ದೇವಮಂದಿರದಲ್ಲಿ ಶಹನಾಯಿ ನುಡಿಸುತಿರೆ
ಬಿಸ್ಮಿಲ್ಲ ಖಾನರಿಗೆ ದೇವ ಕಂಡ
ಪೂಜೆಗಿಂತಲು ಮಿಗಿಲು ನಾದಾನುಸಂಧಾನ
ನಾದ ಬ್ರಹ್ಮಾನಂದ – ಎಮ್ಮೆತಮ್ಮ
ಶಬ್ಧಾರ್ಥ
ನಾದ = ಸಂಗೀತದ ಧ್ವನಿ ತರಂಗ . ಅನುಸಂಧಾನ = ಧ್ಯಾನ
ಬ್ರಹ್ಮಾನಂದ= ಬ್ರಹ್ಮ ಸಾಕ್ಷಾತ್ಕಾರದಿಂದಾದ ಸಂತೋಷ
ತಾತ್ಪರ್ಯ
ಬಿಸ್ಮಿಲ್ ಖಾನ್ ಅವರ ಚಿಕ್ಕಪ್ಪ ಅಲಿ ಬಕ್ಷ್ ವಿಲಾಯತು ಅವರಲ್ಲಿ ಶಹನಾಯಿ ತರಬೇತಿಯನ್ನು ಪಡೆದರು. ಚಿಕ್ಕಪ್ಪ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಹನಾಯಿ ಬಾರಿಸುತ್ತಿದ್ದರು. ಮುಂದೆ ಬಿಸ್ಮಿಲ್ ಖಾನ್ ಕಾಶಿ ವಿಶ್ವನಾಥನ ಗುಡಿಯಲ್ಲಿ ಸಂಗೀತ ಸೇವೆಯನ್ನು ಭಕ್ತಿಯಿಂದ ಹೋಗಿ ಮಾಡುತ್ತಿದ್ದನು. ಒಮ್ಮೆ ತಲ್ಲೀನನಾಗಿ ಸಂಗೀತ ಸೇವೆ ಮಾಡುವಾಗ ಈತನ ಸಂಗೀತ ಮೆಚ್ಚಿ ವಿಶ್ವನಾಥಕಾಣಿಸುತ್ತಾನೆ. ಈ ಮಾತನ್ನು ಅವರೆ ದೇವರು ಕಂಡದ್ದನ್ನು ಹೇಳುತ್ತಾರೆ. ಸಂಗೀತಕ್ಕೆ ಗಿಡಮರ ಪಶುಪಕ್ಷಿ ಹಸುಹಾವು ಪ್ರಕೃತಿಯನ್ನು ಮತ್ತು ದೇವನನ್ನು ಸೆಳೆಯುವ ಶಕ್ತಿಯಿದೆ. ದೇವರ ಪೂಜೆಗಿಂತ
ನಾದಸ್ವರದ ಧ್ಯಾನ ಶ್ರೇಷ್ಠ. ನಾದ ಭಕ್ತಿಗಳಿಗೆ ಶಿವ ಮೆಚ್ಚಿ
ಒಲಿಯುತ್ತಾನೆ ಎಂಬುದಕ್ಕೆ ಬಿಸ್ಮಿಲ್ ಖಾನರೆ ಸಾಕ್ಷಿ .
ಮತ್ತೆ ಕಣ್ಣಿಲ್ಲದ ಪಂಚಾಕ್ಷರ ಗವಾಯಿಗಳು ಅವರ ಶಿಷ್ಯ ಪುಟ್ಟರಾಜ ಗವಾಯಿಗಳು ಲಿಂಗಯ್ಯನನ್ನು ನಾದಾನುಸಂಧಾನದಿಂದ ಒಲಿಸಿಕೊಂಡವರು. ಅವರಂತೆ ಬಿಸ್ಮಿಲ್ ಖಾನ್ ಕೂಡ ನಾದೋಪಾಸನೆಯಿಂದ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಂಡು ಬ್ರಹ್ಮಾನಂದ ಪಡೆದವರು. ಹೀಗಾಗಿ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಭಾರತರತ್ನದಂಥ ಪ್ರಶಸ್ತಿಗಳು ಅವರಿಗೆ ದೊರಕಿದವು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990