ರಬಕವಿಯ ಶ್ರೀ ಮಡಿವಾಳಪ್ಪ ವೀರಪ್ಪ ಪಟ್ಟಣ ಶಾಲೆಯು ಬಹಳ ಹಳೆಯದು. 1944 ರಲ್ಲಿ ಈ ಶಾಲೆಯ ಮೈದಾನದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.
ಇದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆಗಿತ್ತು. ಇದನ್ನು ರಬಕವಿ ಎಜ್ಯುಕೇಶನ್ ಸೊಸೈಟಿ ಅವರು ನಡೆಸುತ್ತಿದ್ದಾರೆ. 1970 ರಲ್ಲಿ ಇಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭವಾಯಿತು.
ನಾನು ಇಲ್ಲಿ ಇಂದು ಈ ಶಾಲೆಯ ಬಗ್ಗೆ ಒಂದಿಷ್ಟು ನಿಮ್ಮೊಂದಿಗೆ ಚರ್ಚಿಸಬೇಕೆಂದು ಮಾಡಿರುವೆ.
ಈ ಶಾಲೆಯ ಆಡಳಿತವನ್ನು ಬೇರೆ ಯಾವುದಾದರೂ ಶಿಕ್ಷಣ ಸಂಸ್ಥೆಗಳಲ್ಲಿ ವಿಲೀನ ಮಾಡಬೇಕೆಂದು ಯಾವಾಗ ಗುಮಾನಿ ಶುರುವಾಗುತ್ತದೆಯೋ ಆವಾಗ ಮಾತ್ರ ರಬಕವಿ ನಗರದ ಪ್ರಮುಖರು , ಯುವಕರು ಕೂಡುತ್ತಾರೆ. ಅಲ್ಲಿ ಕೂಡಿದ ಎಲ್ಲರೂ ಬೇರೆ ಯಾವುದೇ ಸಂಘ ಸಂಸ್ಥೆಗಳ ಕಡೆಗೆ ರಬಕವಿ ಎಜ್ಯುಕೇಶನ್ ಸೊಸೈಟಿಯನ್ನು ಪರಭಾರೆ ಮಾಡಬಾರದೆಂದೂ , ನಿಮಗೆ ಅಂತಹ ಏನು ತೊಂದರೆ ಬಂದಿದೆ ನಮಗೆ ಹೇಳಿ , ನಾವು ಊರಿನವರು ಇದ್ದೇವೆ ಎಂದು ಆ ಒಂದು ದಿನದ ಮಟ್ಟಿಗೆ ರೌದ್ರಾವವೇಷದಿಂದ ಎಲ್ಲರೂ ಆರ್ಭಟಿಸುತ್ತಾರೆ. ಅಲ್ಲಿಂದ ಜಾಗ ಖಾಲಿ ಮಾಡಿದ ಮೇಲೆ ವಾಗ್ದಾನ ಮಾಡಿದವರು ಮರೆತು ಬಿಡುತ್ತಾರೆ. ಯಾರದಾದರೂ ಅಂತ್ಯ ಸಂಸ್ಕಾರಕ್ಕೆ ಹೋದಾಗ , ಸ್ಮಶಾನದಲ್ಲಿ ಅಂತ್ಯವಿಧಿ ಮುಗಿಯುವವರೆಗೂ , ಅಲ್ಲಿ ಅಂತಿಮ ಸಂಸ್ಕಾರಕ್ಕೆಂದು ಕೂಡಿದ ಜನರು , ಸ್ಮಶಾನದಲ್ಲಿರುವ ಅವ್ಯವಸ್ಥೆ ಬಗ್ಗೆ , ಅಸ್ವಸ್ಥತೆಯ ಬಗ್ಗೆ , ಗಿಡ – ಮರಗಳನ್ನು ಬೆಳೆಸುವ ಬಗ್ಗೆ, ಕೂಡ್ರಲು ಬೆಂಚ್ ಅಳವಡಿಸುವ ಬಗ್ಗೆ ಹೀಗೆ ನಾನಾ ರೀತಿಯ ಸುಧಾರಣೆ ಕುರಿತು ಆವೇಶದಿಂದ ಚರ್ಚಿಸುತ್ತಾರೆ. ಆದರೆ ಅಲ್ಲಿಂದ ಮನೆಗೆ ಬಂದು ಜಳಕ ಮಾಡಿ , ಮಡಿ ಬಟ್ಟೆ ಧರಿಸಿದರೆಂದರೆ ಮುಗಿಯಿತು. ಸ್ಮಶಾನದ ಬಗ್ಗೆ ಮತ್ತೆ ಬೇರೊಂದು ಅಂತ್ಯಸಂಸ್ಕಾರಕ್ಕೆ ಹೋದಾಗಲೇ ಅವರಿಗೆ ಹಳೆಯದು ನೆನಪಾಗುವುದು. ಆ ರೀತಿಯಲ್ಲಿ ಶ್ರೀ ಎಮ್. ವ್ಹಿ. ಪಟ್ಟಣ ಶಾಲೆಯ ಆಡಳಿತದ ಬಗ್ಗೆ ಮಾತನಾಡುವ ಬಗ್ಗೆ ನೆನಪಾಗುತ್ತದೆ.
