು ಬಹುಮಾನವನ್ನಾಗಿ ಕೊಡಲಾಗುತ್ತದೆ. ಇದರಿಂದ ಬಹುಮಾನ ಪಡೆಯುವ ಆಸೆಯಿಂದ ವಿದ್ಯಾರ್ಥಿಗಳು ಪ್ರಾರ್ಥನಾ ವೇಳೆಗೆ ಹಾಜರಾಗಲು ಬಯಸುತ್ತಾರೆ. ಅಲ್ಲದೆ ಆ ದಿನ ಬಹುಮಾನ ಪಡೆದ ವಿದ್ಯಾರ್ಥಿ ಹೆಸರಿನ ಚೀಟಿಯನ್ನು ಕೂಡ ಮತ್ತೆ ಬಾಕ್ಸನಲ್ಲಿ ಹಾಕುವದರಿಂದ ಮತ್ತೆ ಬಹುಮಾನ ಸಿಗುವದೆಂಬ ನಿರೀಕ್ಷೆಯಿಂದ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಾರೆ. ಈ ಬಹುಮಾನವನ್ನು ಶಿಕ್ಷಣ ಪ್ರೇಮಿಗಳು ಇಲ್ಲವೆ ಶಿಕ್ಷಕರೇ ಅದರ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಇದು ಈ ಶಾಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಚಾಲ್ತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ, ಶಿಕ್ಷಕರಾದ ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಶೀಲಾ ಕುಲಕರ್ಣಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ಮಹಾದೇವ ಗೋಮಾಡಿ ಉಪಸ್ಥಿತರಿದ್ದರು.