ಬೀದರ– ನನ್ನ ಕಣ್ಣೀರನ್ನು ಪ್ರಧಾನಿ ನರೇಂದ್ರ ಮೋದಿ ನೊಡಲೇಬೇಕು ಎಂದು ಹಟ ಹಿಡಿದ ರೈತನೊಬ್ಬ ಭಾರೀ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ವಿಡಿಯೋ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.
ಗಡಿ ಜಿಲ್ಲೆಯ ಈ ರೈತ ತನ್ನ ಕಣ್ಣೀರ ಕತೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು ರೈತನ ಕಷ್ಟ ಏನು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ನೋಡಬೇಕು, ಬೇಗನೆ ರೈತರ ಕಷ್ಟ ಪರಿಹರಿಸಬೇಕು ಎಂದು ಅಲವತ್ತುಕೊಂಡಿದ್ದಾನೆ.
ಈ ಕತೆ ಕೇಳಿ:
ಜಿಲ್ಲೆಯಲ್ಲಿ ಭಾರೀ ಮಳೆಯಾದ ಕಾರಣ ಭಾಲ್ಕಿ ಕ್ಷೇತ್ರದಲ್ಲಿ ಪ್ರವಾಹ ಉಂಟಾಗಿದ್ದು ಅಪಾರ ಪ್ರಮಾಣದಲ್ಲಿ ಹೊಲಗದ್ದೆಗಳು ಮುಳುಗಿವೆ. ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತವರೂರು ಎಂದರೆ ಭಾಲ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಈಶ್ವರ ಖಂಡ್ರೆ ನಿನ್ನೆ ಭಾಲ್ಕಿಯ ಬೆಳೆ ಹಾನಿ ಉಂಟಾದ ಪ್ರದೇಶಕ್ಕೆ ಭೇಟಿ ನೀಡಿದರು. ದುಃಖದ ಸಂಗತಿ ಎಂದರೆ ಈ ರೈತನ ಎಂಟು ಎಕರೆ ಪೂರ್ತಿ ನೀರಿನಲ್ಲಿ ಮುಳುಗಿ ಹೋಗಿದೆ ಆದರೆ ಈಶ್ವರ ಖಂಡ್ರೆ ಇಲ್ಲಿಗೆ ಭೇಟಿ ಕೂಡ ನೀಡಿಲ್ಲ ಎಂಬುದಕ್ಕೆ ಆಕ್ರೋಶ ವ್ಯಕ್ತಪಡಿಸಿ ತನ್ನ ಹೊಲದಲ್ಲಿ ನಿಂತು ತನ್ನ ಕಷ್ಟ ದೇಶದ ಪ್ರಧಾನಿ ನರೇಂದ್ರ ಮೋದಿ ನೋಡಬೇಕು ಎಂದು ಕಣ್ಣೀರು ಹಾಕಿದ್ದಾನೆ ಈ ರೈತ.
ಒಂದು ಕಡೆ ರೈತರು ಕೊರೊನಾ ಗೆ ಕಂಗೆಟ್ಟಿದ್ದು ರೈತರಿಗೆ ಈಗ ವರುಣಾಘಾತವಾಗಿದೆ. ಕಳೆದ ಎರಡು ವರ್ಷಗಳಿಂದ ಈಗಾಗಲೇ ರೈತರು ಕೊರೊನಾ ಹೊಡೆತಕ್ಕೆ ಸಿಲುಕಿ ಬೇಸತ್ತಿದ್ದಾರೆ ಇದರ ಮದ್ಯೆ ಮಳೆರಾಯನ ಆರ್ಭಟಕ್ಕೆ ರೈತರು ನಲುಗಿ ಹೋಗಿದ್ದಾರೆ. ಕಳೆದ ಹಲವು ದಿನಗಳಿಂದ ಗಡಿ ಭಾಗ ಬೀದರ್ ಜಿಲ್ಲೆಯಲ್ಲಿ ಗುಲಾಬಿ ಸೈಕ್ಲೋನ್ ಎಫೆಕ್ಟ್ ಉಂಟಾಗಿದೆ,ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಮಹಾರಾಷ್ಟ್ರ ದಲ್ಲಿ ಹಳ್ಳ ಕೊಳ್ಳಗಳು ತುಂಬಿದ್ದು ಗಡಿಭಾಗದ ಮಹಾರಾಷ್ಟ್ರದ ಧನೆಗಾಂವ್ ಜಲಾಶಯದಿಂದ 80 ಸಾವಿರ ಕ್ಯೂಸೆಕ್ಸ್ ಹೆಚ್ಚುವರಿ ನೀರು ಹೊರಬಿಟ್ಟಿದ್ದು ಗಡಿಭಾಗದ ಭಾಲ್ಕಿ ತಾಲೂಕಿನ ಲಖನ್ ಗಾಂವ್, ಸಾಯಗಾಂವ್ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ನೀರು ನುಗ್ಗಿದ್ದು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳೆಲ್ಲಾ ನೀರು ಪಾಲಾಗಿದೆ. ಭಾಲ್ಕಿ ತಾಲೂಕಿನ ಲಖನ್ ಗಾಂವ್ ಗ್ರಾಮದ ಉತ್ತಮ ಎಂಬುವವರ ಎಂಟು ಎಕರೆ ಜಮೀನು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದ್ದು ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ತೀರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ರೀತಿ ಅತಿವೃಷ್ಠಿ ಉಂಟಾಗುತ್ತಿದ್ದು ಮಹಾರಾಷ್ಟ್ರ ಧೆನೆಗಾವ್ ಜಲಾಶಯದಿಂದ ನೀರು ಬೀಡುವ ಮುನ್ನ ಯಾವುದೇ ಸೂಚನೆ ನೀಡುತ್ತಿಲ್ಲ, ಈಗಾಗಲೇ ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಗಡಿಭಾಗದ ರೈತರಿಗೆ ವರುಣ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ, ಎಲ್ಲೋ ಎಸಿ ಕೊಠಡಿಯಲ್ಲಿ ಕುಳಿತು ಅಧಿಕಾರಿಗಳು, ಜನಪ್ರತಿನಿಧಿಗಳು ಸುಮ್ಮನೆ ರೈತರಿಗೆ ಪರಿಹಾರ ಕೊಡುತ್ತೇವೆ ಎಂದು ಬೋಂಗು ಬಿಡುವ ಬದಲು ಒಮ್ಮೆ ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಅವರಿಗೆ ಸರ್ಕಾರದಿಂದ ಉತ್ತಮ ಪರಿಹಾರ ನೀಡುವಂತೆ ಆಗ್ರಹಿಸಿರುವ ರೈತ ಲಖನ್ ಗಾಂವ್ ಗ್ರಾಮದ ಉತ್ತಮ ಬಿರಾದರ್ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇದರ ಮನವರಿಕೆಯಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