ಅತಿಥಿ ಶಿಕ್ಷಕರಿಗೆ ಸ್ವಂತ ಸುಮಾರು ೨೫.೧೫ ಲಕ್ಷ ರೂಪಾಯಿ ಗೌರವ ಸಂಭಾವನೆ ವಿತರಿಸಿದ ಬಾಲಚಂದ್ರ ಜಾರಕಿಹೊಳಿ

0
118

ಅತಿಥಿ ಶಿಕ್ಷಕರ ಪಾಲಿಗೆ ದೈವೀ ಸ್ವರೂಪಿಯಾದ ಶಾಸಕ ಬಾಲಚಂದ್ರ ಜಾರಕಿಹೊಳಿ

೧.೫೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಶಾಲಾ ಬ್ಯಾಗ್, ಸ್ವೆಟರ್, ಸಮವಸ್ತ್ರ ನೀಡಿದ ಶಾಸಕರು

ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸುವ ಮೂಲಕ ಪ್ರತಿ ವರ್ಷವೂ ಉತ್ತಮವಾದ ಫಲಿತಾಂಶವನ್ನು ನೀಡುತ್ತ ಬರುತ್ತಿದ್ದು, ಕೊರತೆಯಿರುವ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದೇನೆ. ಸ್ವಂತ ಹಣದಿಂದ ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳೂ ವೇತನ ನೀಡುತ್ತ ಬರುತ್ತಿರುವುದಾಗಿ ಅರಭಾವಿ ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಬುಧವಾರದಂದು ಸಂಜೆ ನಗರದ ತಮ್ಮ ಎನ್‌ಎಸ್‌ಎಫ್ ಕಚೇರಿಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ತಮ್ಮ ವೈಯಕ್ತಿಕವಾದ ೨೫.೧೫ ಲಕ್ಷ ರೂಪಾಯಿಗಳನ್ನು ವಿತರಿಸಿ ಮಾತನಾಡಿದ ಅವರು,. ೧೯೯೩ ರಿಂದಲೂ ನಾನು ಈ ಭಾಗದ ಶಾಸಕನಾಗುವ ಮೊದಲೇ ಶಿಕ್ಷಕರಿಗೆ ಗೌರವ ಧನವನ್ನು ನೀಡುವ ಶೈಕ್ಷಣಿಕ ಕಾಳಜಿಯ ಪರಿಪಾಠವನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಅವರು ತಿಳಿಸಿದರು.

ಮೂಡಲಗಿ ವಲಯವು ಶೈಕ್ಷಣಿಕವಾಗಿ ಮುಂದೆ ಬರಬೇಕು. ಈ ವಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ವ- ಸಾಮರ್ಥ್ಯದ ಮೇಲೆ ಸಮಾಜದಲ್ಲಿ ಉನ್ನತವಾದ ಸ್ಥಾನಮಾನಗಳನ್ನು ಗಳಿಸಬೇಕು ಎಂಬ ಸದುದ್ದೇಶದಿಂದ ನಮ್ಮ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ನೀಡುವ ದೃಷ್ಟಿಯಿಂದ ಸ್ವತಃ ನಾನೇ ಆಸಕ್ತಿ ವಹಿಸಿ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ನೀಡುತ್ತಿದ್ದೇನೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಬಾರದು. ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಪ್ರತಿಯೊಬ್ಬರೂ ಅಕ್ಷರದ ಜ್ಞಾನವನ್ನು ಹೊಂದಬೇಕು. ಕಲಿಯುವ ವಯಸ್ಸನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಕಳೆದು ಹೋದ ಸಮಯವನ್ನು ಏನೂ ಕೊಟ್ಟರೂ ವಾಪಸ್ಸು ಬರುವುದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

೨೫.೧೫ ಲಕ್ಷ ರೂಪಾಯಿ ಗೌರವ ಧನ ನೀಡಿದ ಶಾಸಕ-                    ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ನಿಧಿಯಿಂದ ಮೂಡಲಗಿ ವಲಯದ ೭೯ ಅತಿಥಿ ಶಿಕ್ಷಕರಿಗೆ ಮಾಸಿಕ ರೂ ೭ ಸಾವಿರದಂತೆ ೧೦ ತಿಂಗಳ ವೇತನ ೨೫,೧೫,೩೦೦ ರೂಪಾಯಿಗಳನ್ನು ವಿತರಿಸಿದರು. ಉಳಿದಂತೆ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳ ಸುಮಾರು ೩೦ ಸಾವಿರ ವಿದ್ಯಾರ್ಥಿಗಳಿಗೆ ೧.೫೫ ಕೋಟಿ ರೂಪಾಯಿ ಮೊತ್ತದ ಶಾಲಾ ಬ್ಯಾಗ್, ಸಮವಸ್ತ್ರ ಮತ್ತು ಶ್ವೇಟರ್ ಗಳನ್ನು ವಿತರಣೆ ಮಾಡಿದರು.

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೀತಾರಾಮು ಆರ್.ಎಸ್. ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಮಾಜಮುಖಿ ಕೆಲಸವನ್ನು ಮನಸಾರೆ ಕೊಂಡಾಡಿದರು. ೮ ನೇ ವರ್ಗ ಓದುತ್ತಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದಿದ್ದಲ್ಲಿ ಮುಂದಿನ ೧೦ ನೇ ವರ್ಗದ ಉತ್ತಮ ಫಲಿತಾಂಶಕ್ಕೆ ಅಣಿ ಮಾಡಬಹುದೆಂದು ಅವರು ಸಲಹೆ ಮಾಡಿದರು.

ಮೂಡಲಗಿ ವಲಯದ ಬಿಇಓ ಅಜೀತ ಮನ್ನಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮೂಡಲಗಿ ವಲಯದ ಸಾಧನೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೇ, ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಗೋಕಾಕ ಬಿಇಓ ಜಿ.ಬಿ.ಬಳಿಗಾರ, ಮೂಡಲಗಿ ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ, ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ.ಮಲಬನ್ನವರ, ಸಮನ್ವಯಾಧಿಕಾರಿ ರೇಣುಕಾ ಆನಿ ಉಪಸ್ಥಿತರಿದ್ದರು.