ಮೂಡಲಗಿ – ನಿರ್ಮಾಣವಾದ ಎರಡು ತಿಂಗಳಲ್ಲಿಯೇ ಡಾಂಬರ್ ಕಿತ್ತು ಹೋಗುತ್ತಿರುವ ತಾಲೂಕಿನ ಮುಸಗುಪ್ಪಿ – ಮೂಡಲಗಿ ರಸ್ತೆಯ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಈ ರಸ್ತೆಯ ಕಾಮಗಾರಿ ಬಿಲ್ಲ ತಡೆಹಿಡಿದು ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಗುಜನಟ್ಟಿಯ ಸಾಮಾಜಿಕ ಕಾರ್ಯಕರ್ತ ಗುರುನಾಥ ಗಂಗಣ್ಣವರ ಅವರು ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದು ಮೂಡಲಗಿ ತಾಲೂಕಿನ ಮುಸಗುಪ್ಪಿ – ಮೂಡಲಗಿ ಮುಖ್ಯ ರಸ್ತೆಯು ಬಹಳ ವರ್ಷಗಳ ನಂತರ ರಿಪೇರಿಯಾಗುತ್ತಿದ್ದರೂ ಕಾಮಗಾರಿ ಕಳಪೆಯಾಗಿದೆ. ಕೇವಲ ಎರಡು ತಿಂಗಳಲ್ಲಿಯೇ ಡಾಂಬರ್ ಕಿತ್ತು ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುಮಾರು ೯ ಕಿ.ಮೀ. ರಸ್ತೆಯ ಕಾಮಗಾರಿಯ ಅಂದಾಜು ವೆಚ್ಚ ೮೮೭-೦೦ ಲಕ್ಷ ರೂ. ಗಳು. ಇದನ್ನು ಗುತ್ತಿಗೆ ಹಿಡಿದಿರುವ ಘಟಪ್ರಭಾದ ಜಯಶೀಲ ಶೆಟ್ಟಿ ಎಂಬ ಗುತ್ತಿಗೆದಾರ ರಸ್ತೆ ಕಾಮಗಾರಿಯನ್ನು ಅತ್ಯಂತ ಕಳಪೆಯಾಗಿ ನಿರ್ಮಿಸಿದ್ದು ಇದರ ಬಗ್ಗೆ ತನಿಖೆಯಾಗಬೇಕು ಅಲ್ಲಿಯವರೆಗೆ ಸದರಿ ಗುತ್ತಿಗೆದಾರನ ಬಿಲ್ ಗಳನ್ನು ತಡೆಹಿಡಿಯಬೇಕು ಎಂದು ಗಂಗಣ್ಣವರ ಜಿಲ್ಲಾಧಿಕಾರಿಗಳನ್ನು ವಿನಂತಿಸಿಕೊಂಡು ಬರೆದಿರುವ ಪತ್ರವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ.