ಮುಂಬರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಲಿಗ್ರಾಮದಲ್ಲಿ ನಡೆಸಲು ಯೋಜಿಸಿರುವುದಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆಗೋಪಾಲ್ ನುಡಿದರು.
ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ನೂತನ ಅಧ್ಯಕ್ಷರಾದ ಮಧುಚಂದ್ರ ಅವರಿಗೆ ಕನ್ನಡ ಬಾವುಟವನ್ನು ಹಸ್ತಾಂತರಿಸುವ ಮೂಲಕ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿ ಮಾತನಾಡುತ್ತಿದ್ದ ಅವರು ನೂತನ ತಾಲ್ಲೂಕಾದ ಸಾಲಿಗ್ರಾಮವು ಇತಿಹಾಸದ ಕಾಲದಿಂದಲೂ ಆಧ್ಯಾತ್ಮಿಕ ಇತಿಹಾಸ ಹೊಂದಿದೆ.
ಜಾತ್ಯತೀತ ಹಾಗೂ ಸಮಾಜಮುಖಿ ಚಿಂತನೆ ಇಲ್ಲಿಯ ಜನತೆ ಹೊಂದಿದ್ದಾರೆ. ನೂತನ ತಾಲ್ಲೂಕು ಕೇಂದ್ರವಾದ ಸಾಲಿಗ್ರಾಮದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಸಾಹಿತ್ಯ ಚಿಂತನೆಗಳನ್ನು ಪಸರಿಸುವ ಉದ್ದೇಶ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ ಎಂದವರು ನುಡಿದರು.
ನೂತನ ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ ರಾ.ಮಹೇಶ್ ಅವರು ಮಾತನಾಡಿ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ಘಟಕಗಳು ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಬೇಕು. ಕೆ.ಆರ್.ನಗರದ ಹಳೆಎಡತೊರೆಯ ಶ್ರೀ ಅರ್ಕೇಶ್ವರ ದೇವಾಲಯದ ಆವರಣ, ಕಪ್ಪಡಿ ದೇವಾಲಯದ ಆವರಣ, ಚುಂಚನಕಟ್ಟೆ ದೇವಾಲಯದ ಆವರಣ, ಸಾಲಿಗ್ರಾಮದ ಶ್ರೀ ಯೋಗಾನರಸಿಂಹ ದೇವಾಲಯದ ಆವರಣಗಳಲ್ಲಿ ಪ್ರತಿ ತಿಂಗಳೂ ಸಾಹಿತ್ಯ ಕಾರ್ಯಕ್ರಮಗಳನ್ನು ಹಮಿಕೊಳ್ಳಬೇಕೆಂದು ಕರೆ ನೀಡಿದರು. ಇಂತಹ ಕಾರ್ಯಕ್ರಮಗಳಿಗೆ ಎಂದೆಂದಿಗು ತಮ್ಮ ಸಹಕಾರವಿದೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡು – ನುಡಿ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾ್ ಡಾ.ಭೇರ್ಯ ರಾಮಕುಮಾರ್, ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಜೇಶ್,ಸಾಹಿತಿಗಳಾದ ಶ್ರೀಮತಿ ಸಮತಾ, ಪ್ರಕಾಶಕರಾದ ಸೃಷ್ಟಿ ನಾಗೇಶ್, ನಿವೃತ್ತ ಪ್ರಾಧ್ಯಾಪಕ ಬಸವಂತಪ್ಪ ಗುದಗುತ್ತಿ, ಪ್ರಾಧ್ಯಾಪಕರಾದ ಶೇಖರ್ ಹೊಡೆನೂರ್ ಮೊದಲಾದವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಧುಚಂದ್ರ, ಕೆ.ಆರ್.ನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿಂಡಿಮ ಶಂಕರ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ,ಎಂ.ಚಂದ್ರಶೇಖರ್, ಮಾನಸ, ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಸಾಲಿಗ್ರಾಮದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.