ಮೂಡಲಗಿ – ಪಟ್ಟಣದಲ್ಲಿ ಕೊರೋನಾ ಹಾವಳಿ ಈಗ ಸ್ವಲ್ಪ ತಗ್ಗಿದೆಯೆಂದುಕೊಳ್ಳುವಷ್ಟರಲ್ಲಿ ಮಾರುಕಟ್ಟೆಗೆ ಮುಗಿಬಿದ್ದ ಜನತೆಯಿಂದಾಗಿ ಮತ್ತೆ ವಕ್ಕರಿಸುವ ಆತಂಕ ತಲೆದೋರಿದೆ.
ಶನಿವಾರ ಹಾಗೂ ರವಿವಾರದ ಕಟ್ಟುನಿಟ್ಟಿನ ಲಾಕ್ ಡೌನ್ ನಂತರ ಇಂದು ಬೆಳಿಗ್ಗೆ ಏಕಾಏಕಿ ಮಾರುಕಟ್ಟೆಗೆ ದಾಂಗುಡಿಯಿಟ್ಟ ಜನರನ್ನು ಚದುರಿಸಲು ಪೊಲೀಸರು ಲಾಠಿ ಹಿಡಿದು ತಿರುಗಾಡಬೇಕಾಯಿತು.
ಕಾಯಿಪಲ್ಯ ಮಾರುಕಟ್ಟೆಯಲ್ಲಿ ಗೃಹಸ್ಥರು, ಹಳ್ಳದ ಪೂಲ್ ಸುತ್ತಮುತ್ತ ರೈತರು ತಂತಮ್ಮ ವಸ್ತುಗಳನ್ನು ಕೊಳ್ಳಲು ಅಂಗಡಿಗಳ ಎದುರು ಸಾಲುಗಟ್ಟಿ ನಿಂತಿದ್ದರು. ಕಲ್ಮೇಶ್ವರ ಸರ್ಕಲ್ ಅಲ್ಲದೆ ಗೋಕಾಕ ರಸ್ತೆಯಲ್ಲಿ ಕೂಡ ಜನಜಂಗುಳಿ ಹೆಚ್ಚಾಗಿತ್ತು.
ಜನರನ್ನು ಚದುರಿಸಲು ಪಿಎಸ್ಐ ಬಾಲದಂಡಿಯವರು ಖುದ್ದು ಫೀಲ್ಡಿಗೆ ಇಳಿಯಬೇಕಾಯಿತು.
ಸದ್ಯ ಮೂಡಲಗಿಯಲ್ಲಿ ಕೊರೋನಾ ಕೇಸುಗಳು ಕಡಿಮೆಯಾಗಿದ್ದು ಜನತೆ ನಿರಾಳವಾಗಿ ಉಸಿರಾಡುವಂತಾಗಿದೆ ಆದರೆ ಅದೇ ಜನತೆಯ ನಿರ್ಲಕ್ಷ್ಯ ದಿಂದಾಗಿ ಅದು ಮತ್ತೆ ದಾಳಿಯಿಟ್ಟರೆ ಅದರ ಹೊಣೆಗಾರಿಕೆಯನ್ನು ಜನರೇ ಹೊರಬೇಕಾಗುತ್ತದೆ. ಇಂದಿನ ಜಗುಳಿಯಲ್ಲಿ ಮಾಸ್ಕ್, ಸಾಮಾಜಿಕ ಅಂತರ ಸಂಪೂರ್ಣವಾಗಿ ಕಾಣೆಯಾಗಿದ್ದವು ಎಂದೇ ಹೇಳಬೇಕು.
ಹೀಗಾದಾಗ ಸರ್ಕಾರವಾಗಲಿ, ಪೊಲೀಸರಾಗಲಿ, ಆರೋಗ್ಯ ಕಾರ್ಯಕರ್ತರಾಗಲಿ ನಿಸ್ಸಹಾಯಕರಾಗಬೇಕಾಗುತ್ತದೆ. ಜನತೆ ಎಚ್ಚತ್ತುಕೊಳ್ಳಬೇಕಾಗಿದೆ. ಯಾಕೆಂದರೆ ತಮ್ಮ ಜೀವ ತಮ್ಮ ಕೈಯಲ್ಲೇ ಇರುವುದು ಸುಳ್ಳಲ್ಲ.