ನಾಡಿನ ಸಕಲ ಕವಿ-ಕವಯಿತ್ರಿಯರ ಹೃದಯ ಚಕ್ರವರ್ತಿ, ಸಾಹಿತ್ಯದ ಮಹಾ ದೀಪ್ತಿ, ಸರ್ವರ ಲೇಖನಿಗೂ ನಿತ್ಯದ ಸ್ಫೂರ್ತಿಯಾದ ಗಣಪತಿ “ನನ್ನ “ಮಾತು ಮೌನಗಳ ನಡುವೆ..” ಕೃತಿಯ ಕುರಿತಾಗಿ ಹೀಗೆ ಬರೆದಿದ್ದಾರೆ… ಓದಿ ನೋಡಿ.. ನನ್ನ ಪ್ರತಿ ಕೃತಿಯ ಯಶಸ್ಸು-ಕೀರ್ತಿ ಗಣಪತಿಯಂತಹ ಆತ್ಮೀಯರ ಸಂಪ್ರೀತಿಗೆ, ಅಡಿಗಡಿಗೂ ಶಕ್ತಿಯಾಗಿರುವ ನಿಮ್ಮ ಅಕ್ಷರಪ್ರೀತಿಗೆ ಅರ್ಪಣೆ..” – ಧನ್ಯತೆಯಿಂದ ಎ.ಎನ್.ರಮೇಶ್. ಗುಬ್ಬಿ.
ಇದೋ ಕೆಳಗಿದೆ ಗಣಪತಿಯವರ ಹೃದ್ಯ ಭಾವಾಭಿವ್ಯಕ್ತಿಯ ನುಡಿಗಳು…
ಒಳಯೆದೆಯ ಪರದೆಯ ಮೇಲೆ ಅಚ್ಚಾದ ಕವಿತೆಗಳು.
ಸೂಕ್ಷ್ಮ ಸಂವೇದನೆಯ ಕೊಂಡಿ ಮಾಡಿಕೊಂಡು, ಸೃಜನಾತ್ಮಕ ಕಾವ್ಯಾಂಶದ ಹನಿಗಳನ್ನು ಓದುಗರಿಗೆ ಹನಿಸುವ ಕವಿತೆಗಳ ಓದಿದಾಗ ಎದೆ ಪರದೆಯಲ್ಲಿ ಬಹುಕಾಲ ಉಳಿಯುವಂತೆ ಕಾಡುವ ಕವಿತೆಗಳ ಪುಸ್ತಕ ಪ್ರಸಿದ್ಧ ಕವಿ A N Ramesh Kaiga ಅವರ “ಮಾತು ಮೌನಗಳ ನಡುವೆ….” ಕವನ ಸಂಕಲನ.
“ಥಟ್ ಅಂತ ಹೇಳಿ” ಖ್ಯಾತಿಯ ಡಾ. ನಾ ಸೋಮೇಶ್ವರ ಅವರ ಮುನ್ನಡಿಯೊಂದಿಗೆ ಹಸಿಯಾದ ಜೀವ ತುಂಬುವ ಕವಿತೆಗಳೊಂದಿಷ್ಟು, ಭಾವಜೀವದ ನಡುವೆ ಕಾಡಿ ಹೊಯ್ದಾಡುವ ಕವಿತೆಗಳೊಂದಿಷ್ಟು, ವಾಸ್ತವಿಕ ಜಗತ್ತಿನ ಮೂಲಾಂಶವನ್ನು ಮನಕ್ಕೆ ಮುಟ್ಟಿ ತಟ್ಟೆಚ್ಚರಿಸುವ ಕವಿತೆಗಳೊಂದಿಷ್ಟು, ಪ್ರೇಮದೊಳಗಿನ ನೋವು ನಿರಾಶೆಗಳ ಹೊತ್ತ ಕವಿತೆಗಳೊಂದಿಷ್ಟು… ಎಲ್ಲವೂ ಎಲ್ಲೂ ಜೊಳ್ಳಾಗಿ ಪರಿಣಮಿಸುವುದಿಲ್ಲ.ಅದಕ್ಕಾಗಿಯೇ ರಮೇಶ್ ಅವರು ಮೊದಲೇ ಹೇಳಿಯಾಗಿದೆ.
“ಕವಿತೆಗಳಲ್ಲ ಶುಭ್ರಾಂತರ್ಯದ ಪಿಸುನುಡಿಗಳು ಇವು” ಎಂದು.
ಮಾತೊಳಗೆ ಅಡಗಿರುವ ಮೌನಗಳು, ಮೌನದೊಳಗಡಗಿರುವ ಮಾತುಗಳು ಕೆಲವೊಮ್ಮೆ ಸಮ್ಮಿಳಿತಗೊಂಡಾಗ ಕವಿತೆಯ ಅಂತರ್ಯೆದೆಯಲ್ಲಿ ಗಟ್ಟಿತನ ಕಂಡು ಬರುತ್ತದೆ.