ಹಾಗೆ ನೋಡಿದರೆ ಈ ಶಾಲೆ ಬಹಳ ಹಳೆಯದು. ಒಂದಾನೊಂದು ಕಾಲದಲ್ಲಿ ಹಾರೂಗೇರಿ , ಹಿಡಕಲ್ ನಂಥ ದೂರದ ಊರುಗಳಿಂದ ವಿದ್ಯಾರ್ಥಿಗಳು ಇಲ್ಲಿಯ ಶಾಲೆಗೆ ಶಿಕ್ಷಣಕ್ಕಾಗಿ ಬರುತ್ತಿದ್ದರು.
ಅನುದಾನ ನೀಡಲು ಸರಕಾರ ಒಂಟಿ ಕಾಲಿನಲ್ಲಿ ನಿಂತಾಗಲೂ ಕೂಡ ಈ ಶಾಲೆಯ ಆಡಳಿತ ಮಂಡಳಿ ಹೊಸ ಶೈಕ್ಷಣಿಕ ಶಾಖೆಗಳನ್ನು ಪ್ರಾರಂಭಿಸಲು ಉತ್ಸಾಹ ತೋರಿಸಲಿಲ್ಲ. ಅದು ಇಲ್ಲಿನ ಜನರ ಮೇಲೆ ಎಸಗಿದ ಘೋರ ಅನ್ಯಾಯ ಎನ್ನಬಹುದು. ಆಗಲೇ ಮನಸ್ಸು ಮಾಡಿದ್ದರೆ , ಪದವಿ ಕಾಲೇಜು , ಐ.ಟಿ.ಐ. , ಡಿಪ್ಲೊಮಾ , ಬಿ.ಬಿ.ಎ. , ಎಮ್.ಬಿ.ಎ. ಹೀಗೆ ಅನೇಕ ಕೋರ್ಸುಗಳನ್ನು ಇಲ್ಲಿ ಸರ್ಕಾರದ ಅನುದಾನ ಪಡೆದು ಪ್ರಾರಂಭಿಸಬಹುದಾಗಿತ್ತು. ಆದರೆ ಎಲ್ಲದಕ್ಕೂ ಆಡಳಿತ ಮಂಡಳಿಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದ್ಯಾವುದೂ ಕೈಗೂಡಲಿಲ್ಲ.
ಇನ್ನೊಂದು ನೋವಿನ ಸಂಗತಿಯೆಂದರೆ , ಈ ಶಿಕ್ಷಣ ಸಂಸ್ಥೆಯ ಚೇರಮನ್ ಸಹಿತ ಬಹುತೇಕ ಡೈರೆಕ್ಟರರ ಮಕ್ಕಳು ಎಮ್. ವ್ಹಿ. ಪಟ್ಟಣ ಸ್ಕೂಲಿನಲ್ಲಿ ಶಿಕ್ಷಣ ಪಡೆಯದೆ , ರಬಕವಿ – ಬನಹಟ್ಟಿ ರಾಂಪೂರದ ಬೇರೆ ಶಾಲೆಯಲ್ಲಿ ಕಲಿತದ್ದು.
ಅಷ್ಟೇ ಅಲ್ಲದೆ ಸದರಿ ಸಂಸ್ಥೆಯ ಗರ್ಲ್ಸ್ ಸ್ಕೂಲಿನ ಶಿಕ್ಷಕರ ಮಕ್ಕಳು ಹಾಗೂ ಎಮ್. ವ್ಹಿ ಪಟ್ಟಣ ಪ್ರೌಢ ಶಾಲೆಯ ಶಿಕ್ಷಕರ ಮಕ್ಕಳು, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಮಕ್ಕಳು ಮತ್ತು ಅಲ್ಲಿಯ ಉಪನ್ಯಾಸಕರ ಮಕ್ಕಳು ಕೂಡ ಅವರು ಸೇವೆ ಸಲ್ಲಿಸುತ್ತಿದ್ದ ಶಾಲೆಯ ಬದಲಾಗಿ ಬೇರೆ ಶಾಲೆಗಳಲ್ಲಿ ಶಿಕ್ಷಣ ಪಡೆದದ್ದು.
ಸದರಿ ರಬಕವಿ ಎಜ್ಯುಕೇಶನ್ ಸೊಸೈಟಿಯ ಶಾಲೆಯ ಡೈರೆಕ್ಟರ್ ಮತ್ತು ಆ ಸಂಸ್ಥೆಯ ಶಾಲೆಯಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ಸ್ವಂತ ಮಕ್ಕಳೆ ಬೇರೆ ಶಾಲೆಯಲ್ಲಿ ಓದಲು ಹೋಗುವುದೆಂದರೆ ಇದರ ಅರ್ಥವೇನು ? ಹಾಗಾದರೆ ಬೇರೆಯವರು ಅದ್ಯಾವ ಪುರುಷಾರ್ಥಕ್ಕಾಗಿ ತಮ್ಮ ಮಕ್ಕಳನ್ನು ಇವರ ಶಾಲೆಗೆ ಕಳಿಸುತ್ತಾರೆ ?
ಹೀಗಾಗಿ ಈ ಶಾಲೆಯು ಉನ್ನತಿ ಹೊಂದುವುದು ಮರೀಚಿಕೆಯಾಗಿದೆ.
– ನೀಲಕಂಠ ದಾತಾರ.
( ರಬಕವಿಯ ಶಿಕ್ಷಣ ಪ್ರೇಮಿಗಳು ನನ್ನ ಈ ಅಭಿಪ್ರಾಯದ ಬಗ್ಗೆ ತಮ್ಮ ಅಮೂಲ್ಯ ಅನಿಸಿಕೆಗಳನ್ನು ತಿಳಿಸುವ ಕೃಪೆ ಮಾಡಬೇಕು )