ಲೇಖನ : ಹಣ ಎಲ್ಲವೂ ಅಲ್ಲ ಆದರೆ ಹಣವಿಲ್ಲದೆ ಏನೇನಿಲ್ಲಾ

Must Read

ಹೌದು, ಇವತ್ತಿನ ಕಾಲಘಟ್ಟಕ್ಕೆ ಹಣಕ್ಕೆ ನೀಡುವ ಪ್ರಾಶಸ್ತ್ಯ ಬೇರಾವುದಕ್ಕೂ ಇಲ್ಲದಾಗಿದೆ. ಒಂದು ಕಾಲಕ್ಕೆ ಸಮಯ, ಸಂಬಂಧ, ಆತ್ಮವಿಶ್ವಾಸ ಇವುಗಳಿಗೆ ಬೆಲೆ ನೀಡುತ್ತಿದ್ದ ಜನರು ಈಗ ಹಣದ ಮೇಲೆ ನಿಂತಿದ್ದಾರೆ. ಓಡುತ್ತಿರುವ ಕಾಲದ ಜೊತೆ ಜೊತೆಗೆ ಲಗಾಮಿಲ್ಲದ ಕುದುರೆ ಓಡಿದಂತೆ ಹಣ, ಅಂತಸ್ತಿನ ಬೆನ್ನತ್ತಿದ ಬಹುತೇಕರು ಸಂಬಂಧಗಳ ಸರಪಳಿಯನ್ನೇ ಕಡಿದು ಬದುಕುತ್ತಿರುವುದು ಆಧುನಿಕತೆಯ ವಿಪರ್ಯಾಸ. ಅರೆ, ಇದೇನಪ್ಪಾ ನಮಗಾಗಿ ಕೂಡಿಡುವುದು ತಪ್ಪಾ? ನಮ್ಮ ಮುಂದಿನ ಅಗತ್ಯಗಳಿಗೆ, ಅವಶ್ಯಕತೆಗಳಿಗೆ ಗಳಿಸುವುದು ತಪ್ಪಾ ಎಂಬುದಾಗಿ ಯೋಚಿಸುವುದು ಸಾಮಾನ್ಯ ಆದರೆ ನಮ್ಮನ್ನೇ ನಾವು ಬಂದ ಮೂಲವನ್ನೇ ಮರೆಯುವಷ್ಟರ ಮಟ್ಟಿಗೆ ಇರಬಾರದು. ಬದುಕಿನಲ್ಲಿ ಏನೆಲ್ಲಾ ಗಳಿಸಿದ್ದೀನಿ ಎನ್ನುವುದಕ್ಕಿಂತ ಆತ್ಮತೃಪ್ತಿಯಾಗುವಂತೆ ಬದುಕಿದ್ದೇನೆ ಎನ್ನುವುದು ಮುಖ್ಯ. ಯಾರನ್ನೋ ಮೆಚ್ಚಿಸಲಿಕ್ಕೊ, ಇನ್ನ್ಯಾರನ್ನೋ ಮೀರಿಸಲಿಕ್ಕೊ ಹೆಜ್ಜೆಯನ್ನು ಅಣಿ ಇಡುವುದಾದರೆ ಇಡೀ ಬದುಕನ್ನ ನಾವು ಮತ್ತೊಬ್ಬರಿಗಾಗಿ ಜೀವಿಸಿದಂತೆ. “ಬಯಕೆಗೆ ಬಡವರಿಲ್ಲ”ಎನ್ನುವಂತೆ ಆಸೆ ಪಡುವುದು ತಪ್ಪಲ್ಲ, ಅದರ ಈಡೇರಿಕೆಗಾಗಿ ಅತಿಯಾಸೆಯಿಂದ ಇರುವ ದಾರಿಯಲ್ಲೇ ಕವಲು ದಾರಿ ಹುಡುಕುವುದು ತಪ್ಪು. ಇವತ್ತಿನ ಕಾಲಮಾನಕ್ಕೆ ಹಣ ಮಾತ್ರ ಮುಖ್ಯ. ನೂರಕ್ಕೆ ತೊಂಬತ್ತೈದರಷ್ಟು ಸಂಬಂಧಗಳಿಗೆ ಇಲ್ಲದ ಬೆಲೆ ಹಣಕ್ಕೆ ಇದೆ. ಅಷ್ಟಿಲ್ಲದೆ ದೊಡ್ಡವರು “ಕಾಸಿದ್ದರೆ ಕೈಲಾಸ”ಎನ್ನುವ ಮಾತನ್ನು ಬಾಯಿಮಾತಿಗೆ ಹೇಳಿಲ್ಲ, ನಿತ್ಯ ಸತ್ಯ. ಇತ್ತೀಚಿಗಂತೂ ಪ್ರೀತಿ, ನಂಬಿಕೆ, ಮಮತೆ,ವಾತ್ಸಲ್ಯ,ಹರಕೆ, ಹಾರೈಕೆಗಳು ಕೂಡ ನಿನ್ನ ಬಳಿ ಏನಾದರೂ ಇದೆಯಾ ಎನ್ನುವುದನ್ನು ಕಂಡುಕೊಂಡು ಸಿಗುತ್ತವೆ. ಅವುಗಳು ಸಾಮಾನ್ಯವಾಗಿ ಸಿಕ್ಕವರೇ ಪುಣ್ಯವಂತರು. ಇತ್ತೀಚಿಗಂತೂ ದಿನದಿಂದ ದಿನಕ್ಕೆ ಹಣವಿಲ್ಲದೆ ಹೋದರೆ ಬದುಕುವುದೇ ಕಷ್ಟವಾಗಿ ಬಿಟ್ಟಿದೆ. ಅಂತಸ್ತಿನ ಅಹಂ ನ ಅಮಲು ನೆತ್ತಿಗೇರಿದಾಗ ತಾನಾಗೇ ಇಳಿಯುವ ಸಮಯ ಬರುತ್ತದೆ. ಸಂಪತಿನ ಅಹಂ ನ ಅಮಲು ಒಂದು ರೀತಿಯ ಹೆಮ್ಮರವಾಗಿ ಬೆಳೆದು ನಿಂತ ಮರದ ಹಣ್ಣೆಲೆ ಇದ್ದಹಾಗೆ ಅದನ್ನ ಉದುರಿಸಲು ಮರವನ್ನೇ ಅಲುಗಾಡಿಸಬೇಕೆಂದೇನಿಲ್ಲ ದಿನ ಕಳೆದ ಮೇಲೆ ತಾನೆ ಕೆಳಗೆ ನುಸುಳಿ ಬೀಳುತ್ತದೆ. ಕಾಲ ನಿಯಮವದು ಕಾಲದುರುಳಿಗೆ ಸಿಕ್ಕವರು ಕಾಲಗಣನೆಗೆ ನಿಂತವರು ಉತ್ತರ ತೆರುವಂತೆ ಕಾಲವೇ ನಿರ್ಧರಿಸುವುದು. ಯಾರು, ಯಾವುದು ಶಾಶ್ವತವಲ್ಲ. ಇರುವಷ್ಟು ದಿನ ಇದ್ದವರ ಲೆಕ್ಕಾಚಾರದಲ್ಲಿ ಅಳಿದುಳಿದು ಹೋಗುವುದು ಲೋಕನಿಯಮ. ಇರುವುದರಲ್ಲೇ ಖುಷಿಯಾಗಿರುವವರಿಗೆ ಸಣ್ಣ ಸಣ್ಣ ಸಂಗತಿಗಳು ಕೂಡ ಮತ್ತಷ್ಟು ಖುಷಿ ತಂದುಕೊಡುತ್ತದೆ. ಇರುವುದರಲ್ಲಿ ಖುಷಿ ಕಾಣದೆ ಮತ್ತಷ್ಟು ಏನನ್ನೋ ಗಳಿಸುವ ನಿಟ್ಟಿನಲ್ಲಿ ಕೆಲವರು ಇರುವುದನ್ನು ಕಳೆದುಕೊಳ್ಳುವರು. ಹೇಗೆಂದರೆ ಸಮುದ್ರದಲ್ಲಿ ಸಿಕ್ಕ ಮುತ್ತು ಬಿಟ್ಟು ಅದರ ಚಿಪ್ಪು ಹುಡುಕಿದಂತೆ. ಹುಡುಕಾಟ ಅಲೆದಾಟವನ್ನು ಮಾತ್ರ ತಂದುಕೊಡಬಲ್ಲದು ನೆಮ್ಮದಿಯನ್ನಂತು ಅಲ್ಲ. ನೆಮ್ಮದಿಯ ಬದುಕನ್ನು ಹೊರೆಯಲು ದೈನೇಸಿ ಬದುಕಿನಲ್ಲೊಂದು ಕಾಯಕ, ಬದುಕು ತೂಗಿಸಲು ಅಂಗೈಯಷ್ಟು ಜಾಗ, ಗೌರವದಿಂದ ಬದುಕಲು ಸಂಸ್ಕಾರ ಇಷ್ಟರ ಜೊತೆ ಜೊತೆಗೆ ನೆಮ್ಮದಿ ಇದ್ರೆ ಅದರಷ್ಟು ಶ್ರೀಮಂತಿಕೆ ಇನ್ನೇನಿದೆ.

