ಹೊಸದಿಲ್ಲಿ – ಕೊರೋನಾ ಇನ್ನೂ ತೊಲಗಿಲ್ಲ. ಆದ್ದರಿಂದ ದೇಶವಾಸಿಗಳು ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ದೇಶದಲ್ಲಿ ಒಮಿಕ್ರಾನ್ ವೈರಸ್ ಹರಡುವಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಮೊದಲು ದೇಶವಾಸಿಗಳಿಗೆ ಕ್ರಿಸ್ ಮಸ್ ಶುಭಾಶಯಗಳನ್ನು ಹೇಳಿದ ಪ್ರಧಾನಿ ಮೋದಿಯವರು, ಭಾರತದಲ್ಲಿ ಈವರೆಗೂ ೧೪೧ ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.ಜನ ಜೀವನ ಸಹಜ ಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲಿಯೇ ಒಮಿಕ್ರಾನ್ ಸಂಕಟ ಬಂದಿದೆ. ಅದಕ್ಕಾಗಿ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
೨೦೨೨ ರ ಜನವರಿ ೩ ರಿಂದ ೧೫ ರಿಂದ ೧೮ ವರ್ಷದ ಮಕ್ಕಳಿಗೆ ಶಾಲೆ ಕಾಲೇಜುಗಳಲ್ಲಿಯೇ ಲಸಿಕೆ ನೀಡಲಾಗುವುದು. ಜ.೧೦ ರಿಂದ ಫ್ರಂಟ್ ಲೈನ್ ಕೆಲಸಗಾರರಿಗೆ ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ ಅವರ ವೈದ್ಯರ ಸಲಹೆಯ ಮೇರೆಗೆ ಬೂಸ್ಟರ್ ಡೋಸ್ ನೀಡಲಾಗುವುದು. ಮೂಗಿನಲ್ಲಿ ಹಾಕುವ ಲಸಿಕೆ ಹಾಗೂ ಡಿಎನ್ಎ ಆಧಾರಿತ ಲಸಿಕೆಯನ್ನೂ ಕೊಡುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದರು.
ಕೊರೋನಾ ಇನ್ನೂ ತೊಲಗಿಲ್ಲ. ನಾವು ಕ್ರಿಸ್ ಮಸ್ ಹಾಗೂ ಹೊಸವರ್ಷದ ಆಚರಣೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗಿದೆ. ಕೊರೋನಾ ವಿಷಯದಲ್ಲಿ ಭ್ರಮೆ ಹಾಗೂ ವದಂತಿಗಳನ್ನು ಹರಡಲಾಗುತ್ತಿದ್ದು ಅದಕ್ಕೆ ಜನರು ಕಿವಿಗೊಡದೆ ಧೈರ್ಯದಿಂದ ಕೊರೋನಾವನ್ನು ಎದುರಿಸಬೇಕು ಎಂದು ನುಡಿದ ಪ್ರಧಾನಿ ಮೋದಿಯವರು, ಇಂದು ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನ ಹಾಗೂ ಕ್ರಿಸ್ ಮಸ್ ದಿನದ ಶುಭಾಶಯಗಳನ್ನು ದೇಶದ ಜನರಿಗೆ ತಿಳಿಸಿದರು.