ಇಹದ ಗಂಡನ ತೊರೆದು ಪರದ ಗಂಡನಿಗಾಗಿ
ಅರಸಿ ಹೊರಟಳು ಮಹಾದೇವಿಯಕ್ಜ
ಜರೆಮರಣವಿಲ್ಲದಿಹ ಚೆಲುವನನೆ ವರಿಸಿದಳು
ಪರದೈವ ಪತಿದೇವ – ಎಮ್ಮತಮ್ಮ
ಶಬ್ಧಾರ್ಥ
ಅರಸು = ಹುಡುಕು. ಜರೆ = ಮುಪ್ಪು
ತಾತ್ಪರ್ಯ
ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿ ಅತ್ಯಂತ ಚೆಲುವೆ.
ಅವಳ ಸೌಂದರ್ಯಕ್ಕೆ ಮರುಳಾಗಿ ಆ ಭಾಗದ ಜೈನ ಅರಸ
ಕೌಶಿಕ ರಾಜ ಮದುವೆಯಾಗಲು ಬಯಸುತ್ತಾನೆ .ಆದರೆ ಅಕ್ಕ ಮೂರು ಷರತ್ತಿನ ಮೇಲೆ ವರಿಸುತ್ತಾಳೆ. ಆ ಷರತ್ತುಗಳನ್ನು ಅವನು ಉಲ್ಲಂಘಿಸಿದ ಕಾರಣ ಅರಮನೆ ತೊರೆದು ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಭಾಗಿಯಾಗಿ ಶರಣರಿಂದ ಲಿಂಗದೀಕ್ಷೆ ಪಡೆದು ಲಿಂಗ ಪತಿ ಶರಣ ಸತಿ ಎಂಬ ರೀತಿಯಲ್ಲಿ ಚೆನ್ನಮಲ್ಲಿಕಾರ್ಜುನನ್ನು ಮಧುರಭಕ್ತಿಯಿಂದ ಒಲಿಸುತ್ತಾಳೆ. ಆಗ ಆಕೆಯೊಂದು ವಚನದಲ್ಲಿ ಹೀಗೆ ಹೇಳಿದ್ದಾಳೆ.”ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವಂಗಾನೊಲಿದೆನವ್ವ |
ಎಡೆಯಿಲ್ಲದ ಕಡೆಯಿಲ್ಲದ, ತೆರಹಿಲ್ಲದ, ಕುರುಹಿಲ್ಲದ
ಚೆಲುವಂಗಾನೊಲಿದೆ ಎಲೆ ಅವ್ವ; ನೀನು ಕೇಳಾ ತಾಯೇ!
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು
ಕುಲ ಸೀಮೆಯಿಲ್ಲದ ನಿಸ್ಸೀಮ ಚೆಲುವಂಗೆ ನಾನೊಲಿದೆ,
ಇದು ಕಾರಣ ಚೆನ್ನ ಮಲ್ಲಿಕಾರ್ಜುನ ಚೆಲುವ ಗಂಡನೆನಗೆ;
ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು.” ಆ
ಕಾಲದಲ್ಲಿದ್ದ ಪತಿಯೇ ಪರದೈವ ಎಂಬುದನ್ನು ಬದಲಾಯಿಸಿ ದೇವನೇ ಪತಿದೇವನೆಂದು ಚೆನ್ನಮಲ್ಲಿಕಾರ್ಜುನನ್ನು ವರಿಸಿ ಒಲಿಸಿಕೊಳ್ಳುತ್ತಾಳೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990