ಸಿಂದಗಿ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಅವರಿಗೆ ಸೂಕ್ತ ವೇದಿಕೆ ನೀಡಬೇಕು. ಆ ಮೂಲಕ ಮೂಲಕ ಅವರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಸ್ಥಳೀಯ ಮಕ್ಕಳ ಬಳಗ ಸಿಂದಗಿ ಇವರು ಸರಕಾರಿ ಆದರ್ಶ ವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಚಿಣ್ಣರ ನುಡಿ ಸಿರಿ-47 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾಗುರುಗಳಾದ ಹ.ಮ. ಪೂಜಾರ ಅವರು ತಮ್ಮ 82ರ ಇಳಿವಯಸ್ಸಿನಲ್ಲಿಯೂ ಮಕ್ಕಳ ಬಗ್ಗೆ ಚಿಂತನೆ ನಡೆಸುತ್ತಿದ್ದು ನಮಗೆಲ್ಲ ಮಾದರಿಯಾಗಿದೆ. ಅವರು ಶಿಕ್ಷಕ ವೃತ್ತಿಯ ಜೊತೆಗೆ 1976ರಲ್ಲಿ ಮಕ್ಕಳ ಬಳಗ ಕಟ್ಟುವ ಮೂಲಕ ಮಕ್ಕಳಿಗೆ ಸೂಕ್ತ ವೇದಿಕೆ ನೀಡಿ ಅವರ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾಗಿದ್ದಾರೆ. ಅವರು ಮಕ್ಕಳ ಬಳಗದ ಮೂಲಕ ಚಿಣ್ಣರ ನುಡಿ ಸಿರಿ, ಮಕ್ಕಳ ಹಬ್ಬ, ಮನೆ ಅಂಗಳದಲ್ಲಿ ಚಿಲಿಪಿಲಿ, ಶಾಲೆಯ ಆವರಣದಲ್ಲಿ ಮಕ್ಕಳ ಕಲರವ, ವಿಜ್ಞಾನ ಮೇಳ, ಮಕ್ಕಳ ಸಾಹಿತ್ಯ ಸಮ್ಮೇಳನ ಮುಂತಾದ ವೇದಿಕೆ ನೀಡುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಮಕ್ಕಳಿಗೆ ಪ್ರೋತ್ಸಾಹಿಸಿದ್ದಾರೆ. ನಾನು ಶಾಸಕನಾದ ಮೇಲೆ ಪ್ರಾಥಮಿಕ ಶಿಕ್ಷಣಕ್ಕೆ ಒತ್ತುಕೊಡುವ ಉದ್ದೇಶದಿಂದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳ ಜಿರ್ಣೊಧ್ಧಾರ ಕಾರ್ಯಕ್ರಮಗಳನ್ನು ಹೆಚ್ಚಿನ ಮಹತ್ವ ನೀಡುತ್ತಿದ್ದೇನೆ. ಸರ್ಕಾರಿ ಶಾಲೆಗಳಿಗೆ ಹಂತ ಹಂತವಾಗಿ ಮೂಲಕ ಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಮಾಡಬೇಕಾಗುತ್ತದೆ. ಎಲ್ಲ ಅಂಶಗಳನ್ನು ಇಟ್ಟುಕೊಂಡು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂಥ ಎರಡು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ಶಾಲೆಗೆ 25 ಲಕ್ಷ ಅನುದಾನ ನೀಡಿ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವ ಕಾರ್ಯ ಮಾಡಲಾಗುತ್ತದೆ. ಆದರ್ಶ ಸರಕಾರಿಯಲ್ಲಿ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಹೇಳಿದರು.
ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ವರ್ಷಿಣಿ ನಾಯಕ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಶರಧಿ ಹಿರೇಮಠ, ವಿಜಯಪುರದ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿನಿ ದಾನೇಶ್ವರಿ ಆಲಾಳ ಮಾತನಾಡಿದರು.
ಮಕ್ಕಳ ಬಳಗದ ಸಂಚಾಲಕ ಹ.ಮ. ಪೂಜಾರ ಮಾತನಾಡಿ, ಕಳೆದ 47 ವರ್ಷಗಳಿಂದ ಮಕ್ಕಳ ಬಳಗದ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ವಿವಿಧ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ. ವಿದ್ಯಾಚೇತನ ಪ್ರಕಾಶನದ ಮೂಲಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಸರಕಾರಿ ಆದರ್ಶ ವಿದ್ಯಾಲಯದ ಎಸ್ಡಿಎಂಸಿ ಅಧ್ಯಕ್ಷ ರವಿ ಬಮ್ಮಣ್ಣಿ ಅಧ್ಯಕ್ಷತೆ ವಹಿಸಿದ್ದರು. ಗೋಲಗೇರಿಯ ರವಿರಾಜ ದೇವರಮನಿ ಅವರು ವೇದಿಕೆ ಮೇಲೆ ಇದ್ದರು.
ಗೋಷ್ಠಿ-1: ಹಳೆಬೇರು ಹೊಸ ಚಿಗುರು.
ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಮಾತನಾಡಿ, ಮಕ್ಕಳು ಪಠ್ಯ ಅಧ್ಯಯನ ಜೊತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಭೆಯನ್ನು ಅನಾವರಣಗೊಳಿಸಿ. ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರು ಮಕ್ಕಳ ಬಳಗದ ಮೂಲಕ ಮಕ್ಕಳಿಗೆ ಸೂಕ್ತ ವೇದಿಕೆ ನೀಡುತ್ತಿರುವುದು ನಿಮ್ಮೆಲ್ಲರ ಪುಣ್ಯ. ಈ ವೇದಿಕೆಯನ್ನು ಮಕ್ಕಳು ಸದುಪಯೋಗ ಪಡೆಸಿಕೊಳ್ಳ ಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯಾದ್ಯಾಪಕ ಎಸ್.ಕೆ. ಬಿರಾದಾರ ಮಾತನಾಡಿದರು. ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ವೈಷ್ಣವಿ ಲಕ್ಷಾನಟ್ಟಿ ಅವರು ನಾನು ಓದಿದ ಕವನ ಸಂಕಲನ ಕುರಿತು, ವಿದ್ಯಾರ್ಥಿನಿ ಶ್ರೀನಿಧಿ ಹುಲಗಬಾಳ ಅವರು ನಾನು ಓದಿದ ಮಕ್ಕಳ ಕಾದಂಬರಿ ಕುರಿತು ಉಪನ್ಯಾಸ ನೀಡಿದರು. ಶಿಕ್ಷಣ ಸಂಯೋಜಕ ಆನಂದ ಮಾಡಗಿ ವೇದಿಕೆ ಮೇಲೆ ಇದ್ದರು.
ಗೋಷ್ಠಿ-2: ಪುಸ್ತಕ ಓದು ಮಸ್ತಕ ತಣಿಸು
ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಂದಿತಾ ಸಿಂದಗಿ ಅವರು ನಾವೇಕೆ ಓದಬೇಕು ಕುರಿತು, ವಿಜಯಪುರದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿನಿ ಸಂಜನಾ ರೂಡಗಿ ಅವರು ನಾನು ಮೆಚ್ಚಿದ ಕವನ ಕುರಿತು, ಬೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ನ ವಿದ್ಯಾರ್ಥಿನಿ ರಕ್ಷಿತಾ ಸಣ್ಣಹಳ್ಳಿ ಅವರು ನಾನು ಕಥೆ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯ ವಿದ್ಯಾರ್ಥಿ ಶ್ರೀಶೈಲ ಮೂಲಿಮನಿ ಮಾತನಾಡಿದರು.
ಗೋಷ್ಠಿ-3: ಮಕ್ಕಳ ಮನದಾಳ ಮಾತು
ಮುಖ್ಯ ಅತಿಥಿ ಪದ್ಮರಾಜ ಪಬ್ಲಿಕ್ ಸ್ಕೂಲ್ನ ಸಂಜನಾ ಮಾರ್ಸನಳ್ಳಿ ಮಾತನಾಡಿದರು. ಶ್ರೀ ಪದ್ಮರಾಜ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ ಅನಿಲ ಕಾಮನಕೇರಿ ಅವರು ನನ್ನ ಮೇಲಿನ ಒತ್ತಡಗಳು ಕುರಿತು, ಪ್ರೇರಣಾ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿನಿ ವಿಜಯಲಕ್ಷ್ಮೀ ವಸ್ತ್ರದ ಅವರು ನಮಗೂ ಹಕ್ಕುಗಳಿವೆ ಕುರಿತು, ಬೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ನ ವಿದ್ಯಾರ್ಥಿನಿ ಲಕ್ಷ್ಮೀ ಚಬನೂರ ಅವರು ನಮಗೊಂದು ಗುರಿ ಇರಬೇಕು ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆವ ವಹಿಸಿದ ಸಿಂದಗಿಯ ಪ್ರೇರನಾ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿನಿ ನಂದಿನಿ ಚವ್ಹಾಣ ಮಾತನಾಡಿದರು.
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ನೀಡಿದ ಹ.ಮ. ಪೂಜಾರ ಗುರುಗಳು ಸೇರಿದಂತೆ ಇನ್ನೂಳಿದ ಶಿಕ್ಷಕರು, ಪ್ರೌಢಶಾಲೆ ಹಂತದಲ್ಲಿ ಎಚ್.ಟಿ. ಕುಲಕರ್ಣಿ ಗುರುಗಳು ಸೇರಿದಂತೆ ಇನ್ನೂಳಿದ ಶಿಕ್ಷಕರು, ಹಾಗೂ ಶಿಕ್ಷಣ ಪ್ರೇವಿಗಳಾಗಿದ್ದ ನನ್ನ ತಂದೆ ಶಾಸಕ ದಿ.ಎಂ.ಸಿ. ಮನಗೂಳಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಹ.ಮ. ಪೂಜಾರ ಅವರ ಮಕ್ಕಳ ಬಳಗದ ಪ್ರೇರಣೆಯಿಂದ ಮಕ್ಕಳ ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತೇನೆ.
–ಅಶೋಕ ಮನಗೂಳಿ, ಶಾಸಕರು, ಸಿಂದಗಿ