ರವಿಯ ಕಿರಣವ ಕೊಂಡು ತಂಪು ಬೆಳದಿಂಗಳನು
ಚಂದಿರನು ನೀಡುವನು ರಾತ್ರಿಯಲ್ಲಿ
ಹರನ ಕರುಣೆಯ ಪಡೆದು ಹಂಚುವನು ಜಗಕೆಲ್ಲ
ಗುರುದೇವನಿಂಥವನು -ಎಮ್ಮೆತಮ್ಮ
ಶಬ್ಧಾರ್ಥ
ರವಿ= ಸೂರ್ಯ. ಹರ = ಶಿವ
ತಾತ್ಪರ್ಯ
ಸೂರ್ಯನ ಬಿಸಿಲಿನ ಬೆಳಕನ್ನು ಪಡೆದು ಪ್ರತಿಬಿಂಬಿಸಿ ರಾತ್ರಿ
ತಂಪಾದ ಬೆಳದಿಂಗಳನ್ನು ಚಂದ್ರ ಭೂಮಿಗೆ ನೀಡುತ್ತಾನೆ.
ಹಾಗೆ ಗುರುವಾದವನು ದೇವರ ಪ್ರೀತಿ, ಕರುಣೆ ಜ್ಞಾನ,ಪಡೆದು
ಜಗತ್ತಿನ ಜನರಿಗೆ ಹಂಚುತ್ತಾನೆ. ಬೆಳದಿಂಗಳು ಶಾಂತಿ
ಸಮಾಧಾನ, ಸುಜ್ಞಾನದ ಸಂಕೇತ ಮತ್ತು ರಾತ್ರಿಯ ಕತ್ತಲು
ಅಜ್ಞಾನದ ಸಂಕೇತ. ಗುರುವಾದವನು ತಂದೆತಾಯಿಗಳಂತೆ
ಸಾಕಿ ಸಲುಹಿ ತಿದ್ದಿ ತೀಡಿ ಬುದ್ದಿ ನೀಡಿ ಸತ್ಪಥದಲ್ಲಿ ನಡೆಸುತ್ತಾನೆ ಮತ್ರು ಬಂಧು ಬಾಂಧವರಂತೆ ಕಷ್ಟಕಾಲದಲ್ಲಿ ಸಮಾಧಾನ ಹೇಳಿ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಲು ಧೈರ್ಯವನ್ನು ತುಂಬುತ್ತಾನೆ.
ನಗುರೋರಧಿಕಂ ಎಂಬ ಮಾತಿದೆ. ಗುರುವಿಗಿಂತ ದೊಡ್ಡವರು ಯಾರಿಲ್ಲ. ಹರ ಮುನಿದರೆ ಗುರು
ಕಾಯುವನು ಎಂಬ ಗಾದೆ ಗುರುವಿನ ಮಹತ್ವವನ್ನು
ತಿಳಿಸುತ್ತದೆ. ಗುಕಾರೋ ಅಂಧಕಾರಸ್ಯ ರುಕಾರಸ್ತನ್ನಿರೋಧಕ:”ಗುರು” ಎಂಬ ಶಬ್ದ. ಇದೂ ಕನ್ನಡದ ಶಬ್ದ ಅಲ್ಲ. ಇಲ್ಲಿ ‘ಗು’ ಎಂದರೆ ಕತ್ತಲು/ ಅಂಧಕಾರ. ‘ರು’ ಎಂದರೆ ನಿವಾರಿಸುವುದು. ಅಂದರೆ ಅಜ್ಞಾನವೆಂಬ ಕತ್ತಲನ್ನು ನಿವಾರಿಸಿ ಜ್ಞಾನದ ಬೆಳಕು ನೀಡುವವನೇ ಗುರು. ಎಲ್ಲ ಧರ್ಮಗಳಲ್ಲಿ ಗುರುವಿನಮಹತ್ವ ಹೇಳಲಾಗಿದೆ. ಪ್ರೀತಿ, ಕರುಣೆ, ಸುಜ್ಞಾನ,ಶಾಂತಿ,ಸಂತೋಷ ಕೊಡುವವನೆ ನಿಜವಾದ ಗುರು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099