ಪ್ರಸ್ತುತ ಸಮಾಜ ಇರುವುದು ಹೇಗೆ ಎಂದರೆ ಹಣವಿದ್ದರೆ ಎಲ್ಲ ಇಲ್ಲದೆ ಹೋದರೆ ಏನೂ ಇಲ್ಲ. “ಕಾಸಿಲ್ಲವೆಂದರೆ ಕಾಸಿನಷ್ಟು ಬೆಲೆ ಇಲ್ಲ” ಎಂಬ ಮಾತು ಅಕ್ಷರಶಃ ಸತ್ಯ. ಎಲ್ಲೇ ಹೋದರು ನೀನು ಧನವಂತ ಎಂದು ತಿಳಿದರೆ ಅಲ್ಲಿ ಸಿಗುವ ಆತಿಥ್ಯ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಹಣ ಮಾನವ ಜಗತ್ತಿನಲ್ಲಿ ಅಣಿ ಇಟ್ಟಿದೆ. ಹಣ ಸಂಬಂಧಗಳನ್ನು ಕೆಡಿಸಿರುವ ಉದಾಹರಣೆಗಳನ್ನು ನಾವು ನೋಡಬಹುದು. ಹೇಗೆಂದರೆ ಸಂಬಂಧಗಳಲ್ಲಿ ಕಷ್ಟವೆಂದು ಪಡೆದ ಹಣವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸಲು ಆಗದೆ ಹೋದಾಗ, ಸ್ನೇಹದ ನಡುವೆ ಕಾಂಚಾಣ ಕುಣಿದು ಕುಪ್ಪಳಿಸಿ ಕೊಟ್ಟ ಹಣ ಪಣತೊಟ್ಟು ಬೇಕೇ ಬೇಕೆಂದು ಪಟ್ಟು ಹಿಡಿದು ಕುಳಿತಾಗ, ಆಸ್ಪತ್ರೆಗಳಲ್ಲಿ ಎಷ್ಟೋ ಜೀವಗಳು ಪ್ರಾಣ ಪಣಕ್ಕಿಟ್ಟು ಜೀವ ಉಳಿಸಿಕೊಳ್ಳಲು ಹೋರಾಡುವಾಗ, ಇತ್ತೀಚಿಗಂತೂ ವಿದ್ಯೆ ಅಂದರೆ ಜ್ಞಾನಾರ್ಜನೆಗಾಗಿಯೂ, ಅಷ್ಟೇ ಯಾಕೆ ಜೀವ ತೊರೆದ ಹೆಣದ ಸಂಸ್ಕಾರಕ್ಕೂ ಸುಂಕ ಕಟ್ಟಬೇಕಾಗಿದೆ ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಹಣ ಹಣವೆಂದು ಹಣ ಮಾಡಲು ಹೊರಟು ಹೆಣವಾದವರನ್ನು ಕಂಡಿದ್ದೇವೆ. ಪ್ರಾಮಾಣಿಕವಾಗಿ ಗಳಿಸಿ ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕು ನಡೆಸುವತ್ತ ನೆಡಬೇಕು ಚಿತ್ತ. ಗೆಲುವು ತಡವಾದರೂ ಪ್ರಾಮಾಣಿಕವಾಗಿರಬೇಕು. ಸರಳ ನಡೆ ನುಡಿಯು