ಮೂಡಲಗಿ: ವಿದ್ಯಾರ್ಥಿಗಳಿಗೆ ತೋಟಗಾರಿಕೆಯಲ್ಲಿ ವಿಫುಲ ಅವಕಾಶಗಳಿದ್ದು ಅವುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿ ಜೀವನ ಗೊಲ್ಡನ್ ಲೈಫ್ ಸಮಯದಲ್ಲಿ ಸಾಧನೆ ಹಾಗೂ ಸಾಮರ್ಥ್ಯದ ಕಡೆ ಗಮನ ಹರಿಸಿದರೆ ಗುರಿ ಮುಟ್ಟಲು ಸಾಧ್ಯ ಎಂದು ಬೆಳಗಾವಿ ಲೋಕಾಯುಕ್ತ ವರಿಷ್ಠಾಧಿಕಾರಿ ಬೆಳಗಾವಿ ಹನುಮಂತರಾಯ ಅವರು ಹೇಳಿದರು.
ಅವರು ತಾಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಹಾಗೂ ವಿದ್ಯಾರ್ಥಿ ನಿಲಯಗಳ 2022-23 ರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು
ತಾವು ವಿದ್ಯಾರ್ಥಿಯಾಗಿದ್ದಾಗ ತಮ್ಮ ಓದು, ಎನ್.ಸಿ.ಸಿ.ಯ ಬಗ್ಗೆ ಮತ್ತು ಉದ್ಯೋಗದಲ್ಲಿ ಎನ್.ಸಿ.ಸಿ. ಉಪಯೋಗವನ್ನು ತಿಳಿಸಿದರು.
ಗೋಕಾಕದ ವಿಶ್ರಾಂತ ಪ್ರಾಚಾರ್ಯ ಡಾ. ಸಿ.ಕೆ.ನಾವಲಗಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದ ಅವರು ಕಲೆ, ಸಾಹಿತ್ಯ, ಭಾರತೀಯ ಸಂಸ್ಕೃತಿ, ಬುದ್ಧ, ಬಸವಣ್ಣರವರ ಕಾಯಕದ ಬಗ್ಗೆ ವಿವರಿಸಿದರು.
ಬಾಗಲಕೋಟಿ ತೋಟಗಾರಿಕೆ ವಿಜ್ಞಾನಗಳ ವಿವಿಯ ಶಿಕ್ಷಣ ನಿರ್ದೇಶಕ ಡಾ. ಎನ್. ಕೆ. ಹೆಗಡೆ ಮತ್ತು ಕುಲಸಚಿವರು, ಡಾ. ಟಿ. ಬಿ. ಅಳ್ಳೊಳ್ಳಿ ಮಾತನಾಡಿ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಕೌಶಲ್ಯ ವೃದ್ಧಿಸುವ ಹಲವು ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ನಿಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸತತ ಪ್ರಯತ್ನ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಮುಂದುವರೆದದ್ದೆ ಆದಲ್ಲಿ ನಿಮ್ಮ ಜೀವನ ಸುಖಮಯವಾಗುವುದೆಂದು ಹೇಳಿದರು.
ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ರಾಮಚಂದ್ರ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಾಧನೆಯನ್ನು ಮಾಡಬೇಕು ಎಂದ ಅವರು ಈ ವರ್ಷದಿಂದ ಪಾಠದ ಜೊತೆಗೆ ಕ್ರೀಡೆಗೂ ಅತ್ಯುತಮ ಕ್ರೀಡಾಪಟು ವಿದ್ಯಾರ್ಥಿಗೆ ಬಂಗಾರದ ಪದಕವನ್ನು ನೀಡಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್ ಡಾ. ಎಮ್.ಜಿ. ಕೆರುಟಗಿ ಅವರು ಕ್ರೀಡೆ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಭಾಗವಹಿಸಿದ ಮತ್ತು ವಿಜೇತರಾದ ವಿದ್ಯಾರ್ಥಿಗಳನ್ನ ಅಭಿನಂದಿಸುತ್ತ. ಮಹಾವಿದ್ಯಾಲಯಕ್ಕೆ ಪ್ರಶಸ್ತಿಗಳನ್ನು ತರಲು ಸಹಾಯ ಮಾಡಿದ ಕ್ರಿಯಾತ್ಮಕ ಅಧ್ಯಾಪಕರ ಪ್ರಾಮಾಣಿಕ ಪ್ರಯತ್ನವನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಲೋಕಾಯುಕ್ತ ಎಸ್.ಪಿ ಹನುಮಂತರಾಯ ಅವರು ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಸ್ಮರಣ ಸಂಚಿಕೆ “ಅಭ್ಯುದಯ”ವನ್ನು ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಏರ್ಪಡಿಸಿದ್ದ ಚಟುವಟಿಕೆಗಳಲ್ಲಿನ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಸತಿನಿಲಯದ ನಿಲಯಪಾಲಕ ಮತ್ತು ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಎಸ್. ಜಿ. ಪ್ರವೀಣಕುಮಾರ, ವಿದ್ಯಾರ್ಥಿನಿಯರ ವಸತಿನಿಲಯದ ನಿಲಯಪಾಲಕಿ ಡಾ. ರೇಣುಕಾ ಹಿರೆಕುರಬರ, ಸಿಬ್ಬಂದಿ ಸಲಹೆಗಾರರಾದ ಡಾ. ಕಾಂತರಾಜು ವಿ. ಡಿಪ್ಲೋಮಾ ಸಂಯೋಜನಾಧಿಕಾರಿ ಡಾ. ವಿ.ಡಿ.ಗಸ್ತಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರೇಷ್ಮಾ ಕೆ, ವಿಠ್ಠಲ ಗುಗರನಟ್ಟಿ, ಜಂಟಿ ಸಯ್ಯದ ನದಾಫ, ಜ್ಯೋತಿ ಬ. ಬೆಳವಣಿಕಿ, ವಸತಿನಿಲಯಗಳ ಪದಾಧಿಕಾರಿಗಳಾದ ಆನಂದ ಬುರುಡ, ಚನ್ನಬಸವರಾಜ ಜುಗತಿ, ಸೋನಿಕಾ ಎ.ಎಸ್., ರೇಣುಕಾ, ಈಶ್ವರ ಹೊಳೆಪ್ಪನವರ, ಚಿದಾನಂದ ವನ್ನೂರಿ, ಲಕ್ಷ್ಮಿ ಕೆಸರಗೊಪ್ಪ, ಅನುಷ್ಕಾ ಸಿ.ಎ ಮತ್ತಿತರರು ಉಪಸ್ಥಿತರಿದ್ದರು.