ಮದನಾರಿ ಸತಿ ರೇಣುಕ
ಮದವೇರಿದ ತುಂಬಿದ ತನು
ತಂದಳು ಸತಿ ರೇಣುಕೆ
ಮನೆಮುಂದಿನ ಅಂಗಳದಲಿ
ಕಸಬಳಿದಳು ಬಳಲಿಕೆ
ಏದುಸಿರನು ಬಿಡುಬಿಡುತಲಿ
ನೀರನು ಚಳೆಹೊಡೆದಳು
ಆಯಾಸದಿ ಬಾಗುತ್ತಲಿ
ರಂಗೋಲಿಯ ಬರೆದಳು
ಮಹಾಮನೆಯ ಮಹಾದೇವಿ
ಮಹಾಕಾಯ ಹೊತ್ತಳು
ಬೇಸರದಲಿ ಬುಸುಗುಡುತಲಿ
ನಿಟ್ಟುಸಿರನು ಬಿಟ್ಟಳು
ಹಾದಾಡುವ ಹೊಸತಿಲಲ್ಲಿ
ಬಂದಳು ಹೊಯ್ದಾಡುತ
ಮನೆಬಾಗಿಲ ತುಂಬ ತಾನೆ
ನಿಂದಳು ತುಳುಕಾಡುತ
ಬಂಗಾರದ ಆಭರಣವ
ಮೈಯ್ಯತುಂಬ ತೊಟ್ಟಳು
ಇಲಕಲ್ಲಿನ ಕೈಮಗ್ಗದ
ಭಾರಿಸೀರೆ ಉಟ್ಟಳು
ಬಿಳಿಬಣ್ಣದ ಪರಿಮಳ ಪುಡಿ
ಬಳಿದಳು ಚೆಲುವದನಕೆ
ದಟ್ಟವಾದ ಕೆಂಬಣ್ಣವ
ಲೇಪಿಸಿದಳು ಅಧರಕೆ
ಸಿಂಗರಿಸಿದ ಮೈಸೂರಿನ
ಮದದಾನೆಯ ತೆರದಲಿ
ಬೈಗು ವಾಯು ವಿಹಾರಕ್ಕೆ
ಹೊರಹೊರಟಳು ಜವದಲಿ
ದಪ್ಪಮೈಯ್ಯ ಬಳುಕಿಸುತ್ತ
ಮಂದಗಮನಿ ನಡೆದಳು
ಸೊಂಡಿಲಗೈ ತಿರುಗಿಸುತ್ತ
ಸಾವಕಾಶ ಹೋದಳು
ನಾಯಿ ದಣಿದು ತೇಕುವಂತೆ
ಏಗುತ್ತಲಿ ಹೊರಟಳು
ಬಳಲಿ ಬಳಲಿ ಬೆಂಡಾದಳು
ಬೇಗನೆ ಬೇಸತ್ತಳು
ನಡೆದುನಡೆದು ಮೈಬೆವೆತಳು
ಉಸಿರಾಟವು ಹೆಚ್ಚಿತು
ಮೈಯ್ಯಿಕೈಯ್ಯಿಕಾಲಿನಲ್ಲಿ
ನೋವುಜಾಸ್ತಿಯಾಯಿತು
ಕಾಲ್ಸೋತವು ಕೆಳಕುಳಿತಳು
ಕಣ್ಕತ್ತಲು ಚಕ್ಕರು
ನಡೆದಾಡುವ ಹಾದಿಯಲ್ಲಿ
ನೋಡಿದ ಜನ ನಕ್ಕರು
ಎದ್ದು ಬಿದ್ದು ಸಾವರಿಸುತ
ಮೇಲಕೆದ್ದು ನಿಂತಳು
ಮದನಾರಿಯು ಮನಸಿನಲ್ಲಿ
ನಾಚುತ ನೀರಾದಳು
++++00++++
(ಚೆನ್ನವೀರ ಕಣವಿಯವರ “ನೀಲಾಂಬಿಕೆ” ಕವನ
“ಸದುವಿನಯದ ತುಂಬಿದ ಕೊಡ
ತಂದಳು ನೀಲಾಂಬಿಕೆ” ಧಾಟಿಯಲ್ಲಿ)
ರಚನೆ: ಎನ್.ಶರಣಪ್ಪ ಮೆಟ್ರಿ