ಸಿಂದಗಿ: ಕೆಲ ಸದಸ್ಯರು ಅವಿಶ್ವಾಸ ಸಾಮಾನ್ಯ ಸಭೆ ಕರೆಯುವಂತೆ ಮನವಿ ಸಲ್ಲಿಸಿದ್ದು ಅದು ಕರ್ನಾಟಕ ಮುನ್ಸಿಪಲ್ ಕಾಯ್ದೆ 42(9) ಅಧಿನಿಯಮದಡಿ 1 ವರ್ಷದ ಒಳಗೆ ಅವಿಶ್ವಾಸ ಸಭೆ ನಡೆಸಲು ಬರುವುದಿಲ್ಲ ಎಂದು ಹೇಳುತ್ತದೆ ಅವರು ಸಲ್ಲಿಸಿದ ಮನವಿ ಅದು ಕಾನೂನು ಬಾಹಿರವಾಗಿದೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಟ್ಟಣದ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಎಂದು ಆರೋಪಿಸಿದ್ದು ಅದು ಸತ್ಯಕ್ಕೆ ದೂರವಾಗಿದೆ. ಪಟ್ಟಣದ ಅಭಿವೃದ್ದಿಗೆ ಮುಖ್ಯಮಂತ್ರಿ ಅಮೃತ ನಗರೋತ್ಥಾನ ವಿಶೇಷ ಯೋಜನೆಯಡಿ ರೂ. 3 ಕೋಟಿ, ಹಾಗೂ ರೂ 8 ಕೋಟಿ 50 ಲಕ್ಷಗಳಲ್ಲಿ ಎಲ್ಲ ವಾರ್ಡುಗಳ ಕಾಮಗಾರಿಗೆ ತಲಾ ರೂ 10 ಲಕ್ಷ ಹಂಚಿಕೆ ಮಾಡಲಾಗಿದ್ದು ಅಲ್ಲದೆ ಹಂದಿಗನೂರ ಸಿದ್ರಾಮಪ್ಪ ರಂಗಮಂದಿರ ನಿರ್ಮಾಣಕ್ಕೆ ರೂ 55 ಲಕ್ಷ, ಶಿಕ್ಷಕರ ಭವನ ನಿರ್ಮಾಣಕ್ಕೆ ರೂ 50ಲಕ್ಷ, ಹಾಗೂ ಈಜುಗೊಳ ನಿರ್ಮಾಣಕ್ಕೆ ರೂ 25 ಲಕ್ಷ ಅನುದಾನಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 2018ರಲ್ಲಿ ಹಳೇ ಬಜಾರ, ಊರಿನ ಹಿರಿಯ ಮಠದ ಮುಂಭಾಗದ ರಸ್ತೆ ನಿರ್ಮಾಣಕ್ಕೆ ಬಂದ ರೂ 3.75 ಕೋಟಿ ಅನುದಾನ ಸರಕಾರಕ್ಕೆ ವಾಪಸ್ಸಾಗಿದ್ದು ಅದನ್ನು ಮರಳಿ ನೀಡುವಂತೆ ಶಾಸಕರ ಸಲಹೆ ಪಡೆದುಕೊಳ್ಳಲಾಗುವುದು ಮತ್ತು ಪಟ್ಟಣದ ವರದ ಲೇಔಟ್ ನ ಆಸ್ತಿ ಪರಭಾರೆಯಲ್ಲಿ ಅವ್ಯವಹಾರದ ಹಿನ್ನೆಲೆಯಲ್ಲಿ 4 ಸಿಬ್ಬಂದಿ ವಜಾಗೊಂಡಿದ್ದು ಆ ಹಿನ್ನೆಲೆಯಲ್ಲಿ ಪುರಕೆಲಸಗಳಲಿ ಕೆಲಸಗಳು ಕುಂಠಿತವಾಗಿದ್ದು ಅದಕ್ಕೆ ಟ್ಯಾಕ್ಸ್ ವಸೂಲಾತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಕೊಟಕ್ ಬ್ಯಾಂಕ್ನ ಬ್ರ್ಯಾಂಚ್ ತೆರೆದು ಟ್ಯಾಕ್ಸ್ ವಸೂಲಿ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಟ್ಯಾಕ್ಸ್ ವಸೂಲಾತಿಯಾಗುತ್ತಿದೆ. ಅಲ್ಲದೆ ಸಿಬ್ಬಂದಿ ಕೊರತೆಯಿಂದ ಆಡಳಿತ ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಹುದ್ದೆ ಭರ್ತಿ ಮಾಡಲು ಜಿಲ್ಲಾ ಯೋಜನಾ ನಿರ್ದೇಶಕರಿಗೆ ಪತ್ರ ರವಾನಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಸದಸ್ಯ ಶ್ರೀಶೈಲ ಬೀರಗೊಂಡ, ಸದಸ್ಯರ ಪ್ರತಿನಿಧಿಗಳಾದ ಬಸು ಸಜ್ಜನ್, ಸೈಪನ್ ನಾಟೀಕಾರ, ಆನಂದ ಡೋಣೂರ ಇದ್ದರು.