ಬೀದರ: ಸರಕಾರಿ ಕನ್ನಡ ಶಾಲೆಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ತಾವು ಬದ್ಧರಿರುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.
ಔರಾದ ತಾಲೂಕಿನ ಬಾದಲಗಾಂವ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಕೋಣೆ ಉದ್ಘಾಟನೆ ಮಾಡಿದ ಸಚಿವ ಪ್ರಭು ಚೌವ್ಹಾಣ್ ಈ ಬಗ್ಗೆ ಭರವಸೆ ನೀಡಿದರು.
ಶಾಲೆಯ ಚಿಕ್ಕ ಮಕ್ಕಳು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರಿಗೆ ಹೂವಿನ ಹಾಸಿಗೆ ಹಾಸಿ ಹೂವುಗಳನ್ನು ಸಚಿವರ ಕಾಲಿಗೆ ಹಾಕಿ ಸ್ವಾಗತ ಮಾಡಿದರು.
ಇದೇ ಸಂದರ್ಭದಲ್ಲಿ ಪಾಲಕರು ಮತ್ತು ಶಿಕ್ಷಕರು ಶಾಲೆಯ ಕೆಲವೊಂದು ಸಮಸ್ಯೆಗಳನ್ನು ಹೇಳಿಕೊಂಡಾಗ ಸ್ಥಳದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯನ್ನು ಕರೆಸಿ ಉಳಿದ ಕೆಲಸವನ್ನು ಪಂಚಾಯತ ವತಿಯಿಂದ ಮಾಡಿಕೊಡಿ ಎಂದು ಸಚಿವರು ತಿಳಿಸಿದರು. ನಂತರ ಕೂಡಲೇ ಶಾಲೆಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ತಾವು ಅನುದಾನ ಕೊಟ್ಟು ಪರಿಹರಿಸುವುದಾಗಿ ಭರವಸೆ ನೀಡಿದರು.
ಸರ್ಕಾರಿ ಶಾಲೆಗೆ ಶೌಚಾಲಯ, ಹೆಚ್ಚಿನ ವರ್ಗಕೋಣೆಗಳ ಸಮಸ್ಯೆ ಇದ್ದು ಇದನ್ನು ಕೂಡಲೇ ಸರಿಪಡಿಸಲು ಸಚಿವರಿಗೆ ಪಾಲಕರು ಮೊರೆ ಇಟ್ಟರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಗೂ ಗ್ರಾಮದ ಸದಸ್ಯರು ಇವರೆಲ್ಲರು ಸೇರಿಕೊಂಡು ಸಚಿವರಿಗೆ ಅದ್ದೂರಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಾಮದಾಸ ಪಾಟೀಲ, ಶಾಲಾ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ, ಪಾಲಕರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