ಪ್ರೀತಿಸುವ ಜೀವಕ್ಕೆ ಹಪಾಹಪಿಸುವ ಮಾತು, ಮೌನದ ಬಂಧಿತದಲ್ಲಿ ಬಂಧಿಯಾದರೂ ಅಲ್ಲೇ ಕೆಲವು ಕುಚೇಷ್ಟೆ ಮಾಡುವ ಭಾವಗಳನ್ನು ಇಲ್ಲಿನ ಕವಿತೆಗಳು ಹೊಂದಿವೆ. ಉದಾಹರಣೆಗೆ,
ಜೀವಮಾಧುರ್ಯ
ಈ ಕವಿತೆಯ ಮೊದಲ ಸಾಲುಗಳೇ ಹೀಗೆ ಹೇಳುತ್ತವೆ.
“ಅದೇಕೋ ಸೋತವರ ಸಂಕಟ ಕಂಬನಿಯೆದುರು
ನಮ್ಮ ಗೆಲುವಿನ ಉದ್ಗಾರ ಹಾಗೇ ನಿಶ್ಯಬ್ಧವಾಗಿಬಿಡುತ್ತದೆ”!
ಮೇಲಿನ ಸಾಲುಗಳು ನಿತ್ಯ ಜೀವನದ ಸತ್ವಯುಕ್ತ ಹಾಗೂ ಸತ್ಯದ ವಾಕ್ಯಗಳಾಗಿ ಪರಿಣಮಿಸುತ್ತವೆ.
ಇನ್ನೊಂದು ಉದಾಹರಣೆ,
ಚಿದಂಬರ ರಹಸ್ಯ
**
ಕವಿತೆಯ
ಮೂರನೆಯ ಚರಣದಲ್ಲಿ..
ಲೋಕವನೆ ಬೆಳಗುವ
ಪ್ರಣತೆಯ ಅಡಿಯಲ್ಲಿ ಅಣಕಿಸುವ ಕಾರ್ಗತ್ತಲೆ!
ಎಷ್ಟೇ ಮನುಷ್ಯ ಒಳ್ಳೆಯವನಾದರೂ ಅಥವಾ ಹೆಸರುವಾಸಿಯಾದರೂ ಅಣಕಿಸುವ ಈ ಸಮಾಜದ ಜನರಿಗಾಗಿ ಚಿಂತಿಸಬಾರದು ಎಂಬುದನ್ನು ಈ ಕವಿತೆಯ ಎದೆ ಹಾಳೆಯಲ್ಲಿ ರಮೇಶ್ ಅಚ್ಚಾಕಿಸುತ್ತಾರೆ.
ಹೀಗೆ ಬದುಕು ಹಾಗೂ ಅದರೊಳಗಿನ ಮರ್ಮಗಳನ್ನು ಬಹಳ ಒಳ್ಳೆಯ ಉಪಮೆ, ಉಪಮೇಯದೊಂದಿಗೆ ತಮ್ಮ ನಿರ್ಧಾರವನ್ನು ನಮೂದಿಸುತ್ತಾ ಹೋಗಿದ್ದಾರೆ.
ಇದು ರಮೇಶ್ ಅವರ ಹನ್ನೆರಡನೆಯ ಕೃತಿಯಾಗಿದೆ. ಇಂತಹ ಅದ್ಭುತ ಸಾಹಿತಿಯ ಪುಸ್ತಕವು ಕಳೆದ “08/05/2022” ರಂದು ಧಾರವಾಡದ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಮ್ಮದೇ ಸಾಹಿತ್ಯ ವೇದಿಕೆಯಾದ
“ನೆನಪಿನ ನಾವಿಕ ಸಾಹಿತ್ಯ ವೇದಿಕೆ”ಯಲ್ಲಿ ಲೋಕಾರ್ಪಣೆಗೊಂಡಿದ್ದು ನನ್ನ ಸೌಭಾಗ್ಯ ಎಂದು ಕೊಳ್ಳುತ್ತೇನೆ.
ನಿರಂತರ ಹರಿಯುವ ಜಲದಂತೆ ರಮೇಶ್ ಅವರ ಸಾಹಿತ್ಯ ಹರಿದು ಈ ಲೋಕದ ಕನ್ನಡಿಗನೆದೆಗೆ ಸ್ಪರ್ಶಿಸಲಿ, ಬಹುಕಾಲ ಈ ಕವಿಯೊಂದಿಗೆ ಅವರ ಸಾಹಿತ್ಯವೂ ಜೊತೆಯಾಗಿರಲಿ ಎಂದು ಆಶಿಸುತ್ತೇನೆ. ನೀವೂ ಓದಿ ಹಾರೈಸಿ.
ಒಳಿತಾಗಲಿ ರಮೇಶ್ ಸರ್.
ಇಂತಿ ನಿಮ್ಮವನು
ಗಣಪತಿ ಹೆಗಡೆ
ದಾಂಡೇಲಿ.