ಬದುಕಿನ ಕೊನೆಯ ಕಾಲಕ್ಕೂ ನಮ್ಮನ್ನು ಕಾಯುವಂತಿರಬೇಕು. ಬದುಕಿನಿಂದ ಎದ್ದು ಹೊರಡುವಾಗ ನಾವು ಏನನ್ನೂ ಒಯ್ಯುವುದಿಲ್ಲ, ಏನೇನನ್ನು ಒಯುವುದಿಲ್ಲ. ಉದಾ:”ಗತ್ತನ್ನೇ ಗೆದ್ದೇನೆಂದು ಬೀಗುತ್ತಿದ್ದ ಅಲೆಕ್ಸಾಂಡರ್ ನು ತನ್ನ ಸಾವಿನ ಕೊನೆಯ ಗಳಿಗೆಯಲ್ಲಿ ನಾನು ಇಷ್ಟೆಲ್ಲಾ ಮೆರೆದರೂ ಗಳಿಸಿದರು ಏನನ್ನೂ ಒಯ್ಯುವುದಿಲ್ಲ”ಎನ್ನುವುದು ಎಲ್ಲರಿಗೂ ಅರ್ಥವಾಗಲಿ ಹಾಗಾಗಿ ನನ್ನ ಕೈಗಳನ್ನು ಆಚೆ ಹಾಕಿ ನನ್ನನ್ನು ಸಂಸ್ಕಾರ ಮಾಡಿ ಎಂದು ಹೇಳಿದ ಮಾತುಗಳನ್ನು ನಾನು ನೆನಪಿಸಿಕೊಳ್ಳಲೇಬೇಕು. ಇಷ್ಟೇ ಇಷ್ಟೇ ಬದುಕು. ನಾವು ಏನೇ ಮಾಡಿದರು ಎಳ್ಳಷ್ಟು ಏನನ್ನೂ ಕರೆದೊಯ್ಯುವುದಿಲ್ಲ ಆದರೆ ಇರುವಷ್ಟು ದಿನ ನಮ್ಮ ಮುಂದಿನ ಪೀಳಿಗೆಗಾಗಿ ಒಂದಷ್ಟು ಗಳಿಸಲೇಬೇಕು ಆದರೆ ಅದಕ್ಕಾಗಿ ಒಳ್ಳೆಯ ಮಾರ್ಗ ಅನುಸರಿಸಬೇಕೆ ಹೊರತು ಅನ್ಯಾಮಾರ್ಗವನ್ನಲ್ಲ. ತಮಿಳ್ ನಲ್ಲಿ ನ ಒಂದು ಗಾದೆ ಪದೇ ಪದೇ ನೆನಪಾಗುತ್ತದೆ ಏನೆಂದರೆ “ಅಧಿಗಂ ಆನಲ್ ಅಮೃತಮುಂ ನಂಜು”. ಅಂದರೆ ಅಮೃತವನ್ನು ಸೇವಿಸಿದರೆ ಒಳಿತು ಎಂದು ಅತಿಯಾದ ಪ್ರಮಾಣದಲ್ಲಿ ಸೇವಿಸಿದರೂ ಅದು ವಿಷವಾಗುತ್ತದೆ’. ಎಂಬುದು. ಹೌದು ಏನೇ ಆದರೂ ಅಷ್ಟೇ ಯಾವುದೇ ಆಗಲಿ ಅತಿಯಾದರೆ ಅದು ನಮಗೆ ಕಷ್ಟವನ್ನು ತಂದೊಡ್ಡಬಹುದು. ಜ್ಞಾನಕ್ಕಿಂತ ಮಿಗಿಲಾದದು ಏನೂ ಇಲ್ಲ ಎಂದು ಹೇಳುವ ಹೊಸ್ತಿಲಲ್ಲಿ ಹಣಕ್ಕಿಂತ ಮಿಗಿಲಾದದ್ದೇನಿಲ್ಲ ಎನ್ನುವಂತಹ ಪರಿಸ್ಥಿತಿ ಇಂದಿನ ದಿನಮಾನಗಳಲ್ಲಿ ನಿರ್ಮಾಣವಾಗಿದೆ.

ಹಣದ ಸುರಿಮಳೆಯಲ್ಲಿ ಮಿಂದೆದ್ದರೆ ಸಾಲದು ಗುಣದ ಸಾಗರದಲ್ಲೂ ಈಜಬೇಕಾಗುತ್ತದೆ. “ಧನಂ ಮೂಲಂ ಇದಂ ಜಗತ್ತು” ಎನ್ನುವಂತಹ ಮಾತು ಸದಾ ಸತ್ಯ ಎನ್ನುವ ಹಾಗಾಗಿದೆ. ಧನ(ಹಣ)ಇದ್ರೆ ಮಾತ್ರ ಜಗತ್ತು ನಿನ್ನನ್ನು ಅಪ್ಪಿಕೊಳ್ಳುತ್ತದೆ ಹೊರತು ಇಲ್ಲದೆ ಹೋದರೆ ದರಿದ್ರಕ್ಕಿಂತಲೂ ಕಡೆಯಾಗಿ ಕಾಣುತ್ತದೆ. ಇತ್ತೀಚಿಗೆ ಕಂಡ ಒಂದು ಘಟನೆ ನೆನಪಾಗುತ್ತದೆ, ಕಾಡುತ್ತಲೇ ಇರುತ್ತದೆ. ಇಂತಹ ಅನೇಕ ಸಂಧರ್ಭಗಳನ್ನು ನಾವು ಕಂಡಿರಲುಬಹುದು, ಕೇಳಿರಲೂಬಹುದು. ಸಾಮಾನ್ಯ ವರ್ಗದ ಒಂದು ಕುಟುಂಬ, ಶ್ರೀಮಂತ ವರ್ಗದ ಒಂದು ಕುಟುಂಬ ಎರಡು ಕುಟುಂಬಗಳು ದೇವಸ್ಥಾನಕ್ಕೆ ಹೋಗಿದ್ದಾಗ ಸಾಮಾನ್ಯವರ್ಗದ ಕುಟುಂಬವು ದರ್ಶನ ಪಡೆದು ಸಂಕಲ್ಪ ಮಾಡಿಕೊಳ್ಳಲು ಬಿಡದೆ ಮುಂದೆ ಹೋಗುವಂತೆ ಅವರ ಮೇಲೆ ಒತ್ತಡ ಹೇರಿ, ನಿಮಿಷಗಳ ಕಾಲ ನಿಲ್ಲಲ್ಲೂ ಬಿಡದಂತಹ ದೇವಸ್ಥಾನದ ನಿರ್ವಾಹಕರು ಅದೇ ಶ್ರೀಮಂತ ವರ್ಗದವರಿಗೆ ದರ್ಶನದ ಜೊತೆಗೆ ದೇವರ ಸ್ಪರ್ಶವೂ ದಕ್ಕಿತು. ಹಣಕ್ಕೂ, ಗುಣಕ್ಕೂ ಇವೆರಡಕ್ಕೂ ಇರುವ ವ್ಯತ್ಯಾಸವಿದು. ಆದರೆ ಒಳ್ಳೆಯತನ ಒಂದಿಲ್ಲೊಂದು ದಿನ ಕಾಯುತ್ತದೆ ಇಂದು ಇದ್ದವನು ನಾಳೆ ಇಲ್ಲದವನಾಗಬಹುದು, ನಾಳೆ ಇಲ್ಲದವನು ಒಂದು ದಿನ ಎಲ್ಲವೂ ಇದ್ದವನಾಗಬಹುದು. ಬದುಕಿನ ಪುಣ್ಯದ ಕೊಡಪಾನಕ್ಕೆ ಒಳ್ಳೆಯದನ್ನೇ ತುಂಬಿಸಿಕೊಳ್ಳಿ, ಒಳಿತು ಒಂದಿಲ್ಲೊಂದು ಸಮಯಕ್ಕೆ ನಮ್ಮನ್ನು ಕೈಲಿಡಿಯುತ್ತದೆ ಕಳ್ಳಿಯ ಹಾಲು, ಹಸುವಿನ ಹಾಲು ನೋಡಲು ಎರಡೂ ಬೆಳ್ಳಗೆ ಇದ್ರೂ ಸಹ ನೈವೇದ್ಯಕ್ಕೆ ಮಾತ್ರ ಹಸುವಿನ ಹಾಲು ಮಾತ್ರ ಬಳಸುವುದು ಅದೇ ಶ್ರೇಷ್ಠ ಎಂಬುದನ್ನು ನಮ್ಮ ಸಮಾಜ ಅರಿತುಕೊಳ್ಳುವಲ್ಲಿ ಎಡವುತ್ತಿದೆ. ಆದರೆ ನಮ್ಮ ಮೂಲ, ನಾವು ನಡೆದು ಬಂದ ಹಾದಿಯನ್ನು ಎಂದಿಗೂ, ಎಂದೆಂದಿಗೂ ಮರೆಯಬಾರದು. ಜ್ಞಾನಕ್ಕಿಂತ ಮಿಗಿಲಾದದೇನಿದೆ. ಜ್ಞಾನವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಗಳಿಸಬಹುದು. “ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ” ಎನ್ನುವ ಮಾತು ಸುಳ್ಳಲ್ಲ. ದುಡ್ಡು ಕಂತೆ ಕಂತೆ ಇದ್ದವರು ಇಂದು ದೊಡ್ಡವರಾಗಿರಬಹುದು ಆದರೆ ಸಮಯಕ್ಕೆ, ಸಂಧರ್ಭಕ್ಕೆ ತಕ್ಕಂತೆ ಅದನ್ನು ಹೇಗೆ ಬಳಸಬೇಕು ಎಂಬುದನ್ನು ಅರಿಯದಿದ್ದರೆ ಇದ್ದರೇನು, ಬಿಟ್ಟರೇನು? ದುಡ್ಡು ದೊಡ್ಡಪ್ಪ ಆಗಿದ್ದರು ಅದನ್ನು ಉಳಿಸಿಕೊಂಡು ಹೋಗಲು ಜ್ಞಾನವಿರಬೇಕು, ಅಂದರೆ ವಿದ್ಯೆ ಬೇಕು. ಜ್ಞಾನಕ್ಕಿಂತ ದೊಡ್ಡದೇನಿದೆ ಅದನ್ನು ನಾವು ಅರಿತುಕೊಳ್ಳಬೇಕಿದೆ.

ಹಣವನ್ನು ಗಳಿಸುವ ಭರದಲ್ಲಿ ಕುಟುಂಬ ತೊರೆದವರು ಇಂದು ಸಂಬಂಧಗಳನ್ನು ತೊರೆದಿದ್ದಾರೆ. ಅಣ್ಣ-ತಮ್ಮ, ಅಕ್ಕ-ತಂಗಿ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ ಹೀಗೆ ಅದೆಷ್ಟೋ ಸಂಬಂಧಗಳು ಹಣವೆಂಬ ಸುಳಿಯಲ್ಲಿ ಸಿಲುಕಿ ಸಂಬಂಧಗಳ ಸರಪಳಿಯನ್ನೇ ಕಳೆದುಕೊಂಡು ಬಿಟ್ಟಿವೆ. ಅಷ್ಟು ಮಾತ್ರವಲ್ಲ ಯಾರಾದರೂ ಎದುರಿಗೆ ಸಿಕ್ಕರೆ ಮಾತಿಗಾದರೂ ಹೇಗಿದ್ದೀರಾ? ಇಂದು ಕೇಳುವಷ್ಟು ಸಹ ಸಹನೆಯನ್ನು ಹಣ ಕಸಿದುಕೊಂಡು ಬಿಟ್ಟಿದೆ. ಬಹುತೇಕರನ್ನು ಹೇಗಿದೆ ಜೀವನ ಅಂತ ಕೇಳಿದಾಗ ಅಯ್ಯೋ ಏನ್ ಕೇಳ್ತಿಯ ಬಿಡು ಈಗಿನ ಕಾಲದಲ್ಲಿ ಇದ್ದವರಿಗೆ ಇದ್ದ ಬೆಲೆ ಇಲ್ಲದವರಿಗೆ ಇಲ್ಲ. ನಮ್ಮತ್ರ ಏನಾದರೂ ಇದೆಯಾ ಅಂತ ನೋಡಿ ನಮ್ಮನ್ನ ಜನ ಈ ಕಡೆ ಬಾ ಅಂತ ಕರೀತಾರೆ ಇಲ್ಲದೆ ಹೋದರೆ ಕಾಸಿನಷ್ಟು ಬೆಲೆ ಕೊಡುವುದಿಲ್ಲ. ಎನ್ನುತ್ತಾರೆ. ಒಳ್ಳೆಯಗುಣ ಸಂಸ್ಕಾರ ಕಟ್ಟಿಕೊಂಡು ಯಾರಿಗೆ ಏನು ಆಗಬೇಕಿದೆ. ಎಲ್ಲರೂ ಲಾಭ ನೋಡ್ತಾರೆ ಅಷ್ಟೇ. ಎನ್ನುವ ಮಾತನ್ನ ಸಾಮಾನ್ಯವಾಗಿ ಕೇಳಿದ್ದೇನೆ. ಈ ಮಾತನ್ನು ಕೇಳಿದಾಗ ಹೌದಲ್ವಾ! “ಕಾಂಚಾಣೇನ ಕಾರ್ಯ ಸಿದ್ಧಿ” ಅಂದರೆ ದುಡ್ಡು ಇದ್ದರೆ ಮಾತ್ರ ಎಲ್ಲ ಕಾರ್ಯಗಳು ಫಲಿಸುತ್ತವೆ ಇಲ್ಲದೆ ಹೋದರೆ ಏನೂ ಆಗುವುದಿಲ್ಲ ಎಂಬುದು ದಿಟವೆನಿಸುತ್ತದೆ. ಇರಲಿ ನಮ್ಮನ್ನ ಯಾರು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದನ್ನು ಗಮನಹರಿಸದೆ, ಮುಂದೆ ನಮ್ಮನ್ನು ಯಾರು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಲು ಗೆಲ್ಲಲು ಛಲವೆಂಬ ಗುರಾಣಿಯನ್ನ ಸಾಣೆ ಹಿಡಿದು ಕಷ್ಟಪಟ್ಟು ಒಳ್ಳೆಯ ದಾರಿಯಲ್ಲಿ ಸಾಗಬೇಕು. ಎಷ್ಟು ಮಾಡಿದ್ರು ಇಷ್ಟೇ, ಎಂದು ಎಂದಿಗೂ ಕೈ ಚೆಲ್ಲಿ ಕೂರಬೇಡಿ, ಕೊರಗಬೇಡಿ, ನಮ್ಮ ಪ್ರಯತ್ನ ಎಷ್ಟಿರುತ್ತೋ ಅಷ್ಟೇ ನಮ್ಮ ಪಾಲಿಗೆ ಫಲಿತವಾಗಿರುತ್ತದೆ. ನಮ್ಮನ್ನು ಮೀರಿದ ಪ್ರಯತ್ನ ನಮ್ಮೊಳಗಿಂದ ಬಂದರೆ ನಿಜವಾಗಿಯೂ ನಾವು ಬದುಕಿನಲ್ಲಿ ಬೆಳೆದು ಸೆಟೆದು ಬಲವಾಗಿ ನಿಲ್ಲುತ್ತೇವೆ. ಒಂದು ಗುಂಪೊಂದರಲ್ಲಿ ನಿಂತ ನಮ್ಮನ್ನು ಯಾರೋ ಬಿಡು ಎಂದು ಸುಮ್ಮನಾಗುವರ ಮಧ್ಯೆ, ಅರೆ ಅಲ್ಲಿ ಯಾಕೆ ನಿಂತಿದ್ದೀರಿ ಈ ಕಡೆ ಬನ್ನಿ ಎಂದು ಕರೆಯುವಷ್ಟರ ಮಟ್ಟಿಗೆ ನಾವು ಜ್ಞಾನದಿಂದಲೂ ಮತ್ತು ಪ್ರಾಮಾಣಿಕ ಪ್ರಯತ್ನದಿಂದಲೂ ಗಳಿಸಿ ಹಣವಂತರಾಗಬೇಕು. ಇದ್ದಾಗಲೂ ಇಲ್ಲದಿದ್ದಾಗಲೂ ಹೇಗಿದ್ದೆವು ಹಾಗೆಯೇ ಭಗವಂತ ಕೊಟ್ಟಾಗಲು ಒಂದೇ ತೆರನಾಗಿರುವುದನ್ನು ರೂಡಿಸಿಕೊಳ್ಳಬೇಕು. ಬದುಕಿನಲ್ಲಿ ಏನಿಲ್ಲ, ಏನೇನಿಲ್ಲ, ಏನೇನಿಲ್ಲ ಇನ್ನುವುದರಲ್ಲಿ ಏನಿಲ್ಲ ಎಲ್ಲವೂ ಇದೆ ಇದ್ದದ್ದನ್ನು ನಾವು ಕಂಡುಕೊಳ್ಳಬೇಕಷ್ಟೇ ಎನ್ನುವ ಅರ್ಥವನ್ನು ನಾವು ನೋಡಬೇಕು. ಅನಿವಾರ್ಯವಾಗಿ ನಮಗೆ ಜೀವಿಸಲು ಹಣ ಬೇಕೇ ಬೇಕು! ಆದರೆ ಹಣ ಎಲ್ಲವೂ ಅಲ್ಲ ಅದು ಇಲ್ಲದೆ ಏನೂ ಇಲ್ಲ, ಏನೇನಿಲ್ಲ, ಎಲ್ಲವೂ ಇದೆ. ನಮ್ಮವರೆನಿಸಿಕೊಂಡವರು ನಾವು ಎನಿಸಿಕೊಂಡವರು ನಮ್ಮೊಳಗಿನ ನಮ್ಮನ್ನು ನಮ್ಮೆದುರುಗಿರುವ ನಮ್ಮವರನ್ನು ಅರ್ಥೈಸಿಕೊಂಡರೆ ಎಲ್ಲವೂ ಇದೆ. ಇದ್ದಾಗ ಮೆರೆಯದೆ ನಾನೇ ಎಂದು ಬೀಗದೆ ನಮ್ಮವರನ್ನು ನಮ್ಮೊಟ್ಟಿಗೆ ಕರೆದುಕೊಂಡು ಹೋದರೆ ಅವರು ಸಹ ನಮ್ಮಂತೆ ಬೆಳೆಯುತ್ತಾರೆ. ಬದುಕು ಇಷ್ಟೇ, ಭಗವಂತ ಕರೆದಾಗ ಎದ್ದು ಹೋಗಲೇಬೇಕು, ಹೋಗುವುದಕ್ಕೂ ಮುನ್ನ ನಮ್ಮ ಹೆಜ್ಜೆ ಗುರುತುಗಳನ್ನು ಬಲವಾಗಿ ಊರಬೇಕು ಎಂದರೆ, ಕನಿಷ್ಠಪಕ್ಷ ಸತ್ತಾಗ ನಮ್ಮನ್ನು ನಾಲ್ಕು ಜನ ಹೊರಲು ಮುಂದೆ ಬರಬೇಕು ಎನ್ನುವಷ್ಟನ್ನಾದರೂ ಗಳಿಸಬೇಕಿದೆ. ಬದುಕಿನಲ್ಲಿ ಎಲ್ಲವೂ ಇದೆ. ಬದುಕು ನಾವು ಅಂದುಕೊಂಡಿದ್ದಕ್ಕಿಂತಲೂ ಸುಂದರವಾಗಿದೆ, ಆದರೆ ಮತ್ತಷ್ಟು ಅದನ್ನು ಸುಂದರವನ್ನಾಗಿಸಿಕೊಳ್ಳಲು, ಸಗ್ಗವನ್ನು ಇದ್ದಲ್ಲಿಯೇ ಕಾಣಬೇಕು ಎಂದರೆ ಮೊದಲು ನಮ್ಮೊಳಗಿನ ನಾವು ನಮ್ಮಂತೆ ಇರಬೇಕು. ಇರುವುದನ್ನು ಉಳಿಸಿಕೊಳ್ಳುವುದರ ಜೊತೆಗೆ ಬೆಳೆಸಿಕೊಂಡು ಹೋಗಬೇಕಿದೆ. ಪ್ರಾಮಾಣಿಕ ಪ್ರಯತ್ನದಿಂದ ಎಲ್ಲವನ್ನು ತೆಕ್ಕೆಗೆ ತೆಗೆದುಕೊಂಡು ಅಪ್ಪಿಕೊಳ್ಳಬೇಕಿದೆ. ಹಣ ಎಲ್ಲವೂ ಅಲ್ಲ ಆದರೆ ಹಣವಿಲ್ಲದೆ ಏನೇನು ಇಲ್ಲ. ಮಾಡುವ ಕಾಯಕದಲ್ಲಿ ನಿಷ್ಠೆ, ಪ್ರೀತಿ ಪ್ರಾಮಾಣಿಕ ಪ್ರಯತ್ನ ಇರಲಿ, ಹಣವು ನಿಮ್ಮನ್ನು ಹರಸಿ ಬರಲಿ. ಅದು ನಿಮ್ಮವರನ್ನು ಬೆಳೆಸುವಂತಿರಲಿ.

ಡಾ ಮೇಘನ ಜಿ
ಉಪನ್ಯಾಸಕರು

- Advertisement -
- Advertisement -

Latest News

ಮೂಡಲಗಿಯಲ್ಲಿ ಶಾಸಕರ ನೇತೃತ್ವದಲ್ಲಿ ತಿರಂಗಾ ಯಾತ್ರೆ

ಮೂಡಲಗಿ:- ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಹಿನ್ನೆಲೆ ಮೇ,೨೦ ರಂದು ಮಂಗಳವಾರ,ಸಂಜೆ ೪ ಗಂಟೆಗೆ ಮೂಡಲಗಿ ಪಟ್ಟಣದಲ್ಲಿ  ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ತಿರಂಗಾ ಯಾತ್ರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